ಬಳ್ಳಾರಿ ನಗರವು ಕುಡಿಯುವ ನೀರು, ಒಳಚರಂಡಿ ಹಾಗೂ ರಸ್ತೆಗಳು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸಿಪಿಐಎಂನ ಸೋಮಶೇಖರ ಒತ್ತಾಯಿಸಿದರು.
ಬಳ್ಳಾರಿ ನಾಗರಿಕ ಹೋರಾಟ ಸಮಿತಿ ವತಿಯಿಂದ ನಗರದ ಮರ್ಚೆಟ್ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಕಳೆದ ಎರಡೂವರೆ ದಶಕಗಳಲ್ಲಿ ಬಳ್ಳಾರಿ ನಗರವು ನಾಲ್ಕು ದಿಕ್ಕುಗಳಲ್ಲಿ ಅತ್ಯಧಿಕವಾಗಿ ವಿಸ್ತರಿಸಿದೆ. ಜನಸಂಖ್ಯೆ ಹೆಚ್ಚಿ ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದೆ. ನಗರದ ಸುತ್ತಲೂ ಅನೇಕ ಸಣ್ಣ ಕೈಗಾರಿಕಾ ಘಟಕಗಳು ಹಾಗೂ ಹತ್ತಿರದ ತೋರಣಗಲ್ಲು ಗ್ರಾಮದಲ್ಲಿ ಬೃಹತ್ ಜಿಂದಾಲ್ ಉಕ್ಕಿನ ಕಾರ್ಖಾನೆ, ಹಾಗೂ ಕುಡತಿನಿ ಹತ್ತಿರ ಬೃಹತ್ ಕೆಪಿಟಿಸಿಎಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಗೊಂಡಿದೆ. ಬಳ್ಳಾರಿ ಮತ್ತು ಸಂಡೂರು ತಾಲೂಕುಗಳಲ್ಲಿ ಗಣಿಗಾರಿಕೆ ಚಟುವಟಿಕೆ ಮೊದಲಿಗಿಂತ ಹೆಚ್ಚಾಗಿದೆ” ಎಂದು ತಿಳಿಸಿದರು.
ಇವುಗಳ ಪರಿಣಾಮವಾಗಿ ಸರ್ಕಾರದ ಹಾಗೂ ಮಹಾನಗರ ಪಾಲಿಕೆಯ ಆದಾಯವು ಗಣನೀಯವಾಗಿ ಹೆಚ್ಚಿದೆ. ಆದರೆ ಈಗಾಗಲೇ ಆಗಬೇಕಾಗಿದ್ದ ವರ್ತುಲ ರಸ್ತೆ ಇಲ್ಲಿಯವರೆಗೂ ಆಗಿಲ್ಲ. ನಗರದಲ್ಲಿ ಕಾರುಗಳ ಹಾಗೂ ದ್ವಿಚಕ್ರ ವಾಹನಗಳ ಮತ್ತು ಇತರೇ ವಾಹನಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಿದ್ದು, ದಿನಂಪ್ರತಿ ಸಾವಿರಾರು ಭಾರಿ ವಾಹನಗಳು ನಗರದ ಮುಖಾಂತರ ಚಲಿಸುವುದರಿಂದ ಸಾರ್ವಜನಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಹೊರ ವರ್ತುಲ ರಸ್ತೆಯನ್ನು ನಿರ್ಮಿಸಿ ಬಳ್ಳಾರಿ ನಗರದ ಸಾರ್ವಜನಿಕರಿಗೆ ಟ್ರಾಫಿಕ್ ತೊಂದರೆಯಿಂದ ಮುಕ್ತಗೊಳಿಸಬೇಕು” ಆಗ್ರಹಿಸಿದ್ದಾರೆ.
ನಗರದ ಮುಖ್ಯ ಹಾಗೂ ಅಡ್ಡ ರಸ್ತೆಗಳು ಕಳಪೆ ಮಟ್ಟದ ಕಾಮಗಾರಿಯಿಂದ ಹಾಳಾಗಿವೆ. ಅನೇಕ ರಸ್ತೆಗಳ ತುಂಬಾ ಕುಣಿಗಳು ಅವೈಜ್ಞಾನಿಕ ವೇಗ ತಡೆಗಳ ಪರಿಣಾಮವಾಗಿ, ವಾಹನ ಚಾಲಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅನೇಕ ಸ್ಥಳಗಳಲ್ಲಿ ಆಗಾಗ್ಗೆ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಬರುತ್ತದೆ. ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ಸಾರ್ವಜನಿಕರು ಕಳವಳಪಡುವಂತಾಗಿದೆ. ನಗರದಲ್ಲಿ ಅನವಶ್ಯಕವಾಗಿ ರಾಯಲ್ ಸರ್ಕಲ್ ಹೊಡೆದು ಹಾಕಿ ಅವೈಜ್ಞಾನಿಕವಾಗಿ 7 ಕೋಟಿ ರೂಪಾಯಿ ಖರ್ಚು ಮಾಡಿ ಟ್ರಾಫಿಕ್ ಸುಗಮ ಸಂಚಾರಕ್ಕೆ ಬದಲಾಗಿ ಸಮಸ್ಯೆ ಉಂಟು ಮಾಡಲಾಗಿದೆ ಎಂದು ದೂರಿದರು.

ಎಸ್.ಪಿ ಸರ್ಕಲ್ನಲ್ಲಿಯೂ ಇದೇ ರೀತಿಯಾಗಿ ಮೊದಲಿದ್ದ ಸರ್ಕಲ್ಗಳನ್ನು ಹೊಡೆದುಹಾಕಿ ಅನವಶ್ಯಕವಾಗಿ ದುಂದುವೆಚ್ಚ ಮಾಡಿ ಸರ್ಕಲ್ ಮಾಡಲಾಗುತ್ತಿದೆ. ಈ ಎರಡೂ ಸರ್ಕಲ್ಗಳ ಅವಶ್ಯಕತೆ ಇತ್ತೇ? ಇಂತಹ ಅವೈಜ್ಞಾನಿಕ ಸರ್ಕಲ್ಗಳು ಯಾಕೆ? ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆಗೆ 160 ಕೋಟಿಗಿಂತಲೂ ಅಧಿಕ ಹಣ ವೆಚ್ಚ ಮಾಡಲಾಗಿದೆ. ಈ ಯೋಜನೆ ಕೈಗೊಂಡು ದಶಕ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಸಂಪೂರ್ಣ ವಿಫಲವೆನ್ನುವುದೇ ನಗರದ ಸಾರ್ವಜನಿಕರು ಇದರಿಂದ ತುಂಬಾ ತೊಂದರೆಗೆ ಒಳಗಾಗಿದ್ದಾರೆ ಆದಷ್ಟು ಶೀಘ್ರದಲ್ಲಿ ಸ್ಥಳೀಯ ಮತ್ತು ಜಿಲ್ಲಾಡಳಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ; ಸಂಪೂರ್ಣ ಅಭಿವೃದ್ಧಿಗೆ ನಾನು ಸಿದ್ದ: ಸಿಎಂ ಸಿದ್ದರಾಮಯ್ಯ
ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾದ ಆರ್.ಸೋಮಶೇಖರ್ ಗೌಡ, ನಿವೃತ್ತ ಉಪನ್ಯಾಸಕರು ನರಸಣ್ಣ, ನಿವೃತ್ತ ಪಿಡಬ್ಲ್ಯೂಡಿ ಇಂಜಿನೀಯರ್ ಮುರ್ತುಜಾಸಾಬ್, ನಿವೃತ್ತ ಶಿಕ್ಷಕರು ನಾಗರತ್ನಾ, ಶಾಂತ, ಅಂತೋಣಿ, ಸುರೇಶ್, ಶಾಂತಿ ಹಾಗೂ ಇತರರು.
