“ಗುಂಪು ಘರ್ಷಣೆ, ಅಧಿಕಾರಿಗಳ ಮೇಲೆ ಹಲ್ಲೆ, ಕೋಮು ಪ್ರಚೋದನಕಾರಿ ಭಾಷಣ ಸೇರಿದಂತೆ ಶಾಸಕ ಹರೀಶ್ ಪೂಂಜ ಮೇಲೆ 9 ಪ್ರಕರಣಗಳಿವೆ. ಕೋಮು ದ್ವೇಷದ ಮೂಲಕ ಶಾಂತಿ ಕದಡುವ ಅವರ ಮೇಲಿನ ಪ್ರಕರಣಗಳು ಗಂಭೀರವಾಗಿದೆ. ಅವರನ್ನು ರೌಡಿಶೀಟರ್ ಎಂದು ಪರಿಗಣಿಸಿ ಜಿಲ್ಲೆಯಿಂದ ಗಡಿಪಾರು ಮಾಡಿಸಬೇಕು” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಹರೀಶ್ ಪೂಂಜ ಜಿಲ್ಲೆಯ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಸಾವಿನ ಮನೆಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಫರಂಗಿಪೇಟೆಯಲ್ಲಿ ಬಾಲಕ ನಾಪತ್ತೆಯಾದಾಗ, ತೆಕ್ಕಾರು ದೇವಸ್ಥಾನದ ಧಾರ್ಮಿಕ ವೇದಿಕೆಯಲ್ಲಿ ದ್ವೇಷ ಭಾಷಣದ ಮೂಲಕ ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.
“ತೆಕ್ಕಾರಿನ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ವಾಹನ ನಿಲುಗಡೆ, ರಸ್ತೆ, ವೇದಿಕೆಗೆ ಅಲ್ಲಿನ ಮುಸ್ಲಿಮರು ಜಾಗ ನೀಡಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯವರು ಮುಸ್ಲಿಮರ ಮನೆಗೆ ಹೋಗಿ ಆಮಂತ್ರಣ ನೀಡಿದ್ದರಿಂದ, ದೇವಸ್ಥಾನದ ಕೆಲಸಗಳಲ್ಲಿ ಒಟ್ಟಾಗಿ ಇದ್ದುದರಿಂದ ಅವರು ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಿದ್ದರು. ಸಾಮರಸ್ಯಕ್ಕೆ ಹೆಸರಾಗಿದ್ದ ಆ ಊರಿನಲ್ಲಿ ಮನೆಗೆ ಬಂದ ಅತಿಥಿಗಳ ಬಗ್ಗೆ ಕೋಮು ಪ್ರಚೋದಿತ ಮಾತು ಆಡಿರುವುದು ದುರಂತ” ಎಂದರು.
ಇದನ್ನು ಓದಿದ್ದೀರಾ? ನೈಜ ಸಮಸ್ಯೆ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಮೋದಿ ಬಳಸುತ್ತಿರುವ ಐದು ಆಸನಗಳು
“ಶಾಸಕ ಹರೀಶ್ ಪೂಂಜಾ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕುಟುಂಬವನ್ನು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಅವಹೇಳನ ಮಾಡಿರುವುದು ಸರಿಯಲ್ಲ. ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿಯಾದರೆ ಶಾಸಕರ ದ್ವೇಷ ಕಾರುವ ಚಾಳಿಯಿಂದಾಗಿ ಬೆಳ್ತಂಗಡಿಯ ಅಭಿವೃದ್ಧಿ ಕುಂಠಿತವಾಗಿದೆ. ತಾಲೂಕಿನಲ್ಲಿ ಶಾಂತಿ ಕದಡಿ ಯುವ ಮನಸ್ಸನ್ನು ಪ್ರಚೋದಿಸಿ ಅಸ್ತಿತ್ವ ಉಳಿಸುವ ಕಾರ್ಯ ಮಾಡಬಹುದು ಎಂದುಕೊಂಡಿರುವ ಅವರಿಗೆ ತಾಲೂಕಿನ ಜನತೆ ಅವಕಾಶ ನೀಡುವುದಿಲ್ಲ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶಿಪಟ್ಟ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಪ್ರಮುಖರಾದ ಶೇಖರ ಕುಕ್ಕೇಡಿ, ಸಂತೋಷ್ ಕುಮಾರ್, ಸೆಬಾಸ್ಟಿಯನ್, ಹನೀಫ್, ಹಕೀಂ ಕೊಕ್ಕಡ, ಅಜರ್ ಭಾಗವಹಿಸಿದ್ದರು.