ಗೂಗಲ್ನಲ್ಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗಬಹುದು.. ಆದರೆ ಕೈಯಲ್ಲಿ ಪುಸ್ತಕ ಹಿಡಿದು ಓದುವುದರಲ್ಲಿ ಸಿಗುವ ಪರಿಪೂರ್ಣ ಅನುಭವ, ಮಾಹಿತಿ, ಜ್ಞಾನವನ್ನು ಗೂಗಲ್ನಿಂದ ನೀಡಲು ಸಾಧ್ಯವಿಲ್ಲ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ವೀರಲೋಕ ಪ್ರಕಾಶನ ನಿನ್ನೆ (ಮಾ.23) ಹಮ್ಮಿಕೊಂಡಿದ್ದ ʼಸಾಹಿತ್ಯ ಯುಗಾದಿ-2025ʼ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪುಸ್ತಕೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಹಾಗೂ ಬಹುಮುಖ್ಯ ಪಾತ್ರ ವಹಿಸುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅಂಗೈಯಲ್ಲಿ ಪುಸ್ತಕ ಹಿಡಿದು ಓದುವ ಅನುಭವ ಬೇರಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಜ್ಞಾನ ವಿಸ್ತರಣೆಗೆ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಪುಸ್ತಕಗಳು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು” ಎಂದರು.
ಸಾಹಿತಿ ಬಸವರಾಜ ಸಬರದ ಮಾತನಾಡಿ, “ಪುಸ್ತಕೋದ್ಯಮದ ಬೆಳವಣಿಗೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯು ಪೂರಕವಾಗಿತ್ತು. ಆದರೆ, ಈ ಯೋಜನೆಯಡಿ 2021ರ ಪುಸ್ತಕಳ ಖರೀದಿ ಪ್ರಕ್ರಿಯೆಯೇ ನಡೆದಿಲ್ಲ. 2020ರಲ್ಲಿ ಖರೀದಿಸಿರುವ ಪುಸ್ತಕಗಳಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಪುಸ್ತಕಗಳ ಕುರಿತ ಸರ್ಕಾರದ ಈ ನಡೆ ಖಂಡನೀಯ. ಪ್ರಕಾಶಕರ ಉಳಿವಿಗೆ ಆಧಾರವಾಗಿದ್ದ ಏಕಗವಾಕ್ಷಿ ಯೋಜನೆಯನ್ನು ಸರ್ಕಾರ ಪುನಃ ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಮಾತನಾಡಿ, “ಪುಸ್ತಕ ಬಿಡುಗಡೆ ಕಾರ್ಯಕ್ರಮಗಳೆಂದರೆ ಹೆಚ್ಚಿನ ಜನ ಸೇರುವುದಿಲ್ಲ ಎನ್ನುವ ಭಾವನೆ ಇದೆ. ಸಾವಿರಾರು ಜನರನ್ನು ಸೇರಿಸುವುದರ ಜತೆಗೆ ನವ ಓದುಗರನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಬೇಕೆನ್ನುವ ನಮ್ಮ ಕನಸು ಈ ಸಮಾರಂಭದ ಮೂಲಕ ಈಡೇರಿದೆ” ಎಂದರು.
ಇದನ್ನೂ ಓದಿ: ಬೆಂಗಳೂರು | ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 2 ವರ್ಷದ ಮಗು ಸೇರಿ ಇಬ್ಬರು ಸಾವು
ಕಾರ್ಯಕ್ರಮದಲ್ಲಿ ಅಜಿತ್ ಕಾರಂತ್, ರಾಧಾಕೃಷ್ಣ ಕಲ್ಚಾರ್ ಅವರ ತಂಡ, ಸಾಹಿತಿ ಬೈರಮಂಗಲ ರಾಮೇಗೌಡ, ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.