ಯುವಜನ ಆಯೋಗ ರಚನೆ, ಯುವಜನರ ಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು, ಸಂವಾದ ಸಹಯೋಗದಲ್ಲಿ ಬೆಂಗಳೂರಿನ ಗಾಂಧಿಭವನದಲ್ಲಿ ನಡೆಸಲಾದ ಯುವಾಧಿವೇಶನ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ವಿವಿಧ ವಿಚಾರಗಳನ್ನು ಮಂಡಿಸಿದ ಯುವಜನರು, ಯುವಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರ ಅಗತ್ಯತೆ, ಸ್ವಚ್ಚ ಶೌಚಾಲಯಕ್ಕೆ ಆಗ್ರಹ, ನಿರುದ್ಯೋಗ ಸಮಸ್ಯೆ ನಿವಾರಣೆ, ಲಿಂಗ ಸಮಾನತೆ, ಲೈಂಗಿಕ ಶಿಕ್ಷಣದ ಮಹತ್ವ ಸೇರಿದಂತೆ ಇನ್ನೂ ಹಲವು ವಿಚಾರಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಸಿ.ಜಿ ಲಕ್ಷ್ಮೀಪತಿ, “ನಮ್ಮ ಶಿಕ್ಷಣ ವ್ಯವಸ್ಥೆ ವಿಕಸನ ಹೊಂದುವ ಅಗತ್ಯ ಇದೆ. ಯುವಜನರ ಮಾತುಗಳಿಗೆ ಆದ್ಯತೆ ನೀಡಬೇಕಾಗಿದೆ. ಇಂದು ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಆದರೆ ಅದು ಕೇವಲ ಒಂದು ಕಡೆಗೆ ಸೀಮಿತವಾಗಬಾರದು, ವಿದ್ಯಾರ್ಥಿಗಳು ಕೂಡ ಶಿಕ್ಷಕರನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಬರಬೇಕಾಗಿದೆ. ನಮ್ಮಲ್ಲಿನ ಹಲವು ಯುವ ಜನರಿಗೆ ಆಪ್ತ ಸಮಾಲೋಚನೆಯ ಅಗತ್ಯ ಪ್ರತೀ ಶಾಲಾ ಕಾಲೇಜಿನಲ್ಲೂ ಇದೆ. ಇದಕ್ಕೆ ಪರಿಹಾರ ಯುವಜನರ ಆಯೋಗ ರಚನೆಯಾದಾಗ ಮಾತ್ರ ಸಾಧ್ಯ” ಎಂದು ಹೇಳಿದರು.

ಇನ್ನು ಕಾರ್ಯಕ್ರಮದ ಕುರಿತು ಮಾತನಾಡಿದ ಸಾಹಿತಿ ಹಾಗೂ ರಂಗಭೂಮಿ ಕಲಾವಿದೆ ದು.ಸರಸ್ವತಿ, ” ಯುವಜನರು ತಮ್ಮೊಳಗೆ ಒಂದು ಪ್ರತಿಜ್ಞೆಯನ್ನು ಮಾಡಿಕೊಳ್ಳಬೇಕು, ತಾವು ಎಂತಹದ್ದೇ ಪರಿಸ್ಥಿಯಲ್ಲೂ ಕುಗ್ಗುವುದಿಲ್ಲ ಎಂಬುವುದೇ ಆ ಪ್ರತಿಜ್ಞೆ. ಆ ಮೂಲಕ ಎಂತಹದ್ದೇ ಸಂದಿಗ್ಧ ಪರಿಸ್ಥಿತಿ ಬಂದರೂ ಯುವ ಜನರು ಅದನ್ನು ಸುಲಭವಾಗಿ ಎದುರಿಸುತ್ತಾರೆ, ಯುವಜನರಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ ಅದಕ್ಕೆ ಸರಿಯಾದ ದಾರಿ ತೋರಿಸುವ ಜವಾಬ್ದಾರಿ ಈ ಸಮಾಜಕ್ಕೆ ಇದೆ” ಎಂದು ಹೇಳಿದರು.
ಇನ್ನು ಇದೇ ವೇಳೆ ಮಾತನಾಡಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಆರ್, “ಯುವಜನರ ಮುಂದೆ ಸಾಕಷ್ಟು ಸವಾಲುಗಳು ಇರುವುದು ನಿಜ. ಆದರೆ ಅದಕ್ಕೆ ಹಲವು ಪರಿಹಾರಗಳು ಕೂಡ ಇವೆ. ಆ ಪರಿಹಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲರ ಶ್ರಮವೂ ಅಗತ್ಯವಾಗಿದೆ. ಸಮಾಜದಲ್ಲಿ ಯುವ ಜನರಿಗೆ ತಮ್ಮದೇ ಆದ ಜವಾಬ್ದಾರಿಗಳು ಇವೆ ಅದೇ ರೀತಿ ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯ ಹೆಚ್ಚಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ, “ಇಂದು ಯುವಜನರ ಹಕ್ಕುಗಳ ರಕ್ಷಣೆ ಅತಿ ಮುಖ್ಯವಾಗಿದೆ. ಹೋರಾಟ, ಅಭಿವ್ಯಕ್ತಿ ಮತ್ತು ಸಮಾಜದ ಮುಖ್ಯ ವಾಹಿನಿಯಲ್ಲಿ ಯುವಜನರ ಪಾತ್ರ ಅತ್ಯಗತ್ಯವಾಗಿದೆ. ಇದಕ್ಕೆ ನಮ್ಮ ಸುತ್ತಮುತ್ತಲಿನ ಸಮಾಜ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು. ಯುವಜನರ ಅಭಿಪ್ರಾಯಕ್ಕೆ ಆದ್ಯತೆ ನೀಡುವುದು ಕೂಡ ಅಗತ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರದಲ್ಲಿ 2 ಅಧಿವೇಶನಗಳನ್ನು ನಡೆಸಲಾಗಿದ್ದು, ಇದರಲ್ಲಿ ಮೊದಲ ಅಧಿವೇಶನದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಜಿ ಲಕ್ಷ್ಮೀಪತಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ರಂಗಭೂಮಿ ಕಲಾವಿದೆ ಡಾ. ದು. ಸರಸ್ವತಿ, ಸಹಯಾನ ಸಂವಾದದ ಕೋ ಪ್ರೋಗ್ರಾಂ ಲೀಡ್ ಇಳಂಗೋ ಸ್ಟಾನಿಸ್ಲಾಸ್, ಬೆಂಗಳೂರು ಯುವ ಸಂಪನ್ಮೂಲ ಕೇಂದ್ರದ ಪ್ರೋಗ್ರಾಂ ಅಸೋಸಿಯೇಟ್ ಮಿನಿಮೋಳ್ ನೇತೃತ್ವದಲ್ಲಿ ನಡೆಸಲಾಯಿತು.
ಇದನ್ನು ಓದಿದ್ದೀರಾ? ಹಾಸನ | ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್; ಓಮ್ನಿ ಚಾಲಕ ನಿಧಾನಕ್ಕೆ ಚಲಿಸಿದ್ದನ್ನೇ ತಪ್ಪಾಗಿ ಗ್ರಹಿಸಿದ್ದ ಬಾಲಕಿ!
ಎರಡನೇ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಅರ್. ಐ.ಪಿ.ಎಸ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ, ವಕೀಲರಾದ ಮೃದುಲಾ ಹಾಗೂ ಕೋಲಾರ ಯುವ ಸಂಪನ್ಮೂಲ ಕೇಂದ್ರದ ಪ್ರೋಗ್ರಾಂ ಅಸೋಸಿಯೇಟ್ ಆದ ಶಬೀನಾ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಾದದ ಎಲ್ಲ ಸಹೋದ್ಯೋಗಿಗಳು ಭಾಗವಹಿಸಿದ್ದರು. ಅಡವಿ ಆರ್ಟ್ಸ್ ಕಲೆಕ್ಟಿವ್ನ ತಮಟೆ ಸದ್ದಿಗೆ ದನಿಯಾದರು.