“ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೊದಲ ಬಾರಿಗೆ ಬಿಬಿಎಂಪಿ ದಕ್ಷಿಣ ವಲಯದ ಪ್ರತಿ ರಸ್ತೆಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ” ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಹೇಳಿದರು.
“ಸಾರ್ವಜನಿಕರು ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ಕ್ಯೂ ಆರ್ ಕೋಡ್ ಮುಖಾಂತರ ಪಡೆಯಬಹುದು. ರಸ್ತೆಯಲ್ಲಿ ಗುಂಡಿಗಳಿದ್ದರೆ, ಪಾದಚಾರಿ ಮಾರ್ಗ ಸಮಸ್ಯೆ, ಶಿಥಿಲ ಮರಗಳ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳಿದ್ದರೆ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಹೇಳಬಹುದು ಹಾಗೂ ಅಧಿಕಾರಿಗಳ ವಿವರವನ್ನು ಪಡೆಯಬಹುದು” ಎಂದರು.
“ಯಾವುದೇ ಅಧಿಕಾರಿಗಳು ವರ್ಗಾವಣೆಗೊಂಡಿದ್ದರೆ ಸಂಬಂಧಪಟ್ಟ ವಿಭಾಗದ ಹೊಸ ಅಧಿಕಾರಿಗಳ ವಿವರ ಪಡೆಯಬಹುದಾದ ವ್ಯವಸ್ಥೆಯನ್ನು ಈ ಕ್ಯೂ ಆರ್ ಕೋಡ್ ಹೊಂದಿದೆ “ ಎಂದರು.
“ಪ್ರತಿ ವಾರ್ಡವಾರು ಘನತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡಲಾಗುತ್ತಿದೆ. ಪೌರಕಾರ್ಮಿಕರು ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸಹ ತೆರವುಗೊಳಿಸುತ್ತಿದ್ದಾರೆ. ಜೆ.ಪಿನಗರದಲ್ಲಿರುವ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ವಾಣಿಜ್ಯ ವಹಿವಾಟು ಹೆಚ್ಚಾಗಿದೆ. ಇದರಿಂದ ತ್ಯಾಜ್ಯ ಪ್ರಮಾಣ ಹೆಚ್ಚಾಗಿದೆ. ಈ ಪರಿಣಾಮ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ” ಎಂದು ಹೇಳಿದರು.
“ಪಾಲಿಕೆ ವತಿಯಿಂದ ಸುಮಾರು ವರ್ಷದಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕೆಲ ನಾಗರಿಕರು ಮಾರೆನಹಳ್ಳಿಯ ವಾಡ್೯ ರಸ್ತೆಯ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಈ ಸಂಬಂಧ ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ಬಲ್ಕ್ ಜನರೇಟರ್ ಅಡಿಯಲ್ಲಿ ಬರುವುದರಿಂದ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅವರೆ ಸಂಗ್ರಹಿಸಿ ತೆರವು ಮಾಡಬೇಕು. ಅದರ ಬದಲಾಗಿ ಬಲ್ಕ್ ಜನರೇಟರ್ ಅಡಿಯಲ್ಲಿ ಗುರುತಿಸಿಕೊಳ್ಳದೆ ವಾಡ್೯ವಾರು ಇರುವ ಘನತ್ಯಾಜ್ಯ ಘಟಕಗಳಿಗೆ ಹಾಗೂ ರಸ್ತೆಯ ಮೇಲೆ ತ್ಯಾಜ್ಯವನ್ನು ಹಾಕುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ತಕ್ಷಣವೇ ಬಲ್ಕ್ ಜನರೇಟರ್ ಅಡಿಯಲ್ಲಿ ಸದರಿ ಹೋಟೆಲ್ ರೆಸ್ಟೋರೆಂಟ್ಗಳನ್ನು ತರಬೇಕು” ಎಂದರು.
“ಬಲ್ಕ್ ಜನರೇಟರ್ ಅಡಿಯಲ್ಲಿ ಗುರುತಿಸಿಕೊಳ್ಳದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ನೇರವಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಮೇಲೆ ನೋಟಿಸ್ ನೀಡಿ ದಂಡ ವಿಧಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಧಾನಪರಿಷತ್ತಿನ ಕಲಾಪಗಳ ನ್ಯೂನತೆ ಸರಿಪಡಿಸಲು ಮುಖ್ಯಮಂತ್ರಿ ಚಂದ್ರು ಮನವಿ
ಸ್ಥಳೀಯ ಶಾಸಕ ಸಿ.ಕೆ ರಾಮಮೂರ್ತಿ ಅವರು ಮಾತನಾಡಿ, “ನಾಗರಿಕರ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಲಾಗುವುದು. ಇನ್ನು ಮುಂದೆ ವಾರ್ಡ್ವಾರು ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಘನತ್ಯಾಜ್ಯ ಸಮಸ್ಯೆಯನ್ನು ನಿವಾರಿಸಲು ಕಸ ಮುಕ್ತ ಕಾರ್ಯಕ್ರಮ ನಡೆಸಲಾಗುವುದು. ಒಟ್ಟಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಮಾದರಿ ಕ್ಷೇತ್ರ ಮಾಡಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಡಾ. ಕೆ.ಜಗದೀಶ್ ನಾಯ್ಕ್, ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಸಂಚಾರಿ ಪೊಲೀಸ್ ವಿಭಾಗದ ಅಧಿಕಾರಿಗಳು, ಸ್ಥಳೀಯ ನಾಗರಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.