- ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಲು ಓಡಿಶಾದಲ್ಲಿ ಹೈ ಅಲರ್ಟ್
- ಸಮುದ್ರ ತೀರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ 2023ರ ಮೊದಲ ಚಂಡಮಾರುತ ‘ಮೋಚಾ’ ಬೀಸುವ ಸೂಚನೆಗಳಿದ್ದು, ಮೇ 7ರಿಂದ 11 ರವೆರೆಗೆ ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ದೇಶದ ನಾನಾ ಕಡೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಮೋಚಾ ಚಂಡಮಾರುತವೂ 40-50 ಕೀ.ಮೀ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ. ಭಾರತದ ಹಲವು ಕರಾವಳಿ ಭಾಗದಲ್ಲಿ ಈ ಚಂಡಮಾರುತ ಪರಿಣಾಮ ಬೀರಲಿದೆ. ಈ ಹಿನ್ನೆಲೆ, ಮೀನುಗಾರರು, ಸಣ್ಣ ದೋಣಿ, ಹಡಗಿನ ಮೂಲಕ ಮೀನು ಹಿಡಿಯುವ ಕೆಲಸಗಾರರು ದಕ್ಷಿಣ ಬಂಗಾಳ ಕೊಲ್ಲಿ ಸಮುದ್ರ ತೀರಕ್ಕಿಳಿಯದಂತೆ ಇಲಾಖೆ ಎಚ್ಚರಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಲಿದೆ. ಮೇ 6ರಂದು ಮೋಚಾ ಚಂಡಮಾರುತ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗುವ ಸಾಧ್ಯತೆ ಇದೆ. ಉತ್ತರ ಬಂಗಾಳ ಕೊಲ್ಲಿಯಿಂದ ಕೇಂದ್ರ ಬಂಗಾಳ ಕೊಲ್ಲಿ ಕಡೆ ಚಲಿಸುವ ವೇಳೆ ಈ ಚಂಡಮಾರುತ ತೀವ್ರಗೊಳ್ಳಲಿದೆ ಎಂದಿದೆ.
ಓಡಿಶಾದಲ್ಲಿ ಪ್ರಾಣ ಹಾನಿ ತಪ್ಪಿಸಲು ಹೈ ಅಲರ್ಟ್
ಮೇ 7ರಿಂದ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಆಳ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿರುವವರು ಸುರಕ್ಷಿತವಾಗಿ ಹಿಂತಿರುಗುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಒಡಿಶಾದ ಕರಾವಳಿ ತೀರದಲ್ಲಿ ಪ್ರಾಣ ಹಾನಿ ತಪ್ಪಿಸಲು 18 ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದ 4 ವರ್ಷಗಳಲ್ಲಿ ಮೇ ತಿಂಗಳಲ್ಲಿ ಒಡಿಶಾ ನಾಲ್ಕು ಚಂಡಮಾರುತಗಳಿಗೆ ಸಾಕ್ಷಿಯಾಗಿದೆ.
ತಮಿಳುನಾಡಿನಲ್ಲಿ ಚಂಡಮಾರುತದಿಂದ ಅಧಿಕ ಮಳೆ ಬೀಳುವ ನಿರೀಕ್ಷೆಯಿರುವುದರಿಂದ ರಾಜ್ಯವನ್ನು ಅಲರ್ಟ್ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಚಂಡಮಾರುತ ಪೀಡಿತ ಜಿಲ್ಲೆಗಳನ್ನು ಅಲರ್ಟ್ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಇತರರು ಯಾವುದೇ ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಲು ಸನ್ನದ್ಧರಾಗಿದ್ದಾರೆ.
ಮೋಚಾ ಚಂಡಮಾರುತದಿಂದಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಇವಿಎಂ ಮತಯಂತ್ರಗಳಿಗೆ ಪೂಜೆ-ಪ್ರಾರ್ಥನೆ ನಿಷೇಧಿಸಿ: ನೈಜ ಹೋರಾಟಗಾರರ ವೇದಿಕೆ ಒತ್ತಾಯ
ವರ್ಷದ ಮೊದಲ ಚಂಡಮಾರುತ
ಮೋಚಾ ಚಂಡಮಾರುತವೂ ವರ್ಷದ ಮೊದಲ ಚಂಡಮಾರುತವಾಗಿದೆ. ಕೆಂಪು ಸಮುದ್ರದ ತೀರದಲ್ಲಿರುವ ತನ್ನ ಬಂದರು ನಗರಗಳಲ್ಲಿ ಒಂದಾದ ‘ಮೋಚಾ’ ಹೆಸರನ್ನು ಯೆಮೆನ್ ಈ ಚಂಡಮಾರುತಕ್ಕೆ ಸೂಚಿಸಿದೆ.
ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ, “ಮೇ 6 ರಂದು ಚಂಡಮಾರುತ ಏಳುವ ಸಾಧ್ಯತೆಯಿದೆ. ಮೇ 8 ರಂದು ಕಡಿಮೆ ಒತ್ತಡದ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುತ್ತದೆ. ಮೇ 9 ರಂದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
“ಚಂಡಮಾರುತವು ಮಧ್ಯ ಬಂಗಾಳಕೊಲ್ಲಿಯತ್ತ ಚಲಿಸುವ ನಿರೀಕ್ಷೆಯಿದೆ. ಚಂಡಮಾರುತ ಏಳುವ ಮುಂಚಿತವಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಲಿದೆ. ಬಂಗಾಳ ಕೊಲ್ಲಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ” ಎಂದಿದ್ದಾರೆ.