- ಬೆತ್ತಲೆ ಪೆರೇಡ್ ನಡೆಸಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
- ಸಂಜಯ್ ಸಿಂಗ್ರನ್ನು ಸಂಪೂರ್ಣ ಅವಧಿಗೆ ಅಮಾನತು ಮಾಡಿರುವುದು ಸಂವಿಧಾನ ವಿರೋಧಿ ನಡೆ
ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದು, ಇದನ್ನು ಹತ್ತಿಕ್ಕುವಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಪೂರ್ಣ ವಿಫಲವಾಗಿದ್ದಾರೆ. ಹಾಗಾಗಿ, ಅವರು ಕೂಡಲೇ ರಾಷ್ಟ್ರದ ಜನತೆಯ ಮುಂದೆ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಆಗ್ರಹಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ, “ಮಣಿಪುರ ರಾಜ್ಯದಲ್ಲಿನ ವರ್ಗ ಸಂಘರ್ಷಗಳನ್ನು ಹತ್ತಿಕ್ಕುವ ಬದಲು ಕೇಂದ್ರ ಸರ್ಕಾರ ತಾನೇ ಖುದ್ದಾಗಿ ನಿಂತು ವೋಟ್ ರಾಜಕಾರಣಕ್ಕಾಗಿ ಹಿಂಸಾಚಾರಗಳಿಗೆ ಆಸ್ಪದ ನೀಡುತ್ತಿರುವ ದುರುಳ ನೀತಿಯನ್ನು ಖಂಡಿಸಲೇ ಬೇಕಾಗಿದೆ” ಎಂದರು.
“ಗೃಹ ಸಚಿವರು ಖುದ್ದಾಗಿ ಐದು ದಿವಸಗಳ ಕಾಲ ಮಣಿಪುರ ರಾಜ್ಯದಲ್ಲಿ ಮುಕ್ಕಾಂ ಹೂಡಿ ಬಂದಿದ್ದರೂ ಸಹ ಹಿಂಸಾಚಾರವನ್ನು ತಡೆಯಲು ಸಾಧ್ಯವಾಗಲಿಲ್ಲ. ಎರಡು ತಿಂಗಳುಗಳ ಹಿಂದೆ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆತ್ತಲೆ ಪೆರೇಡ್ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಪ್ರಕರಣವನ್ನು ಮುಚ್ಚಿ ಹಾಕುವ ಕೇಂದ್ರ ಸರ್ಕಾರದ ತಂತ್ರಗಾರಿಕೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು.
“ಈ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚಿಸದೆ ನಮ್ಮ ಪಕ್ಷದ ಸಂಸದ ಸಂಜಯ್ ಸಿಂಗ್ರನ್ನು ಸಂಪೂರ್ಣ ಅವಧಿಗೆ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆ. ಇಂದು ವಿಶ್ವದಲ್ಲಿ ಭಾರತವನ್ನು ತಲೆತಗ್ಗಿಸುವಂತಹ ಪರಿಸ್ಥಿತಿಗೆ ತಳ್ಳಿರುವ ನರೇಂದ್ರ ಮೋದಿಯವರು ಈ ಕೂಡಲೇ ರಾಷ್ಟ್ರದ ಜನತೆಯ ಮುಂದೆ ಕ್ಷಮೆಯಾಚಿಸಿ ರಾಜೀನಾಮೆ ಕೊಟ್ಟು ತೊಲಗಬೇಕು” ಎಂದು ಆಗ್ರಹಿಸಿದರು .
ಈ ಸುದ್ದಿ ಓದಿದ್ದೀರಾ? ಜುಲೈ 25ರ ರಾಜ್ಯದ ಜಲಾಶಯಗಳ ನೀರಿನ ಮಟ್ಟ : ವಿವರ ಇಲ್ಲಿದೆ
ಮಹಿಳಾ ಘಟಕದ ಅಧ್ಯಕ್ಷ ಕುಶಲಸ್ವಾಮಿ ಮಾತನಾಡಿ, “ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಅತ್ಯಾಚಾರವನ್ನು ಮಾಡಿ ಬೆತ್ತಲೆ ಮೆರವಣಿಗೆ ಮಾಡುವಂತಹ ಹೀನಾತಿ ಹೀನರಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ನಿಜಕ್ಕೂ ದೇಶದಿಂದ ತೊಲಗಬೇಕಾಗಿದೆ. ಕುಸ್ತಿಪಟು ಅತ್ಯಾಚಾರ ಪ್ರಕರಣದಲ್ಲಿ ಸಂಸದ ಬ್ರಿಜ್ ಭೂಷಣ್ ರಕ್ಷಣೆಗೆ ನಿಂತಿರುವ ಪ್ರೀತಿಯನ್ನು ಗಮನಿಸಿದರೆ ಕೇವಲ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿರುವ ಕೇಂದ್ರ ಸರ್ಕಾರ ಈಗ ಅತ್ಯಾಚಾರಿಗಳನ್ನು ಸಹ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವುದು ಈ ದೇಶದ ದುರಂತವೇ ಸರಿ. ಭಾರತ ಮಾತೆಯನ್ನು ಪೂಜಿಸುವಂತಹ ಸಂಸ್ಕೃತಿ ರಕ್ಷಕರು ಎಂದು ಪೋಸು ನೀಡುತ್ತಾ ಬಂದಿರುವ ಬಿಜೆಪಿಯ ನಿಜ ಬಣ್ಣ ದೇಶದ ಮುಂದೆ ಬೆತ್ತಲಾಗಿದೆ. ಮುಂದಿನ ದಿವಸಗಳಲ್ಲಿ ತಕ್ಕ ಪಾಠವನ್ನು ದೇಶದ ಜನ ಕಲಿಸುತ್ತಾರೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕ ವಿಜಯ ಶರ್ಮ, ಮಾಧ್ಯಮ ವಕ್ತಾರೆ ಉಷಾ ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.