ಭಾರತ ದೇಶದಲ್ಲಿಂದು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದೆ. ಬಡತನ, ಹಸಿವು, ಅಸ್ಪ್ರಶ್ಯತೆ, ಮತೀಯವಾದದ ಸಾಗಿರುವಂತಹ ಭಾರತವನ್ನು ಭಗತ್ ಸಿಂಗ್ ಬಯಸಿರಲಿಲ್ಲ. ಕೇಂದ್ರದಲ್ಲಿ ಆಳುವ ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ ಎಂದು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಕಿಡಿಕಾರಿದರು.
ಅವರು ಭಾನುವಾರ ಡಿವೈಎಫ್ಐ ಮಂಗಳೂರು ದ.ಕ ಜಿಲ್ಲಾ ಸಮಿತಿ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ ಭಾರತಕ್ಕಾಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ನಡೆದ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆ ಹಾಗೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡುತ್ತಾ ಇವತ್ತಿನ ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿ ಯುವಜನರನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ. ಶಿಕ್ಷಣ ಪಡೆದು ಹೊರ ಬರುತ್ತಿರುವ ಯುವಜನರಿಗೆ ಉದ್ಯೋಗವಿಲ್ಲ ಇರುವ ಉದ್ಯೋಗಳಿಗೆ ಭದ್ರತೆಯಿಲ್ಲ ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಕಡಿಮೆ ಆದಾಯಕ್ಕೆ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವೂ ಇಲ್ಲ ಈ ಬಗ್ಗೆ ಒಬ್ಬನೇ ಒಬ್ಬ ಶಾಸಕ ವಿಧಾನಸೌಧದ ಒಳಗೆ ಧ್ವನಿ ಎತ್ತುತ್ತಿಲ್ಲ .ಅದೇ ಶಾಸಕರೆಲ್ಲ ತಮ್ಮ ಸಂಬಳ ಹೆಚ್ಚಳಗೊಳಿಸಿ ಅವರ ಬದುಕನ್ನಷ್ಟೇ ಭದ್ರಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ, ಇಂದಿನ ಯುವತಲೆಮಾರಿಗೆ ಭಗತ್ ಸಿಂಗರ ಹೋರಾಟದ ಆಶಯಗಳನ್ನು ತಿಳಿಸುವ ಮತ್ತು ಅವರ ಕನಸಿನ ಭಾರತವನ್ನು ಕಟ್ಟುವ ಇತಿಹಾಸಗಳ ಕುರಿತು ತಿಳಿಸಬೇಕಾಗಿದೆ. ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಹೋರಾಟಗಳಿಗೆ ಅಣಿನೇರಿಸಬೇಕಾಗಿದೆ.
ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಪುನೀತ್ ಉರ್ವಸ್ಟೋರ್, ಮಾಧುರಿ ಬೋಳಾರ್ ಉಪಸ್ಥಿತರಿದ್ದರು.
ಈ ವೇಳೆ ಡಿವೈಎಫ್ಐ ಜಿಲ್ಲಾ ಮುಖಂಡರಾದ ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ, ರಾಜೇಶ್ ಉರ್ವಸ್ಟೋರ್, ಮನೋಜ್ ಉರ್ವಸ್ಟೋರ್, ಪ್ರದೀಪ್, ಧಿರಾಜ್ ಬಜಾಲ್, ಪ್ರಕಾಶ್ ಶೆಟ್ಟಿ ಬಜಾಲ್, ಭಾರತೀ ಬೋಳಾರ, ದಯಾನಂದ ಶೆಟ್ಟಿ, ಇಕ್ಬಾಲ್ ಉರ್ವಸ್ಟೋರ್ ಮುಂತಾದವರು ಉಪಸ್ಥಿತರಿದ್ದರು.

