ಹಾಂಗ್ಕಾಂಗ್ ವಿಶ್ವವಿದ್ಯಾಲಯ ಹಾಗೂ ಹಾಂಗ್ಕಾಂಗ್ ಸ್ಥಳೀಯ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಹಾಂಗ್ಕಾಂಗ್ನಲ್ಲಿ ಆಯೋಜಿಸಲಾಗಿದ್ದ ‘ಮಲ್ಟಿ-ಕಲ್ಚರಲ್ ಅಂಡ್ ಗ್ಲೋಬಲ್ ಡೈವರ್ಸಿಟಿ ಪ್ರಾಜೆಕ್ಟ್’ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಯಲ್ಲಿ ತುಮಕೂರಿನ ಪ್ರತಿಷ್ಠಿತ ಕಲಾಸಂಸ್ಥೆ ಸ್ವರವಿ ಆರ್ಟ್ಸ್ ಫೌಂಡೇಶನ್ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ, ಗಮನ ಸೆಳೆದಿದೆ.

ಹಾಂಗ್ಕಾಂಗ್ ವಿಶ್ವವಿದ್ಯಾಲಯದ ಪ್ರಸಿದ್ಧ ರೇಸನ್ ಹುವಾಂಗ್ ರಂಗಮಂದಿರದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮದಲ್ಲಿ, ಸ್ವರವಿ ತಂಡವು ಕರ್ನಾಟಕದ ಶಾಸ್ತ್ರೀಯ ಕಲಾ ಪ್ರಕಾರವಾದ ಭರತನಾಟ್ಯಕ್ಕೆ ವಿಶೇಷ ಒತ್ತು ನೀಡಿ, ಕಲೆಯ ಔನ್ನತ್ಯತೆ ಹಾಗೂ ವೈಶಿಷ್ಟ್ಯತೆಯನ್ನು ಪ್ರಪಂಚದ ಎದುರು ಪ್ರದರ್ಶಿಸಿತು. ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನದ ರೋಮಾಂಚಕ ಪ್ರಸ್ತುತಿಯೊಂದಿಗೆ ಅವರು ಪ್ರೇಕ್ಷಕರನ್ನು ಮತ್ತಷ್ಟು ಆಕರ್ಷಿಸಿದರು. ತಂಡವು ನೀಡಿದ ಎರಡೂವರೆ ಗಂಟೆಗಳ ಅತ್ಯುತ್ತಮ ಪ್ರದರ್ಶನದಲ್ಲಿ, ಸಂವಾದಕ ಭರತನಾಟ್ಯ ಹಾಗೂ ಜನಪದ ಕಾರ್ಯಾಗಾರಗಳು ಸಹ ಸೇರಿದ್ದವು. ಈ ಪ್ರದರ್ಶನಕ್ಕೆ ಕಲಾವಿದರಿಗೆ ಉತ್ತಮ ಬೆಂಬಲದ ಪ್ರತಿಕ್ರಿಯೆ ದೊರೆಯಿತು.

ಕಾರ್ಯಕ್ರಮವನ್ನು ತುಮಕೂರಿನ ಪ್ರಸಿದ್ಧ ಕಲಾವಿದೆ ವಿದುಷಿ ವರ್ಷ ರವಿಪ್ರಕಾಶ್ ನೇತೃತ್ವದಲ್ಲಿ ನಡೆಸಲಾಯಿತು. ಇವರೊಂದಿಗೆ ಪ್ರತಿಭಾನ್ವಿತ ಹೆಸರಾಂತ ಕಲಾವಿದೆಯರಾದ ಮೇಘನಾ ಬಾಲಾಜಿ ಮತ್ತು ಕಾಜಲ್ ಬಂಗೇರಾ ಅವರು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಚೈತನ್ಯವನ್ನು ಜಾಗತಿಕ ವೇದಿಕೆಗೆ ತರುವಲ್ಲಿ ಸಹಕರಿಸಿದರು.
ಇದನ್ನೂ ಓದಿ: ತುಮಕೂರು | ಖಾಸಗೀಕರಣ ಸಾಮಾಜಿಕ ಭದ್ರತೆ ಕಿತ್ತುಕೊಂಡಿದೆ : ಬಿ. ಸುರೇಶ್
ಕಾರ್ಯಕ್ರಮದಲ್ಲಿ ಭಾರತದ ಹಾಂಗ್ಕಾಂಗ್ ಕಾನ್ಸುಲೇಟ್ನ ಕೌನ್ಸುಲ್ ಸುರಭಿ ಗೋಯಲ್ ಪಾಲ್ಗೊಂಡು ತಂಡದ ಅಸಾಧಾರಣ ಪ್ರಸ್ತುತಿಯನ್ನು ಶ್ಲಾಘಿಸಿದರು. ಹಾಂಗ್ಕಾಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಾಸ್ಕಜ್, ಪ್ರೊ. ಕಿಮ್ ಮತ್ತು ಶ್ರೀ ನಕ್ಕಾ, ಕನ್ನಡ ಸಂಘದ ಅಧ್ಯಕ್ಷೆ ವಾಣಿ ರಾಮೇಶ್ ಬಾಬು, ಕಾರ್ಯದರ್ಶಿ ಡಾ. ಪ್ರದೀಪ್ ಉಪಸ್ಥಿತರಿದ್ದು, ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತುಮಕೂರು ಮತ್ತು ಬೆಂಗಳೂರಿನಲ್ಲಿ ಶಾಲೆಗಳನ್ನು ಹೊಂದಿರುವ ಸ್ವರವಿ ಆರ್ಟ್ಸ್ ಫೌಂಡೇಶನ್ ತನ್ನ ಕಲಾತ್ಮಕ ಶಿಸ್ತು, ತಾಂತ್ರಿಕ ಪರಿಣಿತಿ ಹಾಗೂ ನೃತ್ಯದ ಆಧ್ಯಾತ್ಮಿಕ ಅಂಶಗಳ ಮೂಲಕ ಕನ್ನಡದ ಸಾಂಸ್ಕೃತಿಕ ಪರಂಪರೆಯ ಪ್ರಭಾವವನ್ನು ಜಗತ್ತಿನಾದ್ಯಂತ ಹರಡುವ ಯೋಜನೆಯನ್ನು ಕೈಗೆತ್ತಿಕೊಂಡು ಮುನ್ನಡೆಯುತ್ತಿದೆ.
