ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಭೀಮಾ ಕೋರೆಗಾವ್ ವಿಜಯೋತ್ಸವದ ಹಿನ್ನೆಲೆ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಜಯ ಸ್ತಂಭ ಮೆರವಣಿಗೆ ಮಾಡಲಾಯಿತು.
ನಗರದ ಅಂಬೇಡ್ಕರ್ ಭವನದಿಂದ ಆರಂಭವಾದ ವಿಜಯ ಸ್ತಂಭದ ಮೆರವಣಿಗೆಯು ಅಂಬೇಡ್ಕರ್ ವೃತ್ತವನ್ನು ತಲುಪಿತು. ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಶಿಡ್ಲಘಟ್ಟ ವೃತ್ತ ತಲುಪಿದ ದಸಂಸ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ದಸಂಸ ಸಂಘಟನಾ ಸಂಚಾಲಕ ಸುಧಾ ವೆಂಕಟೇಶ್, ದಲಿತರ ಸ್ವಾಭಿಮಾನ ಮತ್ತು ಐತಿಹಾಸಿಕ ಅಸ್ಮಿತೆಯ ಪ್ರತೀಕಗಳಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಕೂಡ ಒಂದು. ಶಿವಾಜಿ ಮಹಾರಾಜರ ನಂತರ ಅಧಿಕಾರಕ್ಕೇರಿದ ಪೇಶ್ವೆ ಸಂತತಿ ಶಿವಾಜಿ ಆರ್ಮಿಗಳನ್ನು ಮಣ್ಣುಪಾಲು ಮಾಡಿದಂತೆ ದಲಿತರ ಮೇಲೆ ಅಟ್ಟಹಾಸ ಮೆರಯಿತು. 2ನೇ ಬಾಜೀರಾಯನ ಅಧಿಕಾರದ ಅವಧಿಯಲ್ಲಿ ಸೈನ್ಯದಲ್ಲಿ ಮಹರ್ ಮತ್ತು ಮಾಂಗ್ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸದೆ ಅಪಮಾನ ಮಾಡಿದರು. ಇದರಿಂದ ಕಿಡಿಕಿಡಿಯಾದ ಮಹರ್ ಸೈನಿಕರು ಬ್ರಿಟೀಷ್ ಸೈನ್ಯದಲ್ಲಿ ಸೇರಿಕೊಂಡು 1818ರಲ್ಲಿ ನಡೆದ ಯುದ್ಧದಲ್ಲಿ 28 ಸಾವಿರದಷ್ಟು ಮರಾಠ ಪೇಶ್ವೆಗಳ ಸೈನ್ಯದ ವಿರುದ್ಧ ಮೂಲನಿವಾಸಿ ಮಹರ್ ರೆಜಿಮೆಂಟ್ನ 500 ಯೋಧರು ಸೆಣಸಾಡಿ ವಿಜಯ ಸಾಧಿಸಿದ ಸ್ಮರಣಾರ್ಥ ಈ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಈ ಮಹರ್ ಸೈನಿಕರ ವೀರೋಚಿತ ಸ್ವಾಭಿಮಾನದ ಹೋರಾಟದ ಇತಿಹಾಸ 1927ರವರೆಗೂ ಭಾರತದಲ್ಲಿ ಮುಚ್ಚಿಹೋಗಿತ್ತು. ಅಂಬೇಡ್ಕರ್ ಲಂಡನ್ನಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ಗ್ರಂಥಾಲಯದಲ್ಲಿ ಅವರು ಈ ಸುದ್ದಿ ಓದಿ ಮಹಾರಾಷ್ಟ್ರಕ್ಕೆ ವಾಪಸಾದ ಕೂಡಲೇ ಈ ಸ್ಥಳಕ್ಕೆ ಭೇಟಿ ನೀಡಿ ಮಹರ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅಲ್ಲಿಂದ ಆರಂಭವಾದ ವಿಜಯೋತ್ಸವ ಈತನಕ ಮುಂದುವರೆದು ಅಂಬೇಡ್ಕರ್ ನೀಡಿದ ಬೆಳಕಲ್ಲಿ ಲೋಕವನ್ನು ಬೆಳಗುತ್ತಿದೆ ಎಂದರು.
ಜನಚಳವಳಿಯ ಸಂಗಾತಿ ಗ.ನ.ಅಶ್ವತ್ಥ್ ಮಾತನಾಡಿ, 1818ರ ಜನವರಿ 1 ರಂದು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ 500 ಮಂದಿ ಸೈನಿಕರು ಶಿರೂರಿನಿಂದ ಪುಣೆಗೆ ಆಗಮಿಸುತ್ತಾರೆ. ಆಗ 2ನೇ ಬಾಜೀರಾವ್ನ 28 ಸಾವಿರ ಸೈನಿಕರು ಇವರಿಗೆ ಎದುರಾಗುತ್ತಾರೆ. ಕೋರೆಗಾಂವ್ ಎಂಬ ಸ್ಥಳದಲ್ಲಿ ನಡೆದ ಈ ಯುದ್ಧ ಹೆಚ್ಚುಕಾಲ ನಡೆಯಲಿಲ್ಲ. ಇದರಲ್ಲಿ ಬ್ರಿಟೀಷರ 200 ಸೈನಿಕರು ಪೇಶ್ವೆಯ 500 ಸೈನಿಕರು ಮೃತರಾದರು. ಆಂಗ್ಲೋ ಮರಾಠ ಯುದ್ಧದ ಅಂತಿಮ ಗೆಲುವು ಬ್ರಿಟೀಷರದ್ದಾಗಿತ್ತು. ಈ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು ಮಹರ್ ಸೈನಿಕರೇ ಎಂಬುದು ಗಮನಾರ್ಹ. ಮೇಲ್ಜಾತಿಯ ಪೇಶ್ವೆ ಸೇನೆಯ ವಿರುದ್ದ ಮಹರ್ ಸೇನೆಯ ಗೆಲುವು ದಲಿತರ ಹೆಮ್ಮೆಗೆ ಕಾರಣವಾಗಿದೆ. ಈ ಇತಿಹಾಸ ಬರೆದ ಬ್ರಿಟೀಷ್ ಅಧಿಕಾರಿ ಹೆನ್ರಿ ಬೇಡನ್ ಪೋವೆಲ್ ಉಲ್ಲೇಖಿಸುವಂತೆ ಮಹರರು ಬಲಿಷ್ಟ ದೇಹವುಳ್ಳವರು, ಸುಂದರಾಂಗರು, ಬುದ್ದಿವಂತರು, ಸೂಕ್ಷ್ಮಮತಿಗಳು, ಅಪಾರ ಧೈರ್ಯಶಾಲಿಗಳು ಆಗಿದ್ದಾರೆ ಎಂದು ತಿಳಿಸಿದರು.
ಮಹರರ ಸಮರ ಕೌಶಲ್ಯವನ್ನು ಗುರುತಿಸಿದ್ದ ಬ್ರಿಟೀಷರು ಗುರುತಿಸಿದ್ದಂತೆ, ಶಿವಾಜಿ ಮಹಾರಾಜರು ಕೂಡ ಗುರುತಿಸಿದ್ದರು ಎಂಬುದು ಜ್ಯೋತಿರಾವ್ ಪುಲೆ ಅವರು ಶಿವಾಜಿ ಕುರಿತು ರಚಿಸಿರುವ ಲಾವಣಿಯಲ್ಲಿ ಉಲ್ಲೇಖವಾಗಿದೆ. ಮೂಲ ನಿವಾಸಿ ದಲಿತರ ಅಚ್ಚಳಿಯದ ಚರಿತ್ರೆಯನ್ನು ಮನುವಾದಿ ಇತಿಹಾಸಕಾರರು ಕೀಳಾಗಿ ಚಿತ್ರಿಸಿರುವ ಬಗ್ಗೆ ಯುವಜನತೆ ಅರಿಯಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ದಲಿತ ಅಸ್ಮಿತೆಯ ಕತೆಯನ್ನು ಬಲ್ಲಿರಾ?
ಈ ವೇಳೆ ಸರ್ದಾರ್ ಚಾಂದ್ ಪಾಷ, ಶ್ರೀನಿವಾಸ್, ಚಿಕ್ಕಪ್ಪಯ್ಯ, ನಾಗರಾಜ್, ವೆಂಕಟರಾಮ್, ವೆಂಕಟೇಶ್, ಸೂಲಿಕುಂಟೆ ವೆಂಕಟೇಶ್, ಎನ್.ಶ್ರೀನಿವಾಶ್, ವೆಂಕಟ್, ಮುನಿರಾಜು, ಆಂಜಿ, ಕೃಷ್ಣಯ್ಯ, ವೆಂಕಟೇಶ್, ಆನಂದ್, ಶಂಕರ್, ಡೇವಿಡ್, ಮಹೇಶ್, ಮುನಿಸ್ವಾಮಿ ಮತ್ತಿತರರು ಹಾಜರಿದ್ದರು.