ಶಿಕ್ಷಕರಿಗೆ ಕಿರುಕುಳ ಕೊಟ್ಟು ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಬೀದರ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡೆ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಶುಕ್ರವಾರ (ಮೇ 16) ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಟಿ.ಆರ್.ದೊಡ್ಡೆ ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲೆಯ ಕಮಲಾಪುರದ ಡಯಟ್ ಹಿರಿಯ ಉಪನ್ಯಾಸಕರನ್ನು ವರ್ಗಾಯಿಸಿ, ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
7ನೇ ಪರಿಷ್ಕೃತ ವೇತನ ಬಟವಾಡೆಗೆ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಂದ ಹಣ ತೆಗೆದುಕೊಂಡು ಪರಿಷ್ಕೃತ ವೇತನ ಬಿಡುಗಡೆಗೊಳಿಸಿದ್ದಾರೆ. ಕಾಲಮಿತಿ ವೇತನ ಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಮಂಜೂರಿಗೆ ಶಿಕ್ಷಕರಿಂದ ಹಣ ಪಡೆದಿದ್ದಾರೆ. ವೈದ್ಯಕೀಯ ರಜೆಯ ಮೇಲೆ ಹೋದಂತಹ ಶಿಕ್ಷಕರಿಗೆ ದೈಹಿಕ ಸದೃಢ ಪ್ರಮಾಣ ಪತ್ರ ಇಲ್ಲದೇ ರಜೆ ಮತ್ತು ವೇತನ ಬಿಡುಗಡೆ ಮಾಡಿರುವುದು, ಶಿಕ್ಷಕರು ಸಮಸ್ಯೆ ಹೇಳಲು ಹೋದರೆ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಕಿರುಕುಳ ನೀಡಿದ ಆರೋಪಗಳ ಬಗ್ಗೆ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ನೀಡಿದ ವರದಿ ಮೇರೆಗೆ ಅಮಾನತು ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ಅಲ್ಪಸಂಖ್ಯಾತರ ಶಾಲಾ-ಕಾಲೇಜು ʼಅತಿಥಿʼ ಆಯ್ಕೆಗೆ ಪ್ರವೇಶ ಪರೀಕ್ಷೆ: ಉಪವಾಸ ಧರಣಿ ಎಚ್ಚರಿಕೆ!