- ಪ್ರಭು ಚೌಹಾಣ್ ಮಾಡಿರುವ ಸುಳ್ಳು ಆರೋಪಗಳನ್ನು ಉದ್ಭವಲಿಂಗ ಅಮರೇಶ್ವರರ ಉಡಿಗೆ ಹಾಕಿದ್ದೇನೆ
- ಕೊಲೆ ಸಂಚು ರೂಪಿಸುವ ನೀಚ ಕೃತ್ಯ ಯಾವ ಜನ್ಮದಲ್ಲಿಯೂ ಯೋಚಿಸುವುದಿಲ್ಲ.
ನನ್ನ ಮೇಲೆ ಔರಾದ ಶಾಸಕ ಪ್ರಭು ಚವ್ಹಾಣ ಅವರು ಹೊರೆಸಿದ ಕೊಲೆ ಆರೋಪದಿಂದ ತುಂಬಾ ಶಾಕ್ ಆಗಿದ್ದೇನೆ. ಕಳೆದ ಒಂದು ವಾರದಿಂದ ಮನಸ್ಸು ಘಾಸಿಗೊಂಡು ಅದರಿಂದ ಹೊರಬರಲು ಆಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದರು.
ಸೋಮವಾರ ಔರಾದ ಪಟ್ಟಣದ ಅಮರೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ಆಗಸ್ಟ್ 9 ರಂದು ಶಾಸಕ ಪ್ರಭು ಚೌಹಾಣ್ ಅವರ ನನ್ನ ಮೇಲೆ ಮಾಡಿದ ಎಲ್ಲಾ ಸುಳ್ಳು ಆರೋಪಗಳನ್ನು ಉದ್ಭವಲಿಂಗ ಅಮರೇಶ್ವರರ ಉಡಿಗೆ ಹಾಕಿ ಆಶೀರ್ವಾದ ಪಡೆದುಕೊಳ್ಳಲು ಬಂದಿರುವೆ. ನನ್ನ ಇಡೀ ರಾಜಕೀಯ ಜೀವನದಲ್ಲಿ ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಲಿಲ್ಲ. ಆದರೆ ಇಲ್ಲಿನ ಶಾಸಕರು ನನ್ನ ಮೇಲೆ ಮಾಡಿರುವ ಹತ್ಯೆ ಆರೋಪದಿಂದ ತುಂಬಾ ನೋವಾಗಿದೆ. ಅದೆಲ್ಲವೂ ದೂರ ಮಾಡಿ ಧೈರ್ಯ ತುಂಬುವಂತೆ ಅಮರೇಶ್ವರರ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ” ಎಂದರು.
ನನ್ನ ಮನಸ್ಸು – ಹಸ್ತ ಪರಿಶುದ್ಧವಾಗಿದೆ:
“ಭ್ರಷ್ಟಾಚಾರ, ಸೃಜನ ಪಕ್ಷಪಾತ, ಸ್ವಾರ್ಥ ರಾಜಕೀಯದಿಂದ ಇಂದಿನ ರಾಜಕೀಯ ತುಂಬಾ ಹೊಲಸಾಗಿದೆ. ಆದರೆ ನಾನು 1994 ರಲ್ಲಿ ರಾಜಕೀಯ ಪ್ರವೇಶಿಸುವ ವೇಳೆ ನನ್ನೂರಿನ ಹಲವರು ‘ಹೊಲಸು ರಾಜಕೀಯಕ್ಕೆ ಯಾಕೆ ಹೋಗತ್ತಿಯಾ’ ಎಂದು ಸಲಹೆ ನೀಡಿದರು. ಆದರೆ ರಾಜಕಾರಣದಲ್ಲಿ ‘ಶುದ್ಧ ಮನಸ್ಸು – ಶುದ್ಧ ಹಸ್ತ’ ದಿಂದ ಹೋದರೆ ರಾಜಕೀಯ ಶುದ್ಧವಾಗುತ್ತದೆ. ರಾಜಕೀಯದಲ್ಲಿ ಒಳ್ಳೆಯವರು ಪ್ರವೇಶಿಸಬೇಕು ಎಂದು ಹೇಳಿದ್ದೆ, ಆದರೆ ‘ಇಂದು ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ ಎಂದರೆ ನನ್ನ ಮನಸ್ಸು ಮತ್ತು ಹಸ್ತ ಪರಿಶುದ್ಧವಾಗಿದೆ” ಎಂದು ಹೇಳಿದರು.
ಮೋದಿ ಸಂಪುಟದಲ್ಲಿ ಒಬ್ಬರೂ ಕ್ರಿಮಿನಲ್ ಹಿನ್ನೆಲೆ ಮಂತ್ರಿಗಳಿಲ್ಲ:
“ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಂಪುಟದಲ್ಲಿ ಡಜನ್ ಗಟ್ಟಲೆ ಮಂತ್ರಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು, ಮೋಸ ಮಾಡುವರು, ವಿವಿಧ ಆರೋಪಿಗಳಲ್ಲಿ ಸಿಲುಕಿ ಜಾಮೀನು ಪಡೆದವರೇ ಇರುತ್ತಾರೆ. ಆದರೆ ವಿರೋಧ ಪಕ್ಷಗಳಿಗೆ ಆರೋಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಒಬ್ಬೇ ಒಬ್ಬ ಕ್ರಿಮಿನಲ್ ಹಿನ್ನೆಲೆಯ ಮಂತ್ರಿ ಸಿಗುವುದಿಲ್ಲ. ಅಂಥ ಸಂಪುಟದಲ್ಲಿ ನಾನು ಮಂತ್ರಿ ಆಗಿರುವುದು ನನ್ನ ಸೌಭಾಗ್ಯ” ಎಂದು ತಿಳಿಸಿದರು.
“‘ನನಗೆ ಹತ್ಯೆಗೈದು ಆರು ತಿಂಗಳಲ್ಲಿ ಉಪಚುನಾವಣೆ ಮಾಡ್ತಾರೆ ‘ ಎಂದು ಪ್ರಭು ಚವ್ಹಾಣ ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆದರೆ ನಾನು ಗುಂಡಾ ಪ್ರವೃತ್ತಿ ಹಿನ್ನೆಲೆಯಿಂದ ಬಂದವನಲ್ಲ, ನಾನು ಗುಂಡಾ ಪ್ರವೃತ್ತಿ ವ್ಯಕ್ತಿಗಳನ್ನು ಸಾಕುತ್ತಿದ್ದರೆ, ನೀವು ನನ್ನ ಮೇಲೆ ಇಂಥ ಕೊಲೆ ಆರೋಪ ಮಾಡಲು ಧೈರ್ಯ ಮಾಡುತ್ತಿರಲಿಲ್ಲ. ನಾನೊಬ್ಬ ಸಾತ್ವಿಕ ಮನುಷ್ಯ, ಸದಾ ಜನರ ಸೇವಕನಾಗಿ ಕೆಲಸ ಮಾಡಲು ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಆದರೂ ಆರೋಪ ಬಂದಿದೆ, ಇದಕ್ಕೆ ನೇರವಾಗಿ ಉತ್ತರಿಸುವುದಿಲ್ಲ” ಎಂದು ಪ್ರಭು ಚವ್ಹಾಣ ವಿರುದ್ಧ ಗುಡುಗಿದ್ದಾರೆ.
“ಕಳೆದ ಚುನಾವಣೆಯಲ್ಲಿ ನಾನು ವಿರೋಧ ಮಾಡಿದ್ದೇನೆ ಎಂದು ಪ್ರಭು ಚವ್ಹಾಣ ಆರೋಪಿಸಿದರು. ಅಷ್ಟೇ ಅಲ್ಲ, ಬಿಜೆಪಿಯ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಭೇಟಿಯಾಗಿ ನನ್ನ ವಿರುದ್ಧ ಪಿತೂರಿಯ ಮಾತುಗಳನ್ನಾಡಿದ್ದಾರೆ. ಆದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಸ್ವಾತಂತ್ರ್ಯ ಇದೆ ಏನಾದರೂ ಹೇಳಲಿ ಎಂದು ಸುಮ್ಮನಾದೆ. ಚುನಾವಣೆ ಪೂರ್ವದಲ್ಲಿ ಔರಾದಗೆ ವಿಜಯ ಸಂಕಲ್ಪ ಯಾತ್ರೆ ಬಂದಾಗ ನನಗೆ ಕರೆಯಲಿಲ್ಲ, ಆದರೆ ನಾನು ಪ್ರಭು ಚವ್ಹಾಣ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದೇನೆ” ಎಂದು ಖೂಬಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರದಿಂದ ’ಈ ದಿನ’ ವರದಿ- 5 | ಎಳೆಯ ಕೈಗಳಲ್ಲಿ ಬಂದೂಕು! ಬಂಕರ್ಗಳಲ್ಲಿ ಕಂಡ ದುರಂತ ಕಥನ
ಕೊಲೆ ನಡೆಸುವ ಜಾಯಮಾನ ನನ್ನದಲ್ಲ:
“ಪ್ರಭು ಚವ್ಹಾಣ ಅವರೇ ನೀವು ನೂರು ವರ್ಷ ಬಾಳಿ, ಬದುಕಿರುವವರೆಗೂ ಶಾಸಕರಾಗಿರಿ, ಆದರೆ ಗೆದ್ದ ನಂತರ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಲು ಹೋಗಬೇಡಿ, ಪಕ್ಷ ನಮಗೆ ಜವಾಬ್ದಾರಿ ನೀಡಿದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಬೇಕು. ನಿಮಗೆ ಕೊಲೆ ಸಂಚು ರೂಪಿಸುವ ನೀಚ ಕೃತ್ಯ ಯಾವುದೇ ಜನ್ಮದಲ್ಲಿ ನನ್ನಿಂದ ಯೋಚಿಸಲು ಸಾಧ್ಯವಿಲ್ಲ. ಇನ್ನು ಕೊಲೆ ಮಾಡುವುದಂತೂ ದೂರದ ಮಾತು. ನಾನು ಚುನಾವಣೆಗೋಸ್ಕರ ಜಮೀನು ಮಾರಾಟ ಮಾಡಿದ್ದೇನೆ, ಹೊರತು ಭ್ರಷ್ಟಚಾರದಿಂದ ಒಂದು ಗುಂಟೆ ಜಮೀನು ಖರೀದಿಸಲಿಲ್ಲ. ನನ್ನ ಅವಧಿಯಲ್ಲಿ ಯಾರಿಗೂ ವಂಚನೆ, ಮೋಸ ಮಾಡದೆ ಪಕ್ಷದ ನಿಷ್ಠಾವಂತ ಸೇವಕನಾಗಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದರು.