ಬಾಡೂಟ, ಬಾಡಿಲ್ಲದ ಊಟ ಎರಡೂ ಇರಲಿ. ಮಂಡ್ಯದಲ್ಲಿ ನಡೆಯುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವು ದೊರೆಯುಂತಾಗಬೇಕು, ಆ ಮೂಲಕ ಮಂಡ್ಯ ನೆಲ ಆಹಾರ ಸಂಸ್ಕೃತಿಯನ್ನು ಗೌರವಿಸುವ ಕೆಲಸವನ್ನು ಮಂಡ್ಯ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.

ಭಾನುವಾರ ಸಂಜೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಸಭೆ ಸೇರಿದ ಹಲವು ಸಂಘಟನೆಗಳ ಮುಖಂಡರು ಮಾಂಸಾಹಾರ ಬೇಕು ಎಂಬುದು ಕೇವಲ ಆಹಾರಕ್ಕಾಗಿಯಲ್ಲ, ಬಹುಜನರ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುದಕ್ಕಾಗಿ ಎಂಬುದನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಅರ್ಥ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಇದನ್ನು ನೋಡಿದ್ದೀರಾ? ಬಾಡೂಟದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದೇನು?
ಇದುವರೆಗೆ ನಡೆದ 86 ಸಮ್ಮೇಳನಗಳಲ್ಲಿ ಮಾಂಸಾಹಾರವನ್ನು ನೀಡದೇ ಬಹುಜನರ ಆಹಾರ ಸಂಸ್ಕೃತಿಯನ್ನು ಅವಮಾನಿಸಲಾಗಿದೆ, ಹಾಗಾಗಿ ಮಾಂಸಾಹಾರ ನಿಷೇಧವನ್ನು ವಾಪಸ್ ಪಡೆದು, ಮಾಂಸಾಹಾರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕೆಂದು ಒತ್ತಾಯಿಸಿದರು.
ಬಾಡೂಟ, ಬಾಡಿಲ್ಲದ ಊಟ ಎರಡೂ ಇರಲಿ
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬಾಡಿಲ್ಲದ ಊಟ ಎರಡೂ ಇರಲಿ. ಯಾವುನ್ನು ತಿನ್ನಬೇಕು ಎಂಬುದನ್ನು ಜನರ ವಿವೇಚನೆ ಬಿಡಬೇಕು. ಸಸ್ಯಹಾರವೇ ಶ್ರೇಷ್ಠ ಎಂಬ ಹಲವು ದಶಕಗಳ ಹೇರಿಕೆಯನ್ನು ಮಂಡ್ಯ ಸಮ್ಮೇಳನದಲ್ಲಿ ಸುಳ್ಳಾಗಿಸುವ ಮೂಲಕ ಮಾಂಸಾಹಾರಕ್ಕೂ ಅವಕಾಶ ನೀಡಬೇಕೆಂಬ ಅಭಿಪ್ರಾಯ ಕೇಳಿ ಬಂತು.
ನಾಳೆ ಜಿಲ್ಲಾಧಿಕಾರಿಗೆ ಮನವಿ
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ನಾಳೆ (ಡಿ.9)ರಂದು ಮಂಡ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಸಭೆಯು ತೀರ್ಮಾನ ಕೈಗೊಂಡಿತು.
ಸಾಂಕೇತಿಕ ಬಾಡೂಟ
ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದ ನೆಲದಲ್ಲಿ ಬಾಡೂಟ ಇಲ್ಲದ ಮೇಲೆ! ಎಂತಹಾ ಅತಿಥಿ ಸತ್ಕಾರವಾದೀತು.ಮಾಂಸಾಹಾರದ ಆಯ್ಕೆ ಇರದಿದ್ದರೆ ಪರ್ಯಾಯವಾಗಿ ಬಾಡೂಟ ಪ್ರಿಯಯರಿಗೆ ಮಂಡ್ಯ ಶೈಲಿಯ ನಾಟಿ ಕೋಳಿ, ಬೋಟಿ ಗೊಜ್ಜು, ಮುದ್ದೆ ಊಟ ಆಯೋಜಿಸುವ ಕುರಿತು ವಿವಿಧ ಸಂಘಟನೆಗಳು ಚಿಂತನೆ ನಡೆಸಿವೆ.
ಇದನ್ನು ಓದಿದ್ದೀರಾ? ಕನಕಪುರ | ಉಪಮುಖ್ಯಮಂತ್ರಿಯ ಹಳ್ಳಿಯಲ್ಲಿಯೂ ಜನರು ತಿರುಗಾಡಲು ಬಸ್ ಸೌಲಭ್ಯವಿಲ್ಲ!
ಸಭೆಯಲ್ಲಿ ಸಿಪಿಐಎಂ ನ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಕುಮಾರಿ, ದೇವರಾಜ ಅರಸು ಹಿಂದುಳಿದ ವೇದಿಕೆಯ ಎಲ್.ಸಂದೇಶ್, ಕರ್ನಾಟಕ ಜನಶಕ್ತಿಯ ಪೂರ್ಣಿಮ, ಗ್ರಾ.ಪಂ.ಸದಸ್ಯರ ಒಕ್ಕೂಟದ ನಾಗೇಶ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಕ್ಷೀರಸಾಗರ ಮಿತ್ರಕೂಟದ ಕೀಲಾರ ಕೃಷ್ಣೇಗೌಡ, ಸುರೇಶ್, ಚಿತ್ರಕೂಟದ ಅರವಿಂದ ಪ್ರಭು, ಜಾಗೃತ ಕರ್ನಾಟಕದ ಸಂತೋಷ್, ನಗರಕೆರೆ ಜಗದೀಶ್, ನೆಲದನಿ ಬಳಗದ ಲಂಕೇಶ್, ಕರವೇ ಮುಖಂಡ ಹೆಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಸಮಾನ ಮನಸ್ಕರ ವೇದಿಕೆ ನರಸಿಂಹಮೂರ್ತಿ, ಟಿ.ಡಿ.ನಾಗರಾಜು, ಶೋಷಿತರ ಒಕ್ಕೂಟದ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಚಿನಕುರಳಿ ರಮೇಶ್, ಸಿ.ಎಂ.ದ್ಯಾವಪ್ಪ, ತಿರುಮಲಾಪುರ ನಾರಾಯಣ್, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಿ.ಎನ್.ಕೆಂಪರಾಜು, ಸಬ್ಬನಹಳ್ಳಿ ಶಶಿಧರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.