“ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ಕುರಿತು ಪ್ರಧಾನಿ ಮೋದಿ ಭೇಟಿಗೆ ದಿನಾಂಕ ಕೇಳಿದ್ದೇವೆ. ನಮ್ಮ ಜಿಲ್ಲೆಗಳಿಗೆ ಖಂಡಿತವಾಗಿಯೂ ಶಾಶ್ವತ ನೀರಾವರಿ ಯೋಜನೆ ತಂದೇ ತರುತ್ತೇವೆ” ಎಂದು ಕೋಲಾರ ಜಿಲ್ಲೆಯ ಮುಳುಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ವಾಗ್ದಾನ ಮಾಡಿದರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಮೂರು ಜಿಲ್ಲೆಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಗಾಗಿ ಸಾಕಷ್ಟು ಹೋರಾಟಗಳು, ಚಳುವಳಿಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ನಮ್ಮೆಲ್ಲರ ದೌರ್ಭಾಗ್ಯ. ಆದರೆ, ಈ ಬಾರಿ ಖಂಡಿತವಾಗಿಯೂ ಜನರು ನನಗೆ ಕೊಟ್ಟಿರುವ ಸಾಂವಿಧಾನಿಕ ಹಕ್ಕನ್ನು ಅಧಿವೇಶನದಲ್ಲಿ ಚಲಾಯಿಸುತ್ತೇನೆ” ಎಂದು ಭರವಸೆ ನೀಡಿದರು.
ಕಳೆದ ಬಾರಿ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಿದಾಗ ನಮ್ಮ ಜಿಲ್ಲೆಯವರೇ ನನಗೆ ಅಡ್ಡಿ ಮಾಡಿದರು. ಈ ಬಾರಿ ಖಂಡಿತವಾಗಿಯೂ ಹಿಡಿದ ಕೆಲಸವನ್ನು ಕೈಬಿಡದೆ ಮಾಡುತ್ತೇನೆ ಎಂದರು.
“ಪ್ರಸ್ತುತ ಎಲ್ಲವೂ ಚೆನ್ನಾಗಿದೆ. ಆದರೆ, 8-10 ವರ್ಷಗಳು ಕಳೆದರೆ ನಮ್ಮ ಜಿಲ್ಲೆಗಳ ತರಕಾರಿ, ಹಣ್ಣುಗಳನ್ನು ಕೊಳ್ಳಲು ಯಾರೂ ಮುಂದೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೆ ನಮ್ಮವರೇ ಸಾಥ್ ಕೊಡುತ್ತಿಲ್ಲ. ಕೆಲವರಿಗೆ ಪ್ರಚಾರದ ಹುಚ್ಚು. ಅದಕ್ಕೆ ಈ ರೀತಿ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳು ಪ್ರಚಾರದ ಗೀಳನ್ನು ಬಿಟ್ಟು ಜನಪರ ಕೆಲಸಗಳಿಗೆ ಆದ್ಯತೆ ಕೊಡಬೇಕು” ಎಂದು ಮಾರ್ಮಿಕವಾಗಿ ನುಡಿದರು.
“ರೈತರೊಂದಿಗೆ ಪ್ರಧಾನಿಯವರ ಬಳಿ ಹೋಗಿ ನಮ್ಮ ಬೇಡಿಕೆಯನ್ನು ಮುಂದಿಡೋಣ. ನಾನೇ ಇದರ ನೇತೃತ್ವ ವಹಿಸಿಕೊಳ್ಳುತ್ತೇನೆ. ಇದು ಪ್ರಚಾರಕ್ಕಾಗಿ ಅಲ್ಲ. ರೈತರ ಕಣ್ಣೀರು ಒರೆಸುವ ದೃಷ್ಟಿಯಲ್ಲಿ ವಿಧಾನಸೌಧದಲ್ಲೂ ಗಟ್ಟಿ ಧ್ವನಿ ಎತ್ತುತ್ತೇನೆ. ಸದಾ ಜಿಲ್ಲೆಯ ರೈತರೊಂದಿಗೆ ನಾನಿರುತ್ತೇನೆ” ಎಂದು ಮುಳುಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಭರವಸೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, “ಕಳೆದ 25 ವರ್ಷಗಳಿಂದ ನೀರಾವರಿ ಹೋರಾಟಗಳು ನಡೆಯುತ್ತಲೇ ಇವೆ. ನಾನಾ ರೀತಿಯಲ್ಲಿ ಹೋರಾಟಗಳು ನಡೆದಿವೆ. ಆದರೆ, ಸರಕಾರದ ನಿರ್ಲಕ್ಷ್ಯದ ಕಾರಣ ಸೂಕ್ತ ಪರಿಹಾರ ದೊರೆತಿಲ್ಲ. ಒಗ್ಗಟ್ಟಿನ ಪ್ರದರ್ಶನದಿಂದ ಮಾತ್ರ ನಮ್ಮ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ದೊರೆಯಲು ಸಾಧ್ಯ” ಎಂದು ಕರೆ ನೀಡಿದರು.
“ರೈತರನ್ನ, ಹೋರಾಟಗಾರರನ್ನ ಜಗಳಕ್ಕೆ ಹಚ್ಚೋದಷ್ಟೆ ಸರಕಾರದ ಕೆಲಸವಾಗಿಬಿಟ್ಟಿದೆ. ಆದರೆ, ಜಿಲ್ಲೆಗಳ ಪಾಲಿಗೆ ಬರಬೇಕಾದ ನೀರಿನ ವಿಚಾರ ಕುರಿತು ತುಟಿಬಿಚ್ಚುತ್ತಿಲ್ಲ. ಬೆಂಗಳೂರಿಂದ ಬರುತ್ತಿರುವ ಸೀವೇಜ್ ನೀರಿನಿಂದ ಸಾಕಷ್ಟು ರೋಗ ರುಜಿನಗಳಿಗೆ ಕಾರಣವಾಗುತ್ತಿರುವ ಕುರಿತು ವೈಜ್ಞಾನಿಕ ವರದಿಗಳು ಹೇಳುತ್ತಿವೆ. ಎಚ್.ಎನ್.ವ್ಯಾಲಿ – ಕೆ.ಸಿ.ವ್ಯಾಲಿ ನೀರು ತೃತೀಯ ಹಂತದ ಶುದ್ಧೀಕರಣವಾಗಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ತರಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗಳ ಜನಪ್ರತಿನಿಧಿಗಳು ಮುಂಬರುವ ಅಧಿವೇಶನದಲ್ಲಿ ಒಗ್ಗಟ್ಟಿನಿಂದ ಗಟ್ಟಿ ಧ್ವನಿ ಎತ್ತಬೇಕಿದೆ” ಎಂದು ಆಂಜನೇಯ ರೆಡ್ಡಿ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ನಗರಾಭಿವೃದ್ಧಿ ಇಲಾಖೆಯ ಎಡವಟ್ಟು; 6 ತಿಂಗಳ ಹಿಂದೆ ಮೃತಪಟ್ಟಿರುವ ಇಂಜಿನಿಯರ್ ವರ್ಗಾವಣೆ!
ದುಂಡು ಮೇಜಿನ ಸಭೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸುಷ್ಮಾ ಶ್ರೀನಿವಾಸ್, ಉಷಾ, ಆಯೇಶಾ ಸುಲ್ತಾನ, ದೊಡ್ಡಬಳ್ಳಾಪುರ ತಾಲೂಕಿನ ಸಂಜೀವ್, ಮುತ್ತಯ್ಯ, ಚಿಕ್ಕಬಳ್ಳಾಪುರ ತಾಲೂಕಿನ ಗಿರೀಶ್, ನಾರಾಯಣಸ್ವಾಮಿ, ಸುಧಾಕರ್, ಅಭಿಷೇಕ್, ಕೃಷ್ಣ, ಅಭಿಲಾಷ್, ಬಾಗೇಪಲ್ಲಿಯ ಗೋವಿಂದ್, ಶ್ರೀನಿವಾಸಪುರದ ನರಸಿಂಹ ರೆಡ್ಡಿ, ದೇವನಹಳ್ಳಿಯ ಕಾರೇಹಳ್ಳಿ ನಾರಾಯಣಸ್ವಾಮಿ, ಶ್ರೀನಿವಾಸ್, ಶಿಡ್ಲಘಟ್ಟ ತಾಲೂಕಿನ ಬಾಬು ರೆಡ್ಡಿ, ಸತೀಶ್, ವರುಣ್, ದೇವರಾಜು, ಮುಳುಬಾಗಿಲು ತಾಲೂಕಿನ ವೆಂಕಟ್, ಶ್ರೀನಿವಾಸ್, ಯುವ ಶಕ್ತಿ ಸಂಘದ ರಾಘವೇಂದ್ರ, ನವೀನ್, ಜಯರಾಂ, ಚಿಂತಾಮಣಿ ತಾಲೂಕಿನ ನಿತೀಶ, ರಾಘವೇಂದ್ರ, ನಾರಾಯಣಸ್ವಾಮಿ, ಶಿವರಾಮ್, ಗೌರಿಬಿದನೂರು ತಾಲೂಕಿನ ನವೀನ್, ಮಂಜುನಾಥ್, ರಾಜಣ್ಣ, ಕೋಲಾರದ ರಾಮು, ಶಿವಣ್ಣ, ಜಿ.ನಾರಾಯಣಸ್ವಾಮಿ, ವಿಶ್ವನಾಥ್ ಗೌಡ, ನೀರಾವರಿ ಹೋರಾಟ ಸಮತಿಯ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.
