ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಚಿಮುಲ್ ವಿಭಜನೆ ಮತ್ತು ಚುನಾವಣೆ ವಿವಾದವು ಭುಗಿಲೆದ್ದಿದೆ. ಕೋಚಿಮುಲ್ ವಿಭಜನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಹಾಲಿ, ಮಾಜಿಗಳ ನಡುವೆ ಪರಸ್ಪರ ವಾಕ್ಸಮರ ಶುರುವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲು ಒಕ್ಕೂಟದ ವಿಭಜನೆಗೆ ಹಸಿರು ನಿಶಾನೆ ದೊರೆತಿತ್ತು. ಚಿಮುಲ್ ಅಧಿಕೃತ ನೋಂದಣಿಯೂ ಆಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ತೊಡಕಾಗಲಿದೆ ಎಂದೇಳಿ ವಿಭಜನೆ ಆದೇಶವನ್ನು ಹಿಂಪಡೆದಿತ್ತು.
ವಿಭಜನೆಯಿಂದ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿ ಒಕ್ಕೂಟದ ನಿರ್ದೇಶಕರು ಕೋರ್ಟ್ ಮೆಟ್ಟಿಲೇರಿದ ಕಾರಣ ವಿಭಜನೆ ವಿಚಾರ ಅಲ್ಲಿಗೆ ನಿಂತುಹೋಯಿತು. ಆದರೆ ಇದೀಗ ವಿಭಜನೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಒಕ್ಕೂಟದ ಹಾಲಿ ಮತ್ತು ಮಾಜಿಗಳ ನಡುವೆ ತಿಕ್ಕಾಟ ಶುರುವಾಗಿದೆ.
ಆಗ ವಿಭಜನೆಗೆ ಪಟ್ಟು ಹಿಡಿದಿದ್ದ ಬಿಜೆಪಿ ಬೆಂಬಲಿತ ಒಕ್ಕೂಟದ ಮಾಜಿ ಅಧ್ಯಕ್ಷರು, ಪ್ರಸ್ತುತ ವಿಭಜನೆ ವಿಚಾರವನ್ನು ಮೂಲೆಗೆ ಸರಿಸುವ ಯತ್ನದಲ್ಲಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹಾಲು ಉತ್ಪಾದಕರ ಹಾಗೂ ಒಕ್ಕೂಟದ ಅಭಿವೃದ್ಧಿ ಮರೆತು ಅಧಿಕಾರದಾಸೆಗಾಗಿ ಕೂಡಲೇ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದ್ದಾರೆ.
ಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕರು ಒಕ್ಕೂಟದ ಅಭಿವೃದ್ಧಿಯ ದೃಷ್ಟಿಯಲ್ಲಿ ಮೊದಲು ವಿಭಜನೆಯಾಗಬೇಕು. ಆನಂತರ ಚುನಾವಣೆ ನಡೆಯಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಏಪ್ರಿಲ್ 28ಕ್ಕೆ ನಿಗದಿಯಾಗಿದ್ದ ಚುನಾವಣೆ: ಕಳೆದ ಮೇ 12ಕ್ಕೆ ಹಾಲಿ 13 ಮಂದಿ ನಿರ್ದೇಶಕರ ಅಧಿಕಾರಾವಧಿ ಮುಕ್ತಾಯಗೊಳ್ಳುವ ಕಾರಣ ಚುನಾವಣೆ ನಡೆಸುವಂತೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಅದರಂತೆ ಆಡಳಿತಾಧಿಕಾರಿ ಏಪ್ರಿಲ್ 28ಕ್ಕೆ ಚುನಾವಣೆ ನಿಗದಿಗೊಳಿಸಿದ್ದರು. ಅಷ್ಟರಲ್ಲಾಗಲೇ ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಯಿತು. ಈ ಕಾರಣದಿಂದ ಏಪ್ರಿಲ್ 28ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಸರ್ಕಾರ ಮುಂದೂಡಿತು. ಆಡಳಿತ ಮಂಡಳಿಯ ಅಧಿಕಾರಾವಧಿಯನ್ನು ಮುಂದಿನ ಚುನಾವಣೆವರೆಗೆ ವಿಸ್ತರಿಸಿ ಜೂನ್ 6ರ ನಂತರ ಚುನಾವಣೆ ನಡೆಸುವಂತೆ ಆದೇಶಿಸಿತು.
ಪ್ರಸ್ತುತ ಲೋಕಸಭೆ ಚುನಾವಣೆ ಮುಗಿದಿದ್ದು, ಇದೀಗ ಒಕ್ಕೂಟದ ಮಾಜಿಗಳು “ಹಾಲಿ ಆಡಳಿತ ಮಂಡಳಿ ನಿರ್ದೇಶಕರ ಅಧಿಕಾರಾವಧಿ ಮುಗಿದಿದೆ. ಕೂಡಲೇ ಚುನಾವಣೆ ನಡೆಸಬೇಕು” ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ, ಹಾಲಿ ನಿರ್ದೇಶಕರು ಪ್ರತ್ಯೇಕ ಒಕ್ಕೂಟ ರಚನೆಯ ಬಳಿಕವಷ್ಟೇ ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಎನ್ಡಿಡಿಬಿ ಸಾಲ ಪಡೆದರೆ ವಿಭಜನೆಗೆ ತೊಡುಕು: ಪ್ರಸ್ತುತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಕ್ಕೂಟದಲ್ಲಿ ಆರ್ಥಿಕ ಸಂಪನ್ಮೂಲ ಕೊರತೆ ಇರುವ ಕಾರಣ, ಎನ್ಡಿಡಿಬಿಯಿಂದ ಸಾಲ ಕೇಳಲಾಗಿದೆ. ಇದಕ್ಕಾಗಿ ಒಕ್ಕೂಟದ ಆಸ್ತಿ ಅಡಮಾನವಿಡಬೇಕು. ಒಮ್ಮೆ ಸಾಲ ಪಡೆದರೆ ಎನ್ಡಿಡಿಬಿಯಿಂದ ಎನ್ಒಸಿ ಕೊಡುವುದಿಲ್ಲ. ಇದರಿಂದ ವಿಭಜನೆಗೆ ತೊಡುಕಾಗಲಿದೆ ಎಂಬುದು ಕೆಲ ನಿರ್ದೇಶಕರ ಅಭಿಪ್ರಾಯ.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ: ಕೋಚಿಮುಲ್ ವಿಭಜನೆ ಮತ್ತು ಚುನಾವಣೆ ವಿಚಾರವಾಗಿ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಂಗಳವಾರ(ಜೂ.25) ಸಭೆ ನಡೆದಿದ್ದು, ವಿಭಜನೆ ಮತ್ತು ಅಧಿಕಾರ ವಿಸ್ತರಣೆಗೆ ಇರುವ ಸಾಧಕ ಬಾಧಕಗಳನ್ನು ಚರ್ಚಿಸಲು ಜೂನ್ 29ಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯ ಬಳಿಕವಷ್ಟೇ ತೀರ್ಮಾನಗಳು ಗೊತ್ತಾಗಲಿವೆ.
ಒಟ್ಟಾರೆಯಾಗಿ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಅಭಿವೃದ್ಧಿ ದೃಷ್ಟಿಯಲ್ಲಿ ಸೂಕ್ತ ನಿರ್ಧಾರಗಳಾಗಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ.
ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮೊದಲು ಒಕ್ಕೂಟದ ವಿಭಜನೆ ಆಗಬೇಕು. ಬಳಿಕವಷ್ಟೇ ಚುನಾವಣೆ ನಡೆಸಬೇಕು. ಎನ್ಡಿಡಿಬಿ ಸಾಲ ಪಡೆದರೆ ವಿಭಜನೆ ವಿಚಾರ ಮೂಲೆ ಸೇರುತ್ತದೆ. ಆಡಳಿತ ಮಂಡಳಿ ಅಧಿಕಾರಾವಧಿ ವಿಸ್ತರಣೆಗೆ ಸಹಕಾರ ಕಾನೂನಿನಲ್ಲಿ ಅವಕಾಶವಿದೆ. ಕೆಲವರಿಗೆ ಅದರ ಅರಿವಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಉಡುಪಿ | ಉದ್ಘಾಟನೆಗೂ ಮುನ್ನವೇ ಕುಸಿದ ಕೆರೆ ಏರಿ; ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ ವಿ ನಾಗರಾಜು ಮಾತನಾಡಿ, “ಪ್ರಸ್ತುತ ಕೋಚಿಮುಲ್ ಆಡಳಿತ ಮಂಡಳಿ ನಿರ್ದೇಶಕರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅದರೂ ಸಹ ಹಲವು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದು ಕಾನೂನುಬಾಹಿರ. ಕೂಡಲೇ ಚುನಾವಣೆ ನಡೆಸಬೇಕು. ಹೊಸ ಆಡಳಿತ ಮಂಡಳಿ ರಚನೆ ಬಳಿಕ ಒಕ್ಕೂಟದ ವಿಭಜನೆ ಆಗಲಿ” ಎಂದು ಹೇಳಿದರು.