ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಆಗಮಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು ಮೊದಲಿಗೆ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ತೆರಳಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ಮಕ್ಕಳೊಂದಿಗೆ ಮಾತನಾಡಿದರು. ನಂತರ ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯ ಕೆರೆ-ದಂಡೆಯಲ್ಲಿ ವಾಸವಿರುವ ನಿರಾಶ್ರಿತ, ಅಲೆಮಾರಿ, ಬಡ ಕುಟುಂಬಗಳ ಹೆಣ್ಣುಮಕ್ಕಳ ಬಳಿಗೆ ತೆರಳಿ ಅವರ ಸಮಸ್ಯೆ ಆಲಿಸಿದರು.

ಅಲೆಮಾರಿ ಮತ್ತು ನಿರಾಶ್ರಿತರ ಕುಂದು-ಕೊರತೆ ಹಾಗೂ ಅವರಿಗೆ ಬೇರೆಡೆ ನಿವೇಶನ ಒದಗಿಸುವ ಕುರಿತು ಮಾಹಿತಿ ಪಡೆದುಕೊಂಡು, ಅವರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಲ್ಪಿಸುವ ಭರವಸೆ ಕೊಟ್ಟರು.

ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್ ಕೆ ಪುರಂದರ್, ಹುಳಿಯಾರು ಕೆರೆ-ದಂಡೆ ಅಲೆಮಾರಿ ಹಾಗೂ ಬಡ ನಿರಾಶ್ರಿತ ಕುಟುಂಬಗಳ ವಸತಿ ಪ್ರದೇಶದಲ್ಲಿ ಕಳೆದ ಇಪ್ಪತ್ತು ಹೆಚ್ಚಿನ ವರ್ಷಗಳಿಂದಲೂ ವಾಸಿಸುತ್ತಿರುವ ಆಯೆಲ್ಲ ನಿರಾಶ್ರಿತ 82’ಕುಟುಂಬಗಳಿಗೆ ನಿವೇಶನ ಒದಗಿಸಲು, ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಜಾಗ ಗುರ್ತು ಮಾಡಿ, ಮಂಜೂರಾತಿಗಾಗಿ ಉಪ-ವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತಿರುವ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ತಾಲ್ಲೂಕಿಗೆ ಬಿಡುಗಡೆಯಾಗಿರುವ ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆ’ ಯ ಅನುದಾನದಲ್ಲಿ ಬಡ, ನಿರಾಶ್ರಿತ ಅಲೆಮಾರಿ ಕುಟುಂಬಗಳ ಮನೆ ನಿರ್ಮಾಣಕ್ಕೂ ಧನ ಸಹಾಯ ಕಾಯ್ದಿರಿಸುವ ಬಗ್ಗೆ ಹಾಗೂ ಅಲೆಮಾರಿಗಳ ಮನೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕಲ್ಪಿಸಿಕೊಡುವ ಕುರಿತು ಮಹಿಳಾ ಆಯೋಗದ ಅಧ್ಯಕ್ಷರು ತಹಸೀಲ್ದಾರ್ ಮತ್ತು ಪಂಚಗ್ಯಾರಂಟಿ ಯೋಜನೆಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಜೊತೆ ಚರ್ಚೆ ನಡೆಸಿದರು.

ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯ ಕೆರೆ-ದಂಡೆ ನಿರಾಶ್ರಿತರ ವಸತಿ ಪ್ರದೇಶದಿಂದಲೇ ಉಪ-ವಿಭಾಗಾಧಿಕಾರಿ ಸಪ್ತ ಶ್ರೀ ಅವರಿಗೆ ಕರೆ ಮಾಡಿ ಅವರೊಂದಿಗೆ, ಕೆರೆ-ದಂಡೆ ನಿವಾಸಿಗಳ ನಿವೇಶನ ಪರಿಹಾರ ಕುರಿತು ಮಾತನಾಡಿ ಶೀಘ್ರ ಪರಿಹಾರ ಕಲ್ಪಿಸಿಕೊಡುವಂತೆ ಸೂಚಿಸಿದರು.
ತಾಲ್ಲೂಕಿನಲ್ಲಿ ಗಣನೆಗೇ ಇಲ್ಲದಂತೆ ಮರೆಯಲ್ಲಿ ಕಡುಕಷ್ಟದ ಬದುಕು ದೂಡುತ್ತಿರುವ ಅಲೆಮಾರಿ ಜನಾಂಗಗಳಾದ ಪಿಂಜಾರ, ದರ್ವೇಶ್, ಕರಡಿ-ಕಲಂದರ್ ಸಮುದಾಯಗಳ ನಿವೇಶನ ಹಕ್ಕು ಮತ್ತು ಅವರ ಸಮಗ್ರ ಅಭಿವೃದ್ಧಿ ಹಕ್ಕಿಗಾಗಿ ಹತ್ತಾರು ವರ್ಷಗಳ ಕಾಲ ಹೋರಾಟ ನಡೆಸುತ್ತಿರುವ ಅಲೆಮಾರಿಗಳ ಷರೀಫಮ್ಮ ಎಂದೇ ಖ್ಯಾತನಾಮರಾದ ‘ಷರೀಫಾ ಬೀ’ರವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಅವರ ಭುಜಹಿಡಿದು ಉರ್ದುವಿನಲ್ಲೇ ಮಾತನಾಡಿಸಿ ಅವರಲ್ಲಿ ಛಲ ತುಂಬಿದರು. ಷರೀಫಮ್ಮನವರು, ಹೊಟ್ಟೆಪಾಡಿಗಾಗಿ ಸದ್ಯ ಪ್ಲಾಸ್ಟಿಕ್ ಸಾಮಗ್ರಿಗಳ ಬೀದಿಬದಿ ವ್ಯಾಪಾರ ನಡೆಸುತ್ತಿರುವುದನ್ನು ಕೇಳಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿಯವರು ಅವರಲ್ಲಿ ಭರವಸೆ ತುಂಬಿದರು.
ಕೆರೆ-ದಂಡೆ ನಿವಾಸಿಗಳ ಹತ್ತಾರು ಪುಟಾಣಿ ಮಕ್ಕಳು ತಮ್ಮ ಅಂಗನವಾಡಿ ಕಾರ್ಯಕರ್ತೆಯವರ ಜೊತೆ ಮಹಿಳಾ ಆಯೋಗದ ಅಧ್ಯಕ್ಷರನ್ನು ಕಾಣಲು ಹೆಜ್ಜೆ ಹಾಕುತ್ತಾ ಅವರಿದ್ದಲ್ಲಿಗೆ ಬಂದವು. ಅವರನ್ನು ಅತೀವ ಮಮಕಾರದೊಂದಿಗೆ ಡಾ ನಾಗಲಕ್ಷ್ಮಿ ಚೌಧರಿಯವರು ಮಾತಾಡಿ ಕಳಿಸಿದರು.
ಹುಳಿಯಾರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಪರಿಶೀಲನೆ ನಡೆಸಿ, ಅಲ್ಲಿನ ಅವ್ಯವಸ್ಥೆ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ಕೆಲಸ-ಕಾರ್ಯಗಳನ್ನು ತರಾಟೆಗೆ ತೆಗೆದುಕೊಂಡರು.

ವೃತ್ತಿಯಿಂದ ಸ್ವತಃ ವೈದ್ಯೆಯಾಗಿರುವ ಡಾ ನಾಗಲಕ್ಷ್ಮಿ ಚೌಧರಿಯವರು, ಹುಳಿಯಾರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ಬೆಚ್ಚಿಹೋದರು. ಆಸ್ಪತ್ರೆಯ ಶುಶ್ರೂಷಕಿಯರಿಗೆ (ನರ್ಸು) ಸ್ಟೆರಲೈಜ಼್ ಮಾಡುವ ವಿಧಾನವೇ ಗೊತ್ತಿಲ್ಲದಿದ್ದನ್ನು ಕಂಡು ಹೌಹಾರಿದರು. ಅಲ್ಲಿನ ಕೊಠಡಿಗಳು, ಸ್ಟೋರ್ ರೂಮುಗಳು, ಚಿಕಿತ್ಸಾ ಕೊಠಡಿಯಲ್ಲಿನ ದುರ್ಗಂಧ ಹಾಗೂ ಗಲೀಜನ್ನು ಕಂಡು ಸೇವಾನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿ ಪ್ರಭಾರ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಮಧುರವರನ್ನು ಉದ್ದೇಶಿಸಿ ಮಹಿಳಾ ಆಯೋಗದ ಅಧ್ಯಕ್ಷರು ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದರು. ತಹಸೀಲ್ದಾರ್ ಕೆ ಪುರಂದರ್’ರವರ ಬಳಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಚಿಕ್ಕನಾಯಕನಹಳ್ಳಿ ದಕ್ಕಲಿಗರ ಕಾಲೊನಿ ಭೇಟಿ :
ಚಿಕ್ಕನಾಯಕನಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ವಾಸವಿರುವ ದಕ್ಕಲಿಗ ಜನಾಂಗದ ಅಲೆಮಾರಿಗಳ ಕಾಲೊನಿಗೆ ಸಂಜೆ 7.00 ಗಂಟೆಯಷ್ಟೊತ್ತಿಗೆ ಭೇಟಿಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ಅವರು, ಅಲ್ಲಿನ ಮಹಿಳೆಯರ ಮೂಲಭೂತ ಹಕ್ಕಾದ ಶೌಚಾಲಯ ವ್ಯವಸ್ಥೆಯನ್ನೇ ಮಾಡಿಕೊಡಲಾಗದ ಪುರಸಭೆಯ ಮುಖ್ಯಾಧಿಕಾರಿ ಮಂಜಮ್ಮನವರನ್ನು ಕರೆ ಮಾಡಿ ಛೀಮಾರಿ ಹಾಕಿದರು. ಸ್ಥಳಕ್ಕೆ ಬಾರದೆ, ಫೋನ್ ಸ್ವಿಚ್ಚಾಫ್ ಮಾಡಿಕೊಂಡು ದುಂಡಾವರ್ತನೆ ತೋರಿದ ಮಂಜಮ್ಮ ಅವರ ಬಗ್ಗೆ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವಂತೆ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಅಲ್ಲಿ, ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಂಗನಾಥ್ ಹಾಗೂ ದಕ್ಕಲಿಗರ ಮುಖಂಡ ಡಿ ಶಾಂತರಾಜು ಹಾಜರಿದ್ದು, ಅಲೆಮಾರಿಗಳ ಸಮಸ್ಯೆಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಗಳೆರಡನ್ನೂ ಮಹಿಳಾ ಆಯೋಗದ ಅಧ್ಯಕ್ಷರಿಗೆ ಬಿಡಿಸಿ ವಿವರಿಸಿದರು. ಅಲ್ಲಿರುವ ಆಧಾರ್ ಕಾರ್ಡ್ ವಂಚಿತರು, ಪಡಿತರ ವಂಚಿತರು ಹಾಗೂ ಕನಿಷ್ಠ ಮೂಲಭೂತ ಸೌಕರ್ಯಗಳ ವಂಚಿತ ಅಲೆಮಾರಿ ಮಹಿಳೆಯರು ಮತ್ತು ಮಕ್ಕಳನ್ನು ಅತೀವ ಮಮಕಾರದಿಂದ ಕಂಡ ಡಾ ನಾಗಲಕ್ಷ್ಮಿ ಚೌಧರಿಯವರು ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಸರದಿ ಪ್ರಕಾರ ತರಾಟೆಗೆ ತೆಗೆದುಕೊಂಡರು.
ದಕ್ಕಲಿಗ ಮಕ್ಕಳ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದನ್ನು ಕೇಳಿ ಸಿಟ್ಟಾದ ಅಧ್ಯಕ್ಷರು, ಶೀಘ್ರವೇ ಮಕ್ಕಳಿಗೆ ಆಧಾರ್ ಕಾರ್ಡ್ ಹಾಗೂ ಇತರ ಕುಟುಂಬಗಳಿಗೆ ಪಡಿತರ ಒದಗಿಸಿಕೊಡದಿದ್ದರೆ, ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ದಕ್ಕಲಿಗರ-ಗಾಂಧಿನಗರ ಕಾಲೊನಿಗೆ ಹೊರಗಿನಿಂದ ಬರುವ ಕೆಲ ದೊಡ್ಡಹುಡುಗರು, ಇಲ್ಲಿನ ಸಣ್ಣಸಣ್ಣ ಮಕ್ಕಳಿಗೂ ಧೂಮಪಾನ, ಪಾನ್ ಮಸಾಲಾ, ಗ್ಲೂ-ಸೇವನೆ ಇತ್ಯಾದಿ ದುಶ್ಚಟಗಳನ್ನು ಕಲಿಸಿ ಅರಿವಿಲ್ಲದ ಅವರನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ನಾವು ಬೆಳಗಿನಿಂದ ದುಡಿಮೆಗೆ ಹೋಗಿರುತ್ತೇವೆ. ಶಾಲೆಯಿಂದ ಮನೆಗೆ ಬರುವ ಮಕ್ಕಳು ಇಂಥವರ ಪುಂಡಾಟಿಕೆಯ ದುಶ್ಚಟಗಳಿಗೆ ಬಲಿಯಾಗುತ್ತಿವೆ ಎಂದು ಪೋಷಕರು ಆರೋಪಿಸಿದಾಗ, ಚಿಕ್ಕನಾಯಕನಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೆ ಯತೀಶ್’ರವರನ್ನು ಮಹಿಳಾ ಆಯೋಗದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡು ಕೂಡಲೇ ಕಠಿಣ ಕಾನೂನಿನ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ದಕ್ಕಲಿಗ ಅಲೆಮಾರಿ ಜನಾಂಗದ ಕೀರ್ತಿ ಎಂಬ ಹೆಣ್ಣುಮಗಳು ಕೆ ಎ ಎಸ್ ಪರೀಕ್ಷಾ ತಯಾರಿಯಲ್ಲಿ ತೊಡಗಿರುವುದನ್ನು ಅವರ ತಂದೆ-ತಾಯಿಯಿಂದ ಕೇಳಿ ತಿಳಿದ ಡಾ ನಾಗಲಕ್ಷ್ಮಿ ಚೌಧರಿಯವರು, ಅತೀವ ಸಂತಸ ವ್ಯಕ್ತಪಡಿಸಿ, ಆ ಹೆಣ್ಣುಮಗಳಿಗೆ ಹಾರ ಹಾಕಿ ಶಾಲು ಹೊದೆಸಿ ಸನ್ಮಾನಿಸಿ ಸಂಭ್ರಮಿಸಿದರು.
ಅಲೆಮಾರಿಗಳ ಗಾಂಧಿನಗರದಿಂದ ಹೊರಡುವ ಮುನ್ನ, ಅಲ್ಲಿನ ಮಕ್ಕಳಿಗೆ ತಮ್ಮ ಕಾರಿನಲ್ಲಿದ್ದ ಫಲಾಹಾರದ ಬುಟ್ಟಿಗಳನ್ನು ಕೊಟ್ಟರು. ಮಕ್ಕಳು ಖುಷಿಯಿಂದ ಕೇಕೆಹಾಕಿದವು. ಉದ್ದಕ್ಕೂ ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಮಹಿಳಾ ಆಯೋಗದ ಅಧ್ಯಕ್ಷರ ಜೊತೆಗಿದ್ದರು.
ಈ ಸಂದರ್ಭದಲ್ಲಿ, ತಹಸೀಲ್ದಾರ್ ಕೆ ಪುರಂದರ್, ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ವರದಿ- ಸಂಚಲನ
ಚಿಕ್ಕನಾಯಕನ ಸೀಮೆಯಿಂದ