ಸಾಮಾನ್ಯವಾಗಿ ನಗರವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಎಲ್ಲ ಉತ್ತಮ ಸೇವೆಗಳು ದೊರೆಯುತ್ತದೆ ಎನ್ನುವುದು ಎಲ್ಲರ ಸಾಮಾನ್ಯ ಅಭಿಪ್ರಾಯ. ಆದರೆ ಜನಪ್ರತಿನಿಧಿಗಳ ಮತ್ತು ಆಡಳಿತದ ನಿರ್ಲಕ್ಷ್ಯಕ್ಕೆ ಬಲಿಯಾದರೆ ನಗರ ಪ್ರದೇಶದ ಜನರು ಕೂಡ ಹೊರತಲ್ಲ ಎನ್ನುವುದಕ್ಕೆ ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ಜನ ಮತ್ತು ಬಡಾವಣೆಯೇ ಸಾಕ್ಷಿಯಾಗಿದೆ.
ಸುಮಾರು 4-5 ವರ್ಷಗಳಿಂದ ನಗರಾಡಳಿತದ ಅಡಿಯಲ್ಲಿ ಸೇವೆ ಪ್ರಾರಂಭಿಸಿದ ಕಾಮನಬಾವಿ ಬಡಾವಣೆಯ ಕುಡಿಯುವ ನೀರಿನ ಘಟಕ ಕೋಟೆ ರಸ್ತೆ ಭುರುಜನಹಟ್ಟಿ, ಕರುವಿನ ಕಟ್ಟೆ ಸರ್ಕಲ್, ತಿಪ್ಪಜ್ಜಿ ಸರ್ಕಲ್, ಕಾಮನಬಾವಿ ಸೇರಿದಂತೆ ಸುತ್ತಮುತ್ತಲಿನ ಹಲವು ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿತ್ತು. ಅದನ್ನು ಸ್ಥಳೀಯ ಸದಸ್ಯರೊಬ್ಬರ ಸಂಬಂಧಿಗಳು ಗುತ್ತಿಗೆ ಪಡೆದು ನಿರ್ವಹಿಸುತ್ತಿದ್ದರು ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯ ನಂತರ ಗುತ್ತಿಗೆ ಕೊನೆಗೊಳಿಸಿ ಜನಪ್ರತಿನಿಧಿಯೊಬ್ಬರ ನಿರ್ದೇಶನದ ಮೇರೆಗೆ ಉಚಿತ ಕುಡಿಯುವ ನೀರು ಪೂರೈಕೆ ಘೋಷಿಸಿದ ಆಡಳಿತ ಅದನ್ನು ನಿರ್ವಹಣೆ ಮಾಡದೆ ದುರವಸ್ಥೆಯಿಂದ ಉಚಿತ ಕುಡಿಯುವ ನೀರು ಪೂರೈಕೆ ನಿಂತು ಹೋಗಿದ್ದು, ಸುತ್ತಮುತ್ತಲಿನ ನಾಗರಿಕರು ಇದಕ್ಕೆ ಕಾರಣರಾದವರಿಗೆ ಮತ್ತು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕುಡಿಯುವ ನೀರಿನ ಘಟಕ ಕೆಟ್ಟುನಿಂತು 4 ತಿಂಗಳಾಗಿದ್ದರೂ ಕೂಡ ಅದನ್ನು ತಿರುಗಿ ನೋಡದೆ ಅದರ ಗಾಜಿನ ಫಲಕಗಳು ಜಾಹೀರಾತು ಫಲಕವಾಗಿ ಮಾರ್ಪಟ್ಟಿವೆ. ಅದರ ಗಾಜಿನ ಫಲಕಗಳ ಮೇಲೆ ಹತ್ತಾರು ಜಾಹೀರಾತು ಚೀಟಿಗಳನ್ನು ಹೊಂದಿಸಿ ಜಾಹೀರಾತುದಾರರು ತಮ್ಮ ಪ್ರಾಬಲ್ಯ ಮೆರಿದಿದ್ದಾರೆ. ಮನೆ ಭೋಗ್ಯಕ್ಕೆ ಇದೆ? ನಿಮಗೆ ಉದ್ಯೋಗ ಬೇಕೇ? ಎನ್ನುವ ತರಹದ ಬೇರೆ ಬೇರೆ ಚೀಟಿಗಳನ್ನು ಅಂಟಿಸಲಾಗಿದ್ದು, ಸರ್ಕಾರಿ ಜಾಗಗಳಲ್ಲಿ ಅನುಮತಿ ಇಲ್ಲದೆ ಪ್ರಕಟಣೆ ಮತ್ತು ಜಾಹಿರಾತು ಅಂಟಿಸುವಂತಿಲ್ಲ ಆದರೂ ಇಲ್ಲಿ ಅಂಟಿಸಲಾಗಿದೆ ಮತ್ತು ಮುಖ್ಯವಾಗಿ ಕುಡಿಯುವ ನೀರು ಪೂರೈಕೆ ನಿಂತುಹೋಗಿದೆ.
ವಿಧಾನಸಭೆ ಚುನಾವಣೆ ನಂತರ ಕೇವಲ ಒಂದೆರಡು ತಿಂಗಳು ಪೂರೈಕೆ ಆದ ಉಚಿತ ಕುಡಿಯುವ ನೀರು ಸುಮಾರು ನಾಲ್ಕೈದು ತಿಂಗಳಿನಿಂದ ನಿಂತು ಹೋಗಿದ್ದು, ಅಲ್ಲೇ ಸ್ಥಳೀಯವಾಗಿ ಹತ್ತಿರದಲ್ಲೇ ಖಾಸಗಿಯವರಿಗೆ ಸೇರಿರುವ ಕುಡಿಯುವ ನೀರಿನ ಘಟಕವೊಂದು ತಲೆಯೆತ್ತಿದ್ದು, ಅದಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಇದನ್ನು ನಿರ್ವಹಣೆ ಮಾಡದೆ ನಿಲ್ಲಿಸಲಾಗಿದೆಯೇ? ಸ್ಥಳೀಯ ಆಡಳಿತಕ್ಕೆ ಸಾರ್ವಜನಿಕರು ಮನವಿ ಮಾಡಿದರೂ ದುರಸ್ತಿಗೊಳಿಸುತ್ತಿಲ್ಲ ಮತ್ತು ಶಾಸಕರಿಗೆ ತಿಳಿಸಲು ಅವರು ಸಿಗುವುದೇ ಕಷ್ಟ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಸ್ಥಳೀಯ ನಿವಾಸಿ ರಫೀಕ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, ” ಘಟಕ ಕೆಟ್ಟುನಿಂತು ಸುಮಾರು ನಾಲ್ಕೈದು ತಿಂಗಳುಗಳಾಗಿದೆ. ಸುತ್ತಮುತ್ತಲಿನ ಐದಾರು ಬಡಾವಣೆಯ ಜನರುಗಳು ಅವರ ಬಡಾವಣೆಯಲ್ಲಿ ಬೇರೆ ಕುಡಿಯುವ ನೀರಿನ ಘಟಕ ಇದ್ದರೂ ಕೂಡ ಇಲ್ಲಿನ ನೀರಿನ ಗುಣಮಟ್ಟ ಮತ್ತು ನಿರ್ವಹಣೆ ಚೆನ್ನಾಗಿದ್ದರಿಂದ ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ನಾಲ್ಕೈದು ತಿಂಗಳು ಆಗಿದ್ದರೂ ಸ್ಥಳೀಯರು ಈ ನಲ್ಲಿಯ ನೀರು ಮತ್ತು ಖಾಸಗಿಯವರ ಕುಡಿಯುವ ನೀರನ್ನು ಅವಲಂಬಿಸಿದ್ದು, ನಿರ್ವಹಣೆಗೆ ಮನವಿ ಮಾಡಿದರೂ ಶಾಸಕರು ಸೇರಿದಂತೆ ಸ್ಥಳೀಯ ಆಡಳಿತವೂ ಗಮನ ಹರಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಜನಶಕ್ತಿ ಸಂಘಟನೆ ಪುರುಷೋತ್ತಮ್ ಅವರು ಮಾತನಾಡಿ, “ಚುನಾವಣೆಯ ನಂತರ ಉಚಿತ ನೀರು ಘೋಷಿಸಿದ್ದು ಸರಿ. ಆದರೆ ಕೆಟ್ಟು ನಿಂತ ನಂತರ ಇದನ್ನು ಸರಿಪಡಿಸುವವರು ಇಲ್ಲದಂತಾಗಿದೆ. ದುರ್ಬಲ ಜನತೆ ನಲ್ಲಿಯ ನೀರನ್ನು ಆಶ್ರಯಿಸುವಂಥಾಗಿದೆ. ಇದಕ್ಕೆ ಆಡಳಿತದ ನಿರ್ಲಕ್ಷ್ಯ ಹಾಗೂ ಖಾಸಗಿಯವರ ಲಾಭಿ ಕಾರಣ ಇರಬಹುದು” ಎಂದು ಅನುಮಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಹಿತಿ ಪಡೆಯಲು ಸ್ಥಳೀಯ ನಗರಸಭೆ ಸದಸ್ಯರನ್ನು ಈ ದಿನ.ಕಾಮ್ ಸಂಪರ್ಕಿಸಿದೆ. ಆದರೆ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ನಗರಸಭೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಶ್ರೀರಂಗ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಕುಡಿಯುವ ನೀರಿನ ಘಟಕ ದುರಸ್ತಿ ಕುರಿತು ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿದ್ದು, ಅದರ ರಿಪೇರಿ ಮತ್ತು ನಿರ್ವಹಣೆಗೆ ಟೆಂಡರ್ ಕರೆದಿದ್ದೇವೆ. ಶೀಘ್ರದಲ್ಲೇ ಸರಿಪಡಿಸಿ ಜನತೆಗೆ ನೀರು ಪೂರೈಸಲಾಗುತ್ತದೆ. ನಗರದ ಒಟ್ಟು 19 ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಇ- ಟೆಂಡರ್ ಕರೆದಿದ್ದು, ಡಿಸೆಂಬರ್ 20ರ ನಂತರ ಅದನ್ನು ಅಂತಿಮಪಡಿಸಿ ಘಟಕ ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರನ್ನು ನಗರದ ಜನತೆಗೆ ಪೂರೈಕೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಲ ಮರುಪಾವತಿಗೆ ನೋಟಿಸ್, ರೈತರ ಪ್ರತಿಭಟನೆ
“ಕವಾಡಿಗರ ಹಟ್ಟಿ ನಾಗಸಮುದ್ರದಂತಹ ಕಲುಷಿತ ನೀರಿನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವಾಗ ಹಸಿ ನೆನಪಿನಲ್ಲಿರುವಾಗ ಅದರಿಂದಲಾದರೂ ಪಾಠ ಕಲಿಯದ ಸ್ಥಳೀಯ ಆಡಳಿತ ನಿದ್ರೆಯಲ್ಲಿರುವಂತೆ ವರ್ತಿಸುತ್ತಿದೆ. ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಜನರ ಜೀವನ-ಜೀವದ ಜೊತೆ ಚೆಲ್ಲಾಟವಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈಗಲಾದರೂ ಸ್ಥಳಿಯ ಆಡಳಿತ, ಜನಪ್ರತಿನಿಧಿಗಳು ಮತ್ತು ಶಾಸಕರು ಎಚ್ಚೆತ್ತು ಇದೇ ರೀತಿ ದುರವಸ್ಥೆಯಲ್ಲಿರುವ ನಗರದ ಬೇರೆ ಬೇರೆ ಭಾಗದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಉಪಯೋಗಕ್ಕೆ ನೀಡಬೇಕಿದೆ. ಇಲ್ಲವಾದಲ್ಲಿ ದುರಂತ ಸಂಭವಿಸಿದಾಗ ಅವರಿಗೆ ಕೊಡುವ ಚೂರು-ಪಾರು ಸೌಲಭ್ಯ, ಪರಿಹಾರದ ಹಣದಿಂದ ಅವರ ಜೀವಕ್ಕೆ, ಸಾವು ನೋವಿಗೆ ಬೆಲೆ ಕಟ್ಟಲಾಗದು. ಇದನ್ನು ಅರಿತು ಶೀಘ್ರ ನಿರ್ವಹಣೆ ಕೈಗೊಂಡು ಜನರ ಆರೋಗ್ಯ ಕಾಪಾಡಲಿ” ಎಂದು ಸಾರ್ವಜನಿಕರು ಈ ದಿನ.ಕಾಮ್ಗೆ ತಿಳಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು