ಕಾನೂನನ್ನು ನಾವು ಗೌರವಿಸಿದರೆ, ಕಾನೂನು ನಮ್ಮನ್ನು ಗೌರವಿಸುತ್ತದೆ. ನೆಲದ ಕಾನೂನನ್ನು ಅತ್ಯಂತ ಘನತೆ ಗೌರವದಿಂದ ನೋಡಿಕೊಳ್ಳಬೇಕು ಹಾಗೂ ಪಾಲಿಸಬೇಕು ಎಂದು ನ್ಯಾಯಾಧೀಶರಾದ ಪ್ರಿಯಾಂಕಾ ಟಿ.ಕೆ. ಕರೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಮದರ್ ಡ್ರೀಮ್ಸ್ ಸಂಸ್ಥೆ (ರಿ) ಇವರ ಸಂಯುಕ್ತಾಶ್ರಯದಲ್ಲಿ ನೇರ್ಲಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಿದ್ದ ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾನೂನು ಜಾಗೃತಿ ಶಿಬಿರ ಹಾಗೂ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಭಾರತ ದೇಶವು ಅತ್ಯಂತ ಪವಿತ್ರವಾದ ದೇಶ. ಇಂತಹ ದೇಶದಲ್ಲಿ ಹುಟ್ಟಿದ ನಾವೆಲ್ಲ ಧನ್ಯರು. ಹಾಗಾಗಿ ಈ ನೆಲದ ಕಾನೂನನ್ನು ಅತ್ಯಂತ ಘನತೆ ಗೌರವದಿಂದ ನೋಡಿಕೊಳ್ಳಬೇಕು ಹಾಗೂ ಪಾಲಿಸಬೇಕು. ಕಾನೂನಿನ ಕಾರಣದಿಂದಾಗಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ಕಾನೂನಿನ ಮೇಲೆ ದೇಶದ ಪ್ರಗತಿ ಮತ್ತು ಭವಿಷ್ಯ ನಿಂತಿರುತ್ತದೆ, ಕಾನೂನುಗಳು ಒಂದು ದೇಶದ ಆಧಾರಸ್ತಂಭವಿದ್ದಂತೆ. ಆದ್ದರಿಂದ ಕಾನೂನುಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು, ಹಾಗೆ ಹಿರಿಯರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಬೇಕು. ಹಿರಿಯರು ನಮಗೆ ಮಾರ್ಗದರ್ಶಕರಾಗಿ, ಪೋಷಕರಾಗಿ ನಮ್ಮೆಲ್ಲರ ಬಾಳಿಗೆ ದಾರಿದೀಪವಿದ್ದಂತೆ. ಅವರನ್ನು ಘನತೆ,ಗೌರವದಿಂದ ಕಾಣಬೇಕು” ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ರಾಜಶೇಖರ ನಾಯಕ ಮಾತನಾಡಿ, “ಕಾನೂನು ಸೇವಾ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಅನೇಕ ಕಾನೂನಿನ ಸೌಲಭ್ಯಗಳಿವೆ, ಅವುಗಳನ್ನು ಪಡೆದುಕೊಳ್ಳಬೇಕು. ಕಾನೂನು ಸೇವಾ ಸಮಿತಿಯು 12 ಜನ ಸದಸ್ಯರನ್ನು ಒಳಗೊಂಡಿದ್ದು, ಯಾವುದೇ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪರಿಹರಿಸಿಕೊಳ್ಳುವ ವ್ಯವಸ್ಥೆ ಇದೆ, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಇದರ ಜೊತೆಗೆ ಕಾನೂನಿನ ಬಗ್ಗೆ ಅಪಾರವಾದ ಕಾಳಜಿ ಮತ್ತು ಜ್ಞಾನ ಎಲ್ಲರೂ ಬೆಳೆಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕರಾದ ವಸಂತ್ ವಿ ಅಸೋದೆ ಅವರು ಮಾತನಾಡಿ, “ವಾಹನ ಚಾಲಕರು ನಿಯಮಗಳನ್ನು ಮೀರಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ವಾಹನದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ, ಅದಕ್ಕೆ ನೇರ ಕಾರಣ ನಿಯಮಗಳನ್ನು ಮೀರುವುದು ಮತ್ತು ನಮ್ಮ ಸ್ವಯಂಕೃತ ಅಪರಾಧಗಳಿಂದ. ಹಾಗಾಗಿ ವಾಹನ ಚಲಾಯಿಸುವಾಗ ಅತ್ಯಂತ ಎಚ್ಚರಿಕೆಯಿಂದ, ನಿಯಮಗಳನ್ನು ಮೀರಿದಂತೆ ಚಲಾಯಿಸಬೇಕು. ನಮ್ಮನ್ನು ನಂಬಿ ಕುಟುಂಬಗಳು ಬದುಕುತ್ತಿವೆ. ಆ ಕುಟುಂಬಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ತಾಲ್ಲೂಕು ಅಧ್ಯಕ್ಷರಾದ ಮರಿಸ್ವಾಮಿಯವರು ಬೋಧಿಸಿದರು.
ಕಾರ್ಯಕ್ರಮದಲ್ಲಿ ಆಯೋಜಕರಾದ ಎಸ್ ಪರಮೇಶ್, ಮದರ್ ಡ್ರೀಮ್ ಸಂಸ್ಥೆ (ರಿ)ಕಾರ್ಯದರ್ಶಿಗಳಾದ ಡಿ ಮಹಾಂತೇಶ್, ಉಪ ತಹಸೀಲ್ದಾರ್ ಮಹಾಂತೇಶ್, ಪಶು ಸಹಾಯಕ ನಿರ್ದೇಶಕರಾದ ರಂಗಪ್ಪ, ಸಿ ಡಿ ಪಿ ಓ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಯ್ಯದ್ ನಾಸಿರ್ ಉದ್ದೀನ್, ವಕೀಲರ ಸಂಘದ ಅಧ್ಯಕ್ಷರಾದ ಆರ್ ಆನಂದ್, ವಕೀಲರ ಸಂಘದ ಉಪಾಧ್ಯಕ್ಷರಾದ ಜಿ ಮಂಜುನಾಥ್, ಕುಮಾರಪ್ಪ ಎಲ್ ಪಾಪಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಪಣ್ಣ, ಪಿಡಿಒ ಅಬ್ದುಲ್ ಮಾಲಿಕ್, ಹಿರಿಯ ನಾಗರಿಕರಾದ ಜಗಲೂರಯ್ಯ ಗಂಗಮ್ಮ, ಮೋನಿಕಾ, ಪದ್ಮಾವತಿ ಮೊದಲಾದವರು ಹಾಜರಿದ್ದರು.
