ಗ್ರಾಮಗಳಲ್ಲಿ ಕುಡಿಯುವನೀರಿನ ಅಪವ್ಯಯ ಹಾಗೂ ಆನಧಿಕೃತ ದುರ್ಬಳಕೆ ತಡೆಗಟ್ಟುವಂತೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾ.ಪಂ. ಇಒ ಶಿವಪ್ರಕಾಶ್, ಎಸ್ ಸೂಚನೆ ನೀಡಿದರು.
ಹೊಳಲ್ಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಸರಬರಾಜು ಕುರಿತು ಜರುಗಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪಿಡಿಒಗಳು ದಿನದ 24ಗಂಟೆಯಲ್ಲಿಯೂ ಕರ್ತವ್ಯದಲ್ಲಿ ಇರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ನಿರ್ವಹಣೆ ಮಾಡಬೇಕು. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಹೆಚ್ಚಿನ ಪೈಪ್ಗಳನ್ನು ಕೊಳವೆ ಬಾವಿಗಳಿಗೆ ಅಳವಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದರು.
ಕುಡಿಯುವ ನೀರಿನ ತೊಂದರೆಯಾಗದಂತೆ ನೀರು ನಿರ್ವಹಣೆ ಮಾಡಲು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಮ್ಮ ಜೊತೆಗೆ ಸದಾ ಇರುತ್ತದೆ. ಯಾವುದೇ ರೀತಿಯ ಕರ್ತವ್ಯ ನಿರ್ಲಕ್ಷ್ಯತೆ ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಇಓ ಶಿವಪ್ರಕಾಶ್ ಎಚ್ಚರಿಸಿದರು.
ಹೊಳಲ್ಕೆರೆ ವ್ಯಾಪ್ತಿಯಲ್ಲಿ 17ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿಯವರ ಬೋರ್ ವೆಲ್ಗಳನ್ನು ಗ್ರಾಮ ಪಂಚಾಯಿತಿಯಿಂದ ಬಾಡಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ವೈ.ನೀಲಕಂಠ ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಿಡಿಓಗಳು ಭಾಗವಹಿಸಿದ್ದರು.