ಕನ್ನಡ ಮೊದಲ ಸಾಮ್ರಾಜ್ಯ ಕಟ್ಟಿದವರು ಕದಂಬರು. ಕದಂಬ ರಾಜ ಮಯೂರ ವರ್ಮನಿಗೆ ಸೇನಾ ಸಂಘಟನೆ ಕಟ್ಟಲು ನೆಲೆ ಒದಗಿಸಿದ್ದು ಚಿತ್ರದುರ್ಗ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ರಾಜ್ಯಾಡಳಿತಕ್ಕೆ ಮಾನವೀಯ ಮಾರ್ಗದರ್ಶನವನ್ನು ನೀಡುತ್ತಿರುವ ಹಲವಾರು ಮಠಗಳ, ಸಾಧುಸಂತರ ನೆಲೆ ಚಿತ್ರದುರ್ಗ” ಎಂದು ಅವರು ಹೇಳಿದರು.
“ಭಾಷಾವಾರು ರಾಜ್ಯ ವಿಂಗಡನೆಯಾಗಿ 68 ವರ್ಷಗಳು ಕಳೆದಿವೆ. ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದೆ. ಕೃಷಿ, ಕೈಗಾರಿಕೆಮ ಸೇವಾ ವಲಯಗಳಲ್ಲಿ ಬಹಳಷ್ಟು ಪ್ರಗತಿಯಾಗಿದೆ” ಎಂದು ಅವರು ತಿಳಿಸಿದರು.
ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಕನ್ನಡ ಬಾವುಟಗಳನ್ನು ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಬಳಿಕ, ಸಚಿವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಶಾಸಕ ಕೆ.ಸಿ.ವೀರೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಸ್.ಜೆ.ಸೋಮಶೇಖರ್ ಇದ್ದರು.