ಸಾವಯವ ಕೃಷಿ ಮತ್ತು ಸಿರಿಧಾನ್ಯಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ, ಹೊಲದಲ್ಲಿ ಬೆಳೆಯುವ ಸೊಪ್ಪು ಸೆದೆ ನಮ್ಮ ಆಹಾರದ ಭಾಗ ಎಂದು ಬದುಕು ಬಯಲು ಶಾಲೆಯ ಮಾರ್ಗದರ್ಶಕಿ ಕವಿತಾ ತಿಳಿಸಿದರು.
ಬದುಕು ಬಯಲು ಶಾಲೆ ಕಲ್ಲಹಳ್ಳಿ ಗೊಲ್ಲರ ಹಟ್ಟಿ, ಬದುಕು ಬಯಲು ಶಾಲೆ ಬೆಂಗಳೂರು,
ಸಂವಾದ ಯುವ ಸಂಪನ್ಮೂಲ ಕೇಂದ್ರ ಚಿತ್ರದುರ್ಗ ಇವರ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ತೋಪುರಮಾಳಿಗೆ ಗ್ರಾಮದಲ್ಲಿ ರೈತ ಮಹಿಳೆ ರತ್ನಮ್ಮರ ಹೊಲದಲ್ಲಿ ಆಯೋಜಿಸಿದ್ದ ಸಾವಯವ ಪದ್ಧತಿಯಲ್ಲಿ ಬೆಳೆದ ತೊಗರಿ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
“ಸಾವಯವ ಬೇಸಾಯ ಮಾಡುವುದರಿಂದ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಗುವಂತಹ ಅನುಕೂಲಗಳನ್ನು ಗ್ರಾಮಸ್ಥರಿಗೆ ಜಾಗೃತಿಯ ಜೊತೆಗೆ ಪ್ರಸ್ತುತ ಬಳಸುತ್ತಿರುವ ನಿಮ್ಮ ಸಿರಿಧಾನ್ಯದ ಆಹಾರ ಪದ್ಧತಿಯನ್ನು ಹಾಗೆಯೇ ಮುಂದುವರಿಸುವುದು ಉತ್ತಮ ಸಂಗತಿಯಾಗಿದೆ” ಎಂದರು.
“ಹಳ್ಳಿಯ ಹೊಲಗಳಲ್ಲಿ ಬೆಳೆಗಳ ನಡುವೆ ಬೆಳೆಯುವ ಸೊಪ್ಪು ಸೆದೆಗಳು ಕಳೆಗಳಲ್ಲ, ಸೊಪ್ಪು ಸೆದೆಗಳು ಕೂಡ ನಾವು ಆಹಾರದಲ್ಲಿ ಸೇವಿಸುವ ಭಾಗಗಳೇ ಆಗಿವೆ. ಬೆಳೆಗಳಿಗೆ ಹೆಚ್ಚಿನ ಲಾಭ ಸಿಗಲಿ ಎನ್ನುವ ಕಾರಣಕ್ಕೆ ಆಧುನಿಕ ಕೀಟ ನಾಶಕ, ಕಳೆ ನಾಶಕಗಳನ್ನು ಹೊಡೆದು ಆರೋಗ್ಯಕ್ಕೆ ಬೇಕಾಗಿರುವ ಸೊಪ್ಪುಗಳನ್ನು ಇಲ್ಲವಾಗಿಸುವುದು ಬೇಡ. ನಮ್ಮ ಪ್ರಾದೇಶಿಕವಾಗಿ ಬೆಳೆಯುವ ನವಧಾನ್ಯಗಳ ಆಹಾರ ಉತ್ಪನ್ನಗಳನ್ನು ನಮ್ಮ ಹೊಲದಲ್ಲೇ ಬೆಳೆದು ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಗಣಿ ಗೊಬ್ಬರ, ಇತರೆ ಸಾಕು ಪ್ರಾಣಿಗಳಿಂದ ಬರುವ ಗೊಬ್ಬರ ಬಳಸಿ ಯಾವುದೇ ಖರ್ಚಿಲ್ಲದೆ ರೈತರು ಬೆಳೆಗಳನ್ನು ಆರೋಗ್ಯಯುತವಾಗಿ ಸಾವಯವ ಬೇಸಾಯ ಪದ್ಧತಿಯಲ್ಲಿ ಬೆಳೆಯುವುದಕ್ಕೆ ಹಂತ ಹಂತವಾಗಿ ಅಳವಡಿಸಿಕೊಳ್ಳುವುದು ಮತ್ತು ಸಾವಯವ ಬೇಸಾಯ ಮುಂದುವರಿಸುವುದು ಬಹುತೇಕ ಮುಖ್ಯವಾಗಿದೆ” ಎಂದು ರೈತರೊಂದಿಗೆ ಚರ್ಚಿಸಿದರು.
ಕೃಷಿ ಇಲಾಖೆಯ ಬೊಮ್ಮಲಿಂಗಪ್ಪ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗುವಂತಹ ಯೋಜನೆಗಳು,ವಿಮೆ, ಇತರೆ ಉಪಯುಕ್ತ ಯೋಜನೆಗಳನ್ನು ಬಳಸಿಕೊಳ್ಳಲು ಮಾಹಿತಿ ನೀಡಿದರು.
ರೈತ ಮಹಿಳೆ ರತ್ನಮ್ಮ ಅವರ ಹೊಲದಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ತೊಗರಿಯ ಬೆಳೆ ಮತ್ತು ಕಲ್ಲಂಗಡಿ ಹಣ್ಣು ಈ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಕಡಿಮೆ ಕರ್ಚಿನಲ್ಲಿ ಬೆಳೆದದ್ದನ್ನು ತಮ್ಮ ವೈಯುಕ್ತಿಕ ಅನುಭವವನ್ನು ಹಂಚಿಕೊಂಡರು.
ಬದುಕು ಬಯಲು ಬೇಸಾಯ ಶಾಲೆ ಕಲ್ಲಹಳ್ಳಿ ಗೊಲ್ಲರ ಹಟ್ಟಿಯ ಯುವ ರೈತ ಗಿರೀಶ್ ಮಾತನಾಡಿ,
“ಸಾವಯವ ಬೇಸಾಯ ತನ್ನ ಹಳ್ಳಿಯ ಸುತ್ತಮುತ್ತ ಪಸರಿಸಲು ಪ್ರತಿಯೊಬ್ಬ ರೈತರೂ ಅಳವಡಿಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದು, ಈಗಾಗಲೇ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆ ಮತ್ತು ತೊಗರಿ ಬೆಳೆಯನ್ನು ಬೆಳೆದು ಯಶಸ್ವಿಯಾಗಿದೆ. ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯಲು ನೈಸರ್ಗಿಕವಾಗಿ ಸಿಗುವ ಸಂಪನ್ಮೊಳಗಳನ್ನು ಬಳಸಿಕೊಂಡು ಜೀವಾಮೃತಾ, ಬೀಜಾಮೃತ ಅಗ್ನಿ ಅಸ್ತ್ರ ಮತ್ತು ಬೋರಾನ್ನಂತಹ ನೈಸರ್ಗಿಕ ಔಷಧವನ್ನು ಹೊಲದಲ್ಲಿ ನೇರವಾಗಿ ತಯಾರಿಸಿ ಬಳಸುತ್ತಿದ್ದು, ಮಣ್ಣಿಗೆ ಯಾವುದೇ ರೀತಿಯ ರಾಸಾಯನಿಕಗಳು ಸೇರಬಾರದು ಎಂಬುದು ನಮ್ಮ ಮುಖ್ಯ ಉದ್ದೇಶ. ನಮ್ಮ ಹಳ್ಳಿಯ ಮಟ್ಟದಲ್ಲಿ ಶುರುವಾಗಿರುವ ಈ ಸಾವಯವ ಬೇಸಾಯವು ಪ್ರತಿ ಹಳ್ಳಿಗೂ ಹಬ್ಬಲಿ ಎನ್ನುವುದು ನನ್ನ ಆಶಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಾನವ ಬಂಧುತ್ವ ವೇದಿಕೆ ಹೋರಾಟ ಬ್ರಾಹ್ಮಣರ ವಿರುದ್ಧವಲ್ಲ, ಬ್ರಾಹ್ಮಣ್ಯದ ವಿರುದ್ಧ: ಸಾಹಿತಿ ರಂಜಾನ್ ದರ್ಗಾ
ತೋಪುರಮಾಳಿಗೆ ಗ್ರಾಮಸ್ಥರು, ಕಲ್ಲಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಮತ್ತು ಹಿರಿಯ ರೈತರು ಭಾಗವಹಿಸಿ ಸಾವಯವ ಬೇಸಾಯ ಕುರಿತು ಮಾಹಿತಿ ತಿಳಿದುಕೊಂಡರು. ನಂತರ ಸಾವಯವ ಬೇಸಾಯ ಪದ್ಧತಿಯನ್ನು ಚರ್ಚಿಸಿ ಅಳವಡಿಸಿಕೊಳ್ಳುವುದರ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು.