ಬಾಬಾ ಸಾಹೇಬರ ಶಿಕ್ಷಣಕ್ಕೆ ತೊಡಕಾಗಬಾರದೆಂದು, ಮಗುವಿನ ಸಾವಿನ ವಿಷಯವನ್ನೂ ತಿಳಿಸದೆ ನೋವನ್ನು ತನ್ನಲ್ಲೇ ಅದುಮಿಟ್ಟುಕೊಂಡ ಸಹನಾಮೂರ್ತಿ ರಮಾಬಾಯಿ ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಚಿತ್ರದುರ್ಗದ ಡಾ. ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ ಪಿ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಚಿಕ್ಕವಯಸ್ಸಿಗೆ ಅಂಬೇಡ್ಕರರನ್ನು ಮದುವೆಯಾದರು. ಅವರ ಎಲ್ಲ ಹೋರಾಟ, ತ್ಯಾಗಕ್ಕೆ ಆಕ್ಷೇಪಿಸದೇ, ಹೆಗಲಾಗಿ ನಿಂತು ಭಾರತೀಯರಿಗೆ ಮಾತೆಯಾಗಿದ್ದಾರೆ. ಆಕೆಯ ತ್ಯಾಗ, ಬಾಬಾರ ಮೇಲಿನ ಪ್ರೀತಿ, ಸಂಸಾರದ ಹೊಣೆ ನಿಭಾಯಿಸಿದ ರೀತಿ, ಭಾರತದ ಚರಿತ್ರೆಯನ್ನು ಬದಲಾಯಿಸುವಂತೆ ಅಂಬೇಡ್ಕರ್ ವ್ಯಕ್ತಿತ್ವ ರೂಪಿಸುವಲ್ಲಿ ಆಕೆಯ ಪಾತ್ರ ಅಜರಾಮರವಾಗಿದೆ. ಸಮಾನತೆ ಬಯಸುವವರ ಆತ್ಮದಲ್ಲಿ ಜೈ ಭೀಮ್ ನಾಮ ಇರುವವರೆಗೂ ರಮಾಬಾಯಿ ಎಂಬ ಹೆಸರು ಅಚ್ಚಳಿಯದೇ ಉಳಿಯುತ್ತದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
“ಸಗಣಿ ಮಾರಿ ಅಂಬೇಡ್ಕರವರ ಓದಿಗೆ ಸಹಕರಿಸಿ, ತಮ್ಮ ಜೀವನ ತ್ಯಾಗ ಮಾಡಿ ಶೋಷಿತರ ಕತ್ತಲೆಯ ಬಾಳಿಗೆ ಸೂರ್ಯನನ್ನು ನೀಡಿದ ಮಹಾತಾಯಿ ರಮಾಬಾಯಿ. ಅಲ್ಲದೆ ಅನಕ್ಷರತೆಯ ಪರಿಣಾಮ ಅರಿತಿದ್ದ ರಮಾಬಾಯಿಯವರು ತನ್ನಂತೆಯೇ ಬೇರೆ ಮಹಿಳೆಯರು ಅನುಭವಿಸಬಾರೆದಂದು ತಮ್ಮ ಪತಿಯ ಜೊತೆಗೂಡಿ ಇಡೀ ಜೀವನದುದ್ದಕ್ಕೂ ಶೋಷಿತರು, ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡುವ ಮೂಲಕ ಅನನ್ಯವಾದ ಸಾಮಾಜಿಕ ಕೊಡುಗೆ ನೀಡಿದ್ದಾರೆ” ಎಂದರು.
“ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ನಿರಂತರವಾಗಿ ಸಹಕಾರ ನೀಡಿದ, ಶ್ರಮವಹಿಸಿದ ಮಾತೆ ರಮಾಬಾಯಿ. ಅಂಬೇಡ್ಕರ್ ಅವರ ಯಶಸ್ಸಿಗಾಗಿ ಮಾಡಿದ ತ್ಯಾಗ, ಸಾಮಾಜಿಕ ತುಡಿತದ ಮಾದರಿ ನಡೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಚರಿತ್ರೆ ಪಠ್ಯಕ್ಕೆ ಸೇರ್ಪಡೆಯಾಗಬೇಕು. ಸಮಸ್ತ ಮಹಿಳೆಯರಿಗೆ ರಮಾಬಾಯಿ ಅವರು ಆದರ್ಶವಾಗಿದ್ದಾರೆ. ಅಲ್ಲದೆ ಸರ್ಕಾರದಿಂದ ರಮಾಬಾಯಿ ಜಯಂತಿ ಆಚರಣೆ ಮಾಡುವಂತೆ ಘೋಷಿಸಿ, ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪರಶುರಾಂಪುರ ತಾಲೂಕು ಕೇಂದ್ರಕ್ಕಾಗಿ ಫೆ.10ಕ್ಕೆ ಚಳುವಳಿ; ಅಖಂಡ ಕರ್ನಾಟಕ ರೈತ ಸಂಘ
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸುಮಾ, ಉಷಾ, ಉಪನ್ಯಾಸಕರಾದ ಈ ನಾಗೇಂದ್ರಪ್ಪ, ಶಾಂತಮ್ಮ, ಶಕುಂತಲಾ, ಸಚಿನ್ ಗೌತಮ್, ಬೆಸ್ಕಾಂ ತಿಪ್ಪೇಸಾಮಿ, ಗಿರಿಜಾ, ತಿಪ್ಪಮ್ಮ, ತಿಪಟೂರು ಮಂಜು, ಬನ್ನಿಕೋಡ್ ರಮೇಶ ಸೇರಿದಂತೆ ಇತರರು ಇದ್ದರು.
