ದಕ್ಷಿಣ ಕನ್ನಡ | ಬಿಜೆಪಿ ಸೋಲಿಸಿ ಜಾತ್ಯತೀತ ಅಭ್ಯರ್ಥಿ ಗೆಲ್ಲಿಸಿ: ಡಿವೈಎಫ್ಐ ಕರೆ

Date:

Advertisements

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವು ಕಳೆದ ಎರಡು ಅವಧಿಯಿಂದ ಭಾರತ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದಕ್ಕೆ ತಳ್ಳಿದೆ ಎಂದು ಡಿವೈಎಫ್ಐ ಆರೋಪಿಸಿದ್ದು, ಈ ಬಾರಿ ಯುವಜನತೆ ಬಿಜೆಪಿಯನ್ನು‌ ಸೋಲಿಸಬೇಕು ಎಂದು ಕರೆ ನೀಡಿದೆ.

ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಮಂಗಳೂರು ನಗರದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, “ಬಿಜೆಪಿಯ ಕಾರ್ಪೊರೇಟ್ ಶ್ರೀಮಂತರ ಪರವಾದ ಆರ್ಥಿಕತೆ ಮತ್ತು ಮತೀಯ ದ್ವೇಷದ ರಾಜಕಾರಣವು ದೇಶದ ಭವಿಷ್ಯವನ್ನೇ ಹಾಳುಗೆಡವಿದೆ. ಹಾಗಾಗಿ ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಸೋಲಿಸಿ ಜಾತ್ಯತೀತ ಪಕ್ಷ ಇಂಡಿಯಾ ಕೂಟದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಬೆಂಬಲಿಸಬೇಕು” ಎಂದರು.

“ರೈತ, ಕಾರ್ಮಿಕ ವರ್ಗದ ಬದುಕು ಶೋಚನೀಯ ಹಂತಕ್ಕೆ ತಲುಪಿದ್ದು, ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದಷ್ಟು ಏರಿಕೆಯಾಗಿದೆ. ಇನ್ನು ಚುನಾವಣೆಯ ವೇಳೆ ನೀಡಿದ ಭರವಸೆಗಳೆಲ್ಲವನ್ನು ಈವರೆಗೂ ಈಡೇರಿಸದೆ ಕೇವಲ ಮತೀಯ ಉನ್ಮಾದ ಸೃಷ್ಟಿಸಿ ಪ್ರಶ್ನಿಸುವ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕುವ, ದೇಶದ ಸಂವಿಧಾನದ ಆಶಯಗಳಿಗೆ ಘಾಸಿಗೊಳಿಸುವ ಫ್ಯಾಸಿಸ್ಟ್ ಮಾದರಿಯ ಸರ್ವಾಧಿಕಾರಿ ಧೋರಣೆಗಳನ್ನು ಅನುಸರಿಸಿದ ಜನವಿರೋಧಿ ಬಿಜೆಪಿಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು” ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪರವಾಗಿ ವಿನಂತಿಸಿದರು.

Advertisements

“ನರೇಂದ್ರ ಮೋದಿ ಸರ್ಕಾರ ವ‌ರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸದೆ ಯುವಜನ ವಿರೋಧಿಯಾಗಿ ವರ್ತಿಸಿದೆ. 2012ರ ಅವಧಿಯಲ್ಲಿ ಪ್ರತಿ ವರ್ಷ ಕನಿಷ್ಟ 75 ಲಕ್ಷ ಸೃಷ್ಟಿಯಾಗುತ್ತಿದ್ದ ಉದ್ಯೋಗ ಮೋದಿ ಆಡಳಿತದ ಅವಧಿಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಡಿ ಖಾಲಿ ಬಿದ್ದಿರುವ 9.64 ಲಕ್ಷ ಉದ್ಯೋಗವನ್ನು ಈವರೆಗೂ ಭರ್ತಿಗೊಳಿಸಲು ಕ್ರಮ‌ ಕೈಗೊಂಡಿಲ್ಲ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ 2014ರಲ್ಲಿ ಶೇ 5.44ರಷ್ಟು ಇದ್ದದ್ದು 2023 ಅಕ್ಟೋಬರ್ ತಿಂಗಳಿಗೆ ಶೇ.10.05ಕ್ಕೆ ತಲುಪಿದೆ ಎಂದರೆ ಹತ್ತಿರದ ಮಾಯನ್ಮಾರ್, ಬಾಂಗ್ಲಾದಂತಹ ದೇಶಗಳಿಗಿಂತಲೂ ಕೆಳಮಟ್ಟದ ಸ್ಥಾನದಲ್ಲಿದೆ ಎಂದರ್ಥ” ಎಂದು ಹೇಳಿದರು.

“ಇಂದು ದೇಶದ ಯುವಜನರು ನಿರುದ್ಯೋಗದ ಸಮಸ್ಯೆಯ ಕಾರಣಕ್ಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಈ ಬಗ್ಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿ ಯುವಜನರು ಆತ್ಮಹತ್ಯೆಗೆ ಶರಣಾಗುತ್ತಿರುವುದೆಂದರೆ ನಿರುದ್ಯೋಗದ ಕರಾಳತೆ ಎಷ್ಟಿರಬೇಕೆಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನೊಂದೆಡೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಒಡೆತನಕ್ಕೆ ವಹಿಸಿಕೊಡಲಾಗುತ್ತಿದೆ” ಎಂದು ಹೇಳಿದರು.

“ಯುವಜನರ ಆಸಕ್ತಿಯ ಕ್ರೀಡಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಭಾರತದಲ್ಲಿ ಕ್ರೀಡಾಪಟುಗಳಿಗೆ ಬಲವಾದ ಅಡಿಪಾಯದ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆಯಾದರೆ, ಕ್ರೀಡಾ ಪ್ರಾಧಿಕಾರಗಳೆಲ್ಲವೂ ಸಂಪೂರ್ಣ ಆಡಳಿತ ಪಕ್ಷದ ರಾಜಕಾರಣಿಗಳ ಹಿಡಿತದಲ್ಲಿವೆ. ಭಾರತೀಯ ಯುವ ಮಹಿಳಾ ಕುಸ್ತಿಪಟುಗಳಿಗೆ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬಿಜೆಪಿ ಸಂಸದನಿಂದಲೇ ಲೈಂಗಿಕ ದೌರ್ಜನ್ಯಗಳಿಗೆ ಮೋದಿ ಭಾರತದಲ್ಲಿ ಕ್ರಮಗಳೇ ಇಲ್ಲ. ಇನ್ನು ಕ್ರಿಕೆಟ್ ಕೇವಲ ಅಧಿಕಾರಸ್ಥರ, ಪ್ರಭಾವಿಗಳ ಆಟವಾಗಿ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಬಿಸಿಸಿಐ ಮುಖ್ಯಸ್ಥ ಅಮಿತ್ ಶಾ ಮಗ ಜೈಶಾ ಲೋಕಸಭಾ ಚುನಾವಣೆ ವೇಳೆಯೇ ಐಪಿಎಲ್(IPL) ಕ್ರಿಕೆಟ್ ಪಂದ್ಯದ ಆಯೋಜನೆ ಕೇವಲ ವ್ಯಾಪಾರ ಮಾತ್ರವಲ್ಲದೆ ದೇಶದ ಯುವಜನರ ಗಮನವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ” ಎಂದು ಆರೋಪಿಸಿದರು.

“ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿಯೂ ಇವೆಲ್ಲದರಿಂದ ಹೊರತಾಗಿಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗವಕಾಶದ ಕೊರತೆ, ಆರ್ಥಿಕ ಹಿಂಜರಿತಗಳಿಂದ ಜಿಲ್ಲೆಯಲ್ಲಿಯೂ ನಿರುದ್ಯೋಗದ ಸಮಸ್ಯೆ ವ್ಯಾಪಕವಾಗಿದೆ. ಕಳೆದ 33 ವರ್ಷಗಳಿಂದ ಬಿಜೆಪಿ ಸತತ ಗೆದ್ದು ಬರುತ್ತಿದ್ದೆಯಾದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಉದ್ಯಮಗಳನ್ನು, ಕೈಗಾರಿಕೆಗಳನ್ನು ಸ್ಥಾಪಿಸುವ ಯಾವೊಂದು ಪ್ರಯತ್ನಗಳೂ ಆಗಿಲ್ಲ. ಉದ್ಯೋಗವನ್ನೇ ಸೃಷ್ಟಿಸದೆ ಪರಿಸರಕ್ಕೆ ಮಾರಕವಾದ ಎಂಆರ್‌ಪಿಎಲ್‌ನಂತಹ ಕಂಪೆನಿಗಳಲ್ಲಿ ನಡೆದ ಎಲ್ಲ ಉದ್ಯೋಗ ನೇಮಕಾತಿಗಳಲ್ಲಿ ಜಿಲ್ಲೆಯ ಯುವಜನರಿಗೆ ಕನಿಷ್ಟ ಸಣ್ಣ ಪಾಲೂ ಸಿಗಲಿಲ್ಲ. ಮೀನುಗಾರಿಕೆ, ಪ್ರವಾಸೋದ್ಯಮದಂತಹ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿಯೂ ಉದ್ಯೋಗ ಸೃಷ್ಟಿಸುವ ಹಲವು ಅವಕಾಶಗಳಿದ್ದರೂ ಬಿಜೆಪಿ ಸಂಸದರ ದೂರದೃಷ್ಟಿಯ ಕೊರತೆ ಜಿಲ್ಲೆಗೆ ಉದ್ಯೋಗ ಸೃಷ್ಟಿಸುವಲ್ಲಿ ಹಿನ್ನಡೆಯಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಕೋವಿಡ್ ಕಾಲದಲ್ಲಿ ಚಿಕಿತ್ಸೆ ಹೆಸರಲ್ಲಿ ನಡೆಸಿದ ಲೂಟಿಗಳೇ ಇದಕ್ಕೆಲ್ಲಾ ಜೀವಂತ ಉದಾಹರಣೆಗಳು” ಎಂದರು.

“ಬಿಜೆಪಿ ಇಂತಹ ಎಲ್ಲ ವೈಫಲ್ಯಗಳನ್ನು ಸರಿಪಡಿಸದೆ ಕೇವಲ ತಮ್ಮ ಮತೀಯ ರಾಜಕಾರಣಕ್ಕೆ ಜಿಲ್ಲೆಯ ಯುವಜನರನ್ನು ಕಾಲಾಳುಗಳಾಗಿ ಬಳಸಿಕೊಳ್ಳುತ್ತಿದೆ. ಮತ್ತದನ್ನು ಮುಂದುವರಿಸಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುವಜನ ವಿರೋಧಿ ಬಿಜೆಪಿಯನ್ನು ಸೋಲಿಸುವುದು ದೇಶದ ಸಂವಿಧಾನದ ಉಳಿವು, ಜಿಲ್ಲೆಯ ಅಭಿವೃದ್ಧಿಯ ಮಟ್ಟಿಗೆ ಅನಿವಾರ್ಯವಾಗಿದೆ. ಉದ್ಯೋಗದ ಹಕ್ಕನ್ನು ಸಂವಿಧಾನದ ಹಕ್ಕಾಗಿಸುವ, ನಿರುದ್ಯೋಗ ಭತ್ಯೆ ಸಹಿತ ನವ ಯುವಜನ ನೀತಿಗಳನ್ನು ತಯಾರುಗೊಳಿಸುವ ಒತ್ತಡವನ್ನು ಮುಂದಿನ ಸರ್ಕಾರದ ಆದ್ಯತೆಯಾಗುವಂತೆ ನೋಡಿಕೊಳ್ಳುವುದು ಯುವಜನರ ರಾಜಕೀಯ ಕರ್ತವ್ಯವಾಗಿದೆ”‌ ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ

“ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು, ಪ್ರಧಾನವಾಗಿ ಯುವಜನರು ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಸೋಲಿಸಿ ಜಾತ್ಯತೀತ ಪಕ್ಷ ಇಂಡಿಯಾ ಕೂಟದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಬೆಂಬಲಿಸಬೇಕು” ಎಂದು ಜಿಲ್ಲೆಯ ಯುವಜನರಲ್ಲಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪರವಾಗಿ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ವಿನಂತಿಸಿದರು.

ಪತ್ರಿಕಾ ಪ್ರಕಟಣೆ ತಿಳಿಸುವ ವೇಳೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X