ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್ 9ರಂದು ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಧರ್ಮಸ್ಥಳವನ್ನು ದಾಟಿ, ರಾಜ್ಯದಲ್ಲಿ ಹೋರಾಟಕ್ಕೆ ನಾಂದಿ ಹಾಡಿದೆ. ಆದರೆ, ಸೌಜನ್ಯ ಪ್ರಕರಣಕ್ಕೂ ಮುನ್ನ 2002ರಿಂದ 2012ರವರೆಗೆ ಸುಮಾರು 90ಕ್ಕೂ ಹೆಚ್ಚು ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ
ಹನ್ನೊಂದು ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿನ ಹೋರಾಟ ಮತ್ತೆ ಭುಗಿಲೆದ್ದಿದೆ. ಸೌಜನ್ಯಳಿಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿ ಸೋಮವಾರ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಮಂಗಳವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸೌಜನ್ಯ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕೆಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.
ಪ್ರಕರಣದ ತನಿಖೆ-ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್, ಆರೋಪಿ ಸಂತೋಷ್ ರಾವ್ನನ್ನು ನಿರ್ದೋಷಿಯೆಂದು ಜೂನ್ 16ರಂದು ತೀರ್ಪು ನೀಡಿತು. ಈ ಬೆನ್ನಲ್ಲೇ, ಹೋರಾಟದ ಕಿಚ್ಚು ರಾಜ್ಯಾದ್ಯಂತ ಪಸರಿಸುತ್ತಿದೆ. ನಿಜವಾದ ಅರೋಪಿಗಳನ್ನು ಬಂಧಿಸಬೇಕು. ಅಮಾಯಕನನ್ನು ಪ್ರಕರಣದಲ್ಲಿ ಸಿಲುಕಿಸಿ, ಅಪರಾಧಿಗಳನ್ನು ಬಚಾವ್ ಮಾಡಲು ಯತ್ನಿಸಿದ ಪ್ರತಿಯೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ರಾಜ್ಯಾದ್ಯಂತ ಕೇಳಿಬರುತ್ತಿವೆ.
ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್ 9ರಂದು ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಧರ್ಮಸ್ಥಳವನ್ನು ದಾಟಿ, ರಾಜ್ಯದಲ್ಲಿ ಹೋರಾಟಕ್ಕೆ ನಾಂದಿ ಹಾಡಿದೆ. ಆದರೆ, ಸೌಜನ್ಯ ಪ್ರಕರಣಕ್ಕೂ ಮುನ್ನ 2002ರಿಂದ 2012ರವರೆಗೆ ಸುಮಾರು 90ಕ್ಕೂ ಹೆಚ್ಚು ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದ್ದಾರೆ. ಆ ಎಲ್ಲ ಪ್ರಕರಣಗಳು ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗಿವೆ ಎಂದು ಅವರು ಹೇಳುತ್ತಾರೆ. ಅಂತಹ ಪ್ರಕರಣಗಳಲ್ಲಿ 80ರ ದಶಕದಲ್ಲಿ ನಡೆದಿದ್ದ ಪದ್ಮಲತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ಒಂದು.
17 ವರ್ಷದ ಬಾಲಕಿ ಪದ್ಮಲತಾ ಸಿಪಿಐ(ಎಂ) ಕಾರ್ಯಕರ್ತ ದೇವಾನಂದ್ ಅವರ ಮಗಳು. 1987ರಲ್ಲಿ ಆಕೆಯನ್ನು ಅಪಹರಿಸಿ, 39 ದಿನಗಳ ಕಾಲಕೂಡಿ ಹಾಕಿ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. 40ನೇ ದಿನ ಗೋಣಿಚೀಲದಲ್ಲಿ ತುಂಬಿದ ಆಕೆಯ ಮೃತದೇಹ ನೇತ್ರಾವತಿಯಲ್ಲಿ ಪತ್ತೆಯಾಗಿತ್ತು. ಈ ಕೃತ್ಯದ ವಿರುದ್ಧ ಹೋರಾಟಗಳು ನಡೆದವಾದರೂ, ಅಪರಾಧಿಗಳು ಪತ್ತೆಯಾಗಲಿಲ್ಲ. ದಿನ ಕಳೆದಂತೆ ಪ್ರಕರಣ ಮುಚ್ಚಿಯೇ ಹೋಯಿತು.
ಅಂದಹಾಗೆ, 1987ರಲ್ಲಿ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿತ್ತು. ಧರ್ಮಸ್ಥಳದಲ್ಲಿಯೂ ಚುನಾವಣೆ ನಡೆಯಬೇಕಿತ್ತು. ಆದರೆ, ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಗೆ, ನಿಖರವಾಗಿ ಹೇಳಬೇಕೆಂದರೆ ಧರ್ಮಸ್ಥಳ ಧರ್ಮಾಧಿಕಾರಿಗೆ ಚುನಾವಣೆ ನಡೆಸುವುದು ಇಷ್ಟವಿರಲಿಲ್ಲ. ಹಾಗಾಗಿ, ಧರ್ಮಸ್ಥಳ ಪಂಚಾಯತಿಯ ಸೀಟುಗಳನ್ನು ಅಲ್ಲಿ ಪ್ರಾಬಲ್ಯ ಹೊಂದಿದ್ದ ಪಕ್ಷಗಳಿಗೆ ಹಂಚಿಕೆ ಮಾಡಿ, ಅವಿರೋಧ ಆಯ್ಕೆ ಮಾಡಲು ಅವರು ಇಚ್ಛಿಸಿದ್ದರು ಎಂದು ಹೇಳಲಾಗಿದೆ.
“ಎಲ್ಲ ಪಕ್ಷಗಳ ಮುಖಂಡರನ್ನೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಭೆ ಕರೆದಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ಗೆ ಸೀಟು ಹಂಚಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ತಕರಾರು ತೆಗೆದಿದ್ದ ಸಿಪಿಐ(ಎಂ) ಮುಖಂಡರು ‘ತಮಗೂ ಸೀಟು ಹಂಚಿಕೆಯಾಗಬೇಕು. ಇಲ್ಲದಿದ್ದರೆ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿದ್ದರು. ಆದರೆ, ಅವರ ಮಾತಿಗೆ ಕಿವಿಗೊಡಲಿಲ್ಲ. ಅಸಮಾಧಾನಗೊಂಡ ಸಿಪಿಐ(ಎಂ) ನಾಯಕರು ಧರ್ಮಸ್ಥಳದಲ್ಲಿಯೂ ಚುನಾವಣೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು” ಎಂದು ಈದಿನ.ಕಾಮ್ಗೆ ತಿಮರೋಡಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮತ್ತೆ ಮೇಲೆದ್ದ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಮುಖ್ಯಮಂತ್ರಿ ಹೊಗಳಿ ಪತ್ರ ಬರೆದ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದಲ್ಲಿ ಸಿಪಿಐ(ಎಂ)ನಿಂದ ಪದ್ಮಲತಾ ಅವರ ತಂದೆ ದೇವಾನಂದ್ ಕಣಕ್ಕಿಳಿದಿದ್ದರು. ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾರನೆ ದಿನವೇ ಪದ್ಮಲತಾ ನಾಪತ್ತೆಯಾದರು. 40 ದಿನಗಳ ನಂತರ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರಗೈದು, ಕೊಲೆ ಮಾಡಲಾಗಿತ್ತು.
“ಧರ್ಮಸ್ಥಳದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ಇಲ್ಲಿ ಏನೇ ಆಗಬೇಕಿದ್ದರೂ, ಧರ್ಮಸ್ಥಳ ಟ್ರಸ್ಟ್ನವರೇ ನಿರ್ಧರಿಸುತ್ತಾರೆ. ಅವರು ಅಂದುಕೊಂಡಂತೆಯೇ ನಡೆಯಬೇಕು. ಅವರ ಮಾತಿಗೆ ವಿರೋಧ ವ್ಯಕ್ತವಾದರೆ, ಅವರನ್ನು ಮುಗಿಸುತ್ತಾರೆ. ಇಲ್ಲಿ ಅವರದ್ದೇ ಆಡಳಿತ. ಹಾಗಾಗಿಯೇ, ಇಲ್ಲಿ ನಡೆಯುವ ಅಸಹಜ, ಅನುಮಾನಾಸ್ಮದ ಸಾವುಗಳಿಗೆ ನ್ಯಾಯ ಸಿಕ್ಕಿಲ್ಲ. ಅಪರಾಧಿಗಳು ಪತ್ತೆಯಾಗುವುದಿಲ್ಲ” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಸೌಜನ್ಯಳ ಸೋದರ ಮಾವ ವಿಠಲ್ ಆರೋಪಿಸಿದ್ದಾರೆ.