ಕಾಂಗ್ರೆಸ್ನ ಒಳಗೆ ಆಂತರಿಕ ಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ ತಂಡ, ಡಿಕೆಶಿ ತಂಡ, ಜಾರಕಿಹೊಳಿ ತಂಡ ಎಂಬ ಹಲವು ಭಾಗಗಳಾಗುತ್ತಿವೆ. ಈ ಮಧ್ಯೆ ಪ್ರಿಯಾಂಕ್ ಖರ್ಗೆ ಕೂಡಾ ಮುಖ್ಯಮಂತ್ರಿ ಸ್ಥಾನದ ಹಂಬಲದಲ್ಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಹಸ್ತದ ಒಳಗೆಯೇ ಆಪರೇಷನ್ ಹಸ್ತ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ 30ರಿಂದ 40 ಮಂದಿ ಶಾಸಕರು ಹೊರಬರುತ್ತಾರೆ. ಈ ಭಯದಿಂದ ಕಂಗೆಟ್ಟ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಪಕ್ಷಾಂತರಗೊಳ್ಳುತ್ತಿದ್ದಾರೆಂಬ ಸುಳ್ಳು ಹಬ್ಬಿಸುತ್ತಿದೆ. ಆದರೆ ಯಾವುದೇ ಕಾರ್ಯಕರ್ತರು ಬಿಜೆಪಿಯಿಂದ ಹೋಗುವುದಿಲ್ಲ” ಎಂದರು.
“ಬೆಳಗಾವಿ ಅಧಿವೇಶನದ ಬಳಿಕ ಕರ್ನಾಟಕ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಆಗಲಿದೆ. ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವೆಲ್ಗಳು ಬಿದ್ದಿವೆ. ಯಾವಾಗ ಬೇಕಾದರೂ ಈ ಸರ್ಕಾರ ಬೀಳಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ. ಕೇವಲ 6 ತಿಂಗಳಲ್ಲಿ 300ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ಅಧ್ಯಯನ ನಡೆಸಲು ಯಾವುದೇ ಮಂತ್ರಿಗಳು ತೆರಳಲಿಲ್ಲ. ನಾವು ಬರ ಅಧ್ಯಯನ ನಡೆಸಲು ಹೋದಾಗ ಜನರು ಕಣ್ಣೀರಿಟ್ಟಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಇಬ್ಬರ ಜಗಳ ಮೂರನೆಯವರಿಗೆ ಲಾಭ | ಸತೀಶ್ ಸಿಎಂ ಆಗೋದು ಖಚಿತ ಎಂದ ಶಾಸಕ ವಿಶ್ವಾಸ್ ವೈದ್ಯ
“ರಾಜ್ಯದಲ್ಲಿ ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಮಾತ್ರ ನಡೆಯುತ್ತಿವೆ. ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಇದ್ದ ಹಣವನ್ನು ಮರಳಿ ಪಡೆದಿದ್ದಾರೆ. ಇದು 80 ಪರ್ಸೆಂಟ್ ಭ್ರಷ್ಟ ಸರ್ಕಾರ. ಭಾಗ್ಯದ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಸಂಬಳ ಕೊಡಲೂ ಹಣವಿಲ್ಲದಷ್ಟು ಗತಿಕೇಡು ಈ ಸರ್ಕಾರಕ್ಕೆ ಬಂದಿದೆ” ಎಂದರು.