ಬೃಹತ್ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡ ಮಹತ್ವದ ದಿನವಾದ ನವೆಂಬರ್ 26 ಸುದಿನವಾಗಿದೆ. ಜಾತಿ ನಿರ್ಮೂಲನೆಗಾಗಿ ಅಂಬೇಡ್ಕರ್ ಕಾನೂನು ಕ್ರಮ ಜರುಗಿಸಿದರೂ ಕೂಡ ಈ ತಂತ್ರಜ್ಞಾನ ಜಾಗತಿಕ ಜಗತ್ತಿನಲ್ಲಿ ಜಾತೀಯತೆ ಹೆಚ್ಚಾಗಿ ಮಾನವೀಯತೆ ಮರೆಯಾಗಿದೆ ಎಂದು ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ದಿನದ ಅಂಗವಾಗಿ ಪ್ರೊ ಬಿ ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ‘ಸಂವಿಧಾನದ ಅಂಗೀಕಾರ ದಿನ’ವನ್ನು ಸ್ಮರಿಸಿಕೊಳ್ಳುವ ಮೂಲಕ ಬಾಬಾ ಸಾಹೇಬ್ ಡಾ .ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಂವಿಧಾನ ಗೀತೆ ಹಾಡುವುದರ ಜೊತೆಗೆ ದೇಶದ ಸಂವಿಧಾನದ ಪೀಠಿಕೆ ಓದಿ ಬಳಿಕ ಮಾತನಾಡಿದರು.
“ವಿಶಿಷ್ಟ ಸಂವಿಧಾನವು ಭಾರತ ದೇಶದ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿದೆ. ಬಹುಜನರ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯಿದ್ದು, ದೇಶದಲ್ಲಿ ಅಂಬೇಡ್ಕರ್ರಂತಹ ನಾಯಕರು ಹುಟ್ಟಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ” ಎಂದರು.
ವಕೀಲ ಎಚ್ ಹನುಮಂತಪ್ಪ ಮಾತನಾಡಿ, “ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ” ಎಂದರು.
ಪತ್ರಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, “ಭಾರತೀಯ ಸಂವಿಧಾನದ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಂವಿಧಾನದಲ್ಲಿ ಅನೇಕ
ಕಾನೂನು ಕ್ರಮಗಳನ್ನು ಜಾರಿಗೆ ತಂದರು. ಆದರೂ ಕೂಡ ಜಾತಿ ವ್ಯವಸ್ಥೆಯು ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಸಂಪೂರ್ಣ ನಿರ್ಮೂಲನೆಯು ಕಾನೂನು ವಿಧಾನಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಳಪೆ ಆಹಾರ ಸೇವಿಸಿ 23 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ
ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ, ಕಾಂಗ್ರೆಸ್ ಕಾರ್ಮಿಕ ಘಟಕದ ಜಂಟಿ ಕಾರ್ಯದರ್ಶಿ ರುದ್ರೇಶ್, ಕಾಂಗೈ ಕಿಸಾನ್ ಮುಖಂಡ ಮರೇನಹಳ್ಳಿ ಕುಮಾರ್, ರಂಗಣ್ಣ, ಮಲ್ಲೇಶಿ, ದೊಣ್ಣೆಹಳ್ಳಿ ಗ್ರಾ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಆಂಬೇಡ್ಕರ್ ಪುತ್ಥಳಿ ಸಮಿತಿ ಗೌರವಧ್ಯಕ್ಷ ಶಿವಣ್ಣ, ಮುಖಂಡರುಗಳಾದ ರೇವಣ್ಣ, ಪತ್ರಕರ್ತರುಗಳಾದ ಬಸವರಾಜ್, ಚಿಕ್ಕಮನಹಟ್ಟಿ ಮಂಜುನಾಥ, ಬಸವರಾಜ್, ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ, ಮಾರುತಿ, ಮಾರಪ್ಪ ಸೇರಿದಂತೆ ಇತರರು ಇದ್ದರು.