ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕೆಂದರೆ ಅದಕ್ಕೆ ತಕ್ಕಂತಹ ಉತ್ತಮ ಭಾಷಾ ಕೌಶಲ್ಯ ಬೆಳೆಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಅಂಜನಪ್ಪ ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಉದ್ಯೋಗ ಮತ್ತು ಕೌಶಲ್ಯ ಕೇಂದ್ರ ವಿಭಾಗದಿಂದ ಅಂತಿಮ ಎಂಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉನ್ನತಿ ಫೌಂಡೇಶನ್ 30 ದಿನಗಳ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಉದ್ಯೋಗ ಮಾರುಕಟ್ಟೆ ಎಂಬುದು ಕೌಶಲ್ಯಗಳ ಆಧಾರದ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಭಾಷೆ ಯಾವುದಾದರೂ ಪರವಾಗಿಲ್ಲ. ಅದರ ಪ್ರಭುತ್ವ ಸಾಧಿಸುವುದು ತುಂಬಾ ಮುಖ್ಯ, ಹಾಗಾಗಿ ಈ ತರಹದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅವುಗಳನ್ನು ಗಳಿಸಿಕೊಂಡರೆ ನೀವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ಸಂವಹನ, ಕೌಶಲ್ಯ ಕಲಿಕೆ, ಸಂದರ್ಶನ ಎದುರಿಸುವಿಕೆ ಇಂತಹ ಮುಂತಾದ ಕೌಶಲ್ಯಗಳನ್ನು ಈ ತರಹದ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಆಯೋಜನೆ ಮಾಡಿದಾಗ ಅದರ ಪ್ರಯೋಜನ ಪಡೆದುಕೊಂಡು ಯಶಸ್ವಿಯಾಗಬೇಕು” ಎಂದು ಕರೆ ನೀಡಿದರು.
“ಪ್ಲೇಸ್ಮೆಂಟ್ ಸೆಲ್ನ ಸಂಚಾಲಕ ಪ್ರೊ ವೆಂಕಟೇಶ ಬಾಬು ಮಾತನಾಡಿ, “ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಉದ್ಯೋಗ ಕೌಶಲ್ಯ ತರಬೇತಿಗಳು, ಜೀವನ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯನ್ನು ಬರೀ ಪಾಠ ಪ್ರವಚನಗಳಿಂದ ಅಷ್ಟೇ ಅಲ್ಲದೆ ಚಟುವಟಿಕೆಗಳ ಮೂಲಕ ಗುಂಪು ಚರ್ಚೆಗಳ ಮೂಲಕ ಕ್ರಿಯಾತ್ಮಕವಾಗಿ ಕಲಿಯಬಹುದು ಎಂಬುದನ್ನು ಈ ಕಾರ್ಯಾಗಾರ ತಿಳಿಸಿಕೊಟ್ಟಿದೆ. ಆ ಮೂಲಕ ಅವರಿಗೆ ಮನವರಿಕೆ ಮಾಡಿ ಮುಂದಿನ ಉದ್ಯೋಗ ಮಾರುಕಟ್ಟೆಗೆ ಸದೃಢಗೊಳ್ಳುವಲ್ಲಿ ಬೇಕಾಗುವ ಎಲ್ಲ ರೀತಿಯ ಪೂರ್ವ ತಯಾರಿ ಒದಗಿಸಿದೆ” ಎಂದು ಹೇಳಿದರು.
“ಪ್ರತಿ ವರ್ಷ ಕಾಲೇಜಿನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂಬುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಉನ್ನತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಪವನ್ ಮಾತನಾಡಿ, ‘ನಮ್ಮ ಸಂಸ್ಥೆಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ರೀತಿಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಇಂತಹ ಕಾರ್ಯಕ್ರಮಗಳನ್ನು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೋಸ್ಕರ ಆಯೋಜನೆ ಮಾಡುವುದಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳನ್ನು ಮಾಡುತ್ತಿರುವುದು ಸ್ವಾಗತಾರ್ಹ’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆಗಸ್ಟ್ 21ರಂದು ಬೃಹತ್ ಉದ್ಯೋಗ ಮೇಳ: ಸಚಿವ ಈಶ್ವರ ಖಂಡ್ರೆ
ಸಂಪನ್ಮೂಲ ವ್ಯಕ್ತಿ ಅಪೂರ್ವ ಮಾತನಾಡಿ, “ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹುಮುಖ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ಪಾಲ್ಗೊಂಡರೆ ಏನನ್ನಾದರೂ ಕಲಿಯಲು ಸಾಧ್ಯ. ಆಗ ಕ್ರಿಯಾತ್ಮಕತೆ, ಹೊಸತನ ತಮ್ಮಲ್ಲಿ ಮೂಡಿಬರಲು ನೆರವಾಗುತ್ತದೆ. ಹಾಗಾಗಿ ಕಲಿಯುವಾಗ ಒಳಗೊಳ್ಳುವಿಕೆ ತುಂಬಾ ಅನುಕೂಲ ಮಾಡುತ್ತದೆ. ಅದನ್ನು ರೂಢಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳಾದ ಮಾರುತಿ, ಸ್ವಪ್ನ, ರಮೇಶ್, ರವಿ, ಮಮತಾ, ಸಹನಾ, ಮಧು, ರಾಹುಲ್, ಅಶ್ವಿನಿ ಮತ್ತು ಸ್ವಾಮಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ದೇವೇಂದ್ರಪ್ಪ ಹಾಗೂ ಇತರೆ ಎಲ್ಲ ಅಧ್ಯಾಪಕರು ಇದ್ದರು.