ದಾವಣಗೆರೆ ಜಿಲ್ಲೆ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತದಲ್ಲಿ 17 ಕೋಟಿಗೂ ಹೆಚ್ಚು ಹಣದ ದುರುಪಯೋಗ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ, ಯಾವುದೇ ಕಾರಣಕ್ಕೆ ಸಮಾಪನೆ ತೆರವು ಮಾಡಬಾರದು ಎಂದು ಸಹಕಾರ ಸಂಘದ ಮಾಜಿ ನಿರ್ದೆಶಕರು ಹಾಗೂ ಸದಸ್ಯರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ ಎನ್ ಚನ್ನಬಸಪ್ಪ, ಎಂ ಎಸ್ ಮಲ್ಲಿಕಾರ್ಜುನ, ಆರ್ ಎಸ್ ಗುರು ಶಾಂತಪ್ಪ ಜಂಟಿಯಾಗಿ ಮಾತನಾಡಿ, “2009ರಿಂದ 2018ರ ಅವಧಿಯಲ್ಲಿನ ಆಡಳಿತ ಮಂಡಳಿಯಲ್ಲಿ ಇದ್ದ ಕೆಲವರು ಆಡಳಿತದಲ್ಲಿ ಲೋಪ ಎಸಗಿದ್ದು, ಕಾಯಿದೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಸಹಕಾರ ಇಲಾಖೆಯ ಅಧಿಕಾರಿಗಳಿಂದ ಕಲಂ 65, 68, 69ರ ಅಡಿಯಲ್ಲಿ ತನಿಖೆ ನಡೆಸಿ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತವನ್ನು ಸಮಾಪನೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
“ಅಂದಿನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರ ಅಭಿಪ್ರಾಯಗಳಿಗೆ ಕಿವಿಗೊಡದೆ ಏಕಪಕ್ಷೀಯವಾಗಿ ಏಕಸ್ವಾಮ್ಯವನ್ನು ಸಾಧಿಸುವ ಉದ್ದೇಶದಿಂದ ಆಮಿಷ ಒಡ್ಡಿ, ಬೆದರಿಸಿ ತಾನು ಹೇಳಿದಂತೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸಂಘದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? ಗದಗ | ರೈತ – ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಸಿಐಟಿಯು ಒತ್ತಾಯ
“ಸಹಕಾರ ಸಂಘದಲ್ಲಿ ರೈತರ ಚಟುವಟಿಕೆಗಳನ್ನು ಬಿಟ್ಟು ಇನ್ನಿತರ ಅಕ್ರಮ ಚಟುವಟಿಕೆ ಮಾಡುತ್ತಾ, ಒತ್ತಾಯಪೂರ್ವಕವಾಗಿ ನಿರ್ದೇಶಕರ ಸಹಿ ಪಡೆದು ಸಂಘದಲ್ಲಿ ದುರಾಡಳಿತ, ಹಣ ದುರುಪಯೋಗ ಮಾಡಿದ್ದಾರೆ. ಹಾಗಾಗಿ ಈ ಎಲ್ಲ ದುರುಪಯೋಗಗಳ ಕುರಿತು ಸಮಗ್ರ ತನಿಖೆ ನಡೆಸಿ, ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ನೂತನವಾಗಿ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತವನ್ನು ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಎನ್ ಇ ಶಿವಕುಮಾರ್, ಎಂ ಆರ್ ಕುಬೇಂದ್ರಪ್ಪ, ಹೆಚ್ ಜಿ ಮರುಳಸಿದ್ದಪ್ಪ, ಆರ್ ಜಿ ನರೇಶ್ ಸೇರಿದಂತೆ ಇತರರು ಇದ್ದರು.