ದ್ವೇಷದ ಕುದಿಯಲ್ಲಿ ಮನುಷ್ಯ ಮನುಷ್ಯನನ್ನು ನಂಬುವ ಸ್ಥಿತಿಯೇ ಇಲ್ಲ. ಇಂಥದ್ದಕ್ಕೆ ಸದಾ ಶಾಂತಿ ಬಯಸುವಂತಹ ಸಾಹಿತ್ಯ ಇಂತಹ ಎಲ್ಲ ಕಷ್ಟ, ಸವಾಲುಗಳಿಗೆ ಮಾರುತ್ತರ ನೀಡುತ್ತ ಬರುತ್ತಿದೆ ಎಂದು ನಾಡಿನ ಹಿರಿಯ ಕವಿ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.
ದಾವಣಗೆರೆ ನಗರದ ಕುವೆಂಪು ಕನ್ನಡ ಭವನದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಹಾಗೂ ವಿಮರ್ಶಕ ಪ್ರಾಧ್ಯಾಪಕ ಮತ್ತು ಡಾ ಮಹಾಂತೇಶ ಪಾಟೀಲರ ಎರಡು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
“ಪ್ರಸ್ತುತ ದಿನಗಳಲ್ಲಿ ಹೊಸ ಪುಸ್ತಕಗಳನ್ನು ಪ್ರಕಟಿಸುವುದು ಕಷ್ಟಕರ. ಅದಕ್ಕಾಗಿ ಸ್ವಯಂ ಪ್ರಕಾಶನ ಪ್ರಾರಂಭಿಸುವ ವಾತಾವರಣ ಇದೆ. ಸಾಹಿತ್ಯದ ಬಹಳ ದೊಡ್ಡ ಜವಾಬ್ದಾರಿ ಎಂದರೆ ಸಮಾಜದ ಸಂಕಷ್ಟ, ತಲ್ಲಣಗಳಿಗೆ ಉತ್ತರ ಕೊಡಬೇಕಾಗಿದೆ. ಮನುಷ್ಯರ ಸಂಬಂಧಗಳು ಹಾಳಾಗಿವೆ. ಭೂಮಿಯನ್ನು ದ್ವೇಷದ ಕುದಿಯಲ್ಲಿಟ್ಟ ಮನುಷ್ಯ ಮನುಷ್ಯನನ್ನು ನಂಬುವ ಸ್ಥಿತಿಯೇ ಇಲ್ಲ” ಎಂದರು.
“ಪರ ಧರ್ಮಗಳನ್ನು ಸಹಿಷ್ಣುತೆಯಿಂದ ನೋಡುವ ಕಾಲ ಇತ್ತು. ಆಗಲೂ ಮನುಷ್ಯರ ನಡುವೆ ವೈರುಧ್ಯತೆ, ವೈವಿಧ್ಯತೆಗಳು ಇದ್ದವು. ಹಾಗಾಗಿಯೇ ಪಂಪ, ʼಮನುಜ ಕುಲಂ ತಾನೊಂದೇ ವಲಂʼ ಎಂದಿದ್ದಾರೆ. ಬಸವಣ್ಣನವರು, ʼಅವನಾರವ, ಇವನಾರವ ಎನ್ನದೇ, ದಯವೇ ಧರ್ಮದ ಮೂಲವಯ್ಯʼ ಎಂದು ಸಾರಿದರು. ಕನ್ನಡ ಸಾಹಿತ್ಯ ಹಿಂದಿನಿಂದಲೂ ಪ್ರಭುತ್ವದ ವಿರುದ್ಧವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಕವಿರಾಜಮಾರ್ಗದಿಂದ, ವಚನ, ಕುವೆಂಪು ಸಾಹಿತ್ಯದವರೆಗೂ ಇದೇ ಕೆಲಸ ಮಾಡುತ್ತಿದೆ. ಫಲಿತಾಂಶ ಏನೇ ಇದ್ದರೂ ಹೋರಾಟ ಮಾಡುತ್ತ ಬಂದಿದೆ” ಎಂದು ತಿಳಿಸಿದರು.
“ಮಂಟೇಸ್ವಾಮಿ ಅವರು ಬಸವಣ್ಣನವರನ್ನೇ ಅನುಮಾನಿಸಿ ಸತ್ವ ಪರೀಕ್ಷೆ ಮಾಡಿದರು. ಪ್ರಸ್ತುತ ವಾತಾವರಣದಲ್ಲಿ ಮಂಟೇಸ್ವಾಮಿ ಪ್ರಸ್ತುತವಾಗುತ್ತಾರೆ. ಸಾಹಿತ್ಯವು ಸವಾಲು ಎದುರಿಸುತ್ತ ಸೌಹಾರ್ದಯುತ, ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಪೇಟೆಯ ಕವಿ ಮತ್ತು ವಿಮರ್ಶಕ ಪ್ರೊ.ವೆಂಕಟಗಿರಿ ದಳವಾಯಿ ಮಹಾಂತೇಶ ಪಾಟೀಲರ ಕವನ ಸಂಕಲನ ಚಲಿಸುವ ಗೋಡೆಗಳು ಕುರಿತು, ಡಾ ರಂಗನಾಥ ಕಂಟನಕುಂಟೆ ಪರಿಚಯ ಮಾಡಿಕೊಟ್ಟರು. ಬೆಳಕು ಬೆಳೆಯುವ ಹೊತ್ತು, ವಿಮರ್ಶಾ ಸಂಕಲನ ಕುರಿತು ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ಸಂವಾದ ನಡೆಸಿದರು.
ಈ ಸುದ್ದಿ ಓದಿದ್ದೀರಾ? ತುಂಗಭದ್ರಾ ಕ್ರಸ್ಟ್ಗೇಟ್ ಘಟನೆ | ತಕ್ಷಣವೇ ರೈತರಿಗೆ ವಿಶೇಷ ಬೆಳೆ ಪರಿಹಾರ ಘೋಷಿಸಿ: ರೈತ ಸಂಘ ಆಗ್ರಹ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಾಮದೇವಪ್ಪ, ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ವಿ ಜಯರಾಮಯ್ಯ, ಡಾ ದಾದಾಪೀರ್ ನವಿಲೇ ಹಾಳ್, ಪ್ರಕಾಶಕಿ ಸುಮಾ ಪಾಟೀಲ್, ಹಿಮಂತ್ ರಾಜ್, ಡಾ. ಮಹಾಂತೇಶ್ ಪಾಟೀಲ್, ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.