ಧಾರವಾಡದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ರೈಲಿನ ಸಿ ಕೋಚ್ನ ಗಾಜಿನ ಕಿಟಕಿಗೆ ಹಾನಿಯಾಗಿದೆ.
ದಾವಣಗೆರೆ ನಗರದ ಕರೂರು-ದೇವರಾಜ ಅರಸ್ ಬಡಾವಣೆ ಮಾರ್ಗ ಮಧ್ಯೆ ಜಿಎಂಐಟಿ ಕ್ಯಾಂಪಸ್ ಹಿಂಭಾಗ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ವಂದೇ ಭಾರತ್ ರೈಲು ಕರೂರು ಗೂಡ್ಸ್ ಶೆಡ್ ಕಡೆಯಿಂದ ದೇವರಾಜ ಅರಸು ಬಡಾವಣೆ ಮಾರ್ಗವಾಗಿ ಜಿಎಂಐಟಿ ಕ್ಯಾಂಪಸ್ ಹಿಂಭಾಗ ಚಲಿಸುತ್ತಿರುವ ವೇಳೆ ರೈಲಿನ ಎಡಬದಿಗೆ ಯಾರೋ ಕಿಡಿಗೇಡಿಗಳು ಬಲವಾಗಿ ಕಲ್ಲು ಹೊಡೆದಿದ್ದಾರೆ. ಕಲ್ಲೇಟಿನಿಂದ ರೈಲಿನ 3 ಹಾಗೂ 4ನೇ ಬೋಗಿಯ ಗಾಜು ಹೊರಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ರೈಲ್ವೆ ಅಧಿಕಾರಿಗಳು ಕಿಟಕಿ ಪರಿಶೀಲನೆ ನಡೆಸಿ ಬಳಿಕ ದಾವಣಗೆರೆ ರೈಲ್ವೆ ಪೊಲೀಸ್ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸ್ ಸಿಬ್ಬಂದಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯಿಂದ ಪ್ರಯಾಣಿಕರು ಕೆಲಕಾಲ ಆತಂಕಗೊಂಡ ದೃಶ್ಯ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ
ಬೆಂಗಳೂರು ಧಾರವಾಡ ಮಧ್ಯೆ ಜೂನ್ 27 ರಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಜರುಗಿದ್ದು, ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
“ರೈಲ್ವೆ ಸಾರ್ವಜನಿಕ ಇಲಾಖೆಯಾಗಿದ್ದು ರೈಲ್ವೆ ಸುರಕ್ಷತೆ ಕಾಯಿದೆ ಪ್ರಕಾರ ರೈಲ್ವೆ ಆಸ್ತಿಗಳಿಗೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.