ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಿರುವ 24ನೇ ಮಹಾ ಅಧಿವೇಶನ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ನೆಡೆಯುತ್ತಿದ್ದು, ನಗರದ ಬಾಪೂಜಿ ಕಾಲೇಜು ಸಭಾಂಗಣದಲ್ಲಿ 23 ಮತ್ತು 24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಧಿವೇಶನದ ಹಿನ್ನೆಲೆಯಲ್ಲಿ ಪಿಬಿ ರಸ್ತೆಯಲ್ಲಿರುವ ರೇಣುಕಾ ಮಂದಿರದಿಂದ ಬೃಹತ್ ಮೆರವಣಿಗೆ ನಡೆಯಿತು.
ಎರಡು ಆನೆ, ಪುರುಷ ಮತ್ತು ವಿಶೇಷವಾಗಿ ಮಹಿಳೆಯರ ಡೊಳ್ಳು ಕುಣಿತ, ಚಂಡೆಮದ್ದಳೆ, ಸಿದ್ದಿ ನೃತ್ಯ, ವೀರಗಾಸೆ, ರಣಕಹಳೆ, ಗೊಂಬೆಗಳ ಕುಣಿತ, ಹುಲಿ ಕುಣಿತ ಸೇರಿದಂತೆ ಅನೇಕ ಕಲಾತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. ಅದರಲ್ಲೂ ಹುಲಿವೇಷದ ಕಲಾವಿದರು ಮಾಡಿದ ಕುಣಿತ ಗಮನ ಸೆಳೆಯಿತು. ರಥದ ಒಳಗೆ ಕುಳಿತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಈಶ್ವರ್ ಖಂಡ್ರೆ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ ಸಿ ಉಮಾಪತಿ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್ ವೀರಣ್ಣ, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಸೇರಿದಂತೆ ಸಮಾಜದ ಸಾವಿರಾರು ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಗರದ ರೇಣುಕಾ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಎವಿಕೆ ರಸ್ತೆ, ಗುಂಡಿ ಸರ್ಕಲ್, ಶಾಮನೂರು ರಸ್ತೆ ಮೂಲಕ ಎಂಬಿಎ ಸಭಾಂಗಣ ತಲುಪಿತು.
“ಎಲ್ಲರ ಗಮನ ಸೆಳೆಯಬೇಕಿದ್ದ ಸಮುದಾಯದ ರಾಷ್ಟ್ರೀಯ ಅಧಿವೇಶನವೊಂದಕ್ಕೆ ಇರಬೇಕಾಗಿದ್ದ ಸಂಭ್ರಮದ ವಾತಾವರಣ ಕಂಡುಬರುತ್ತಿಲ್ಲ. ಐತಿಹಾಸಿಕವಾಗಬೇಕಿದ್ದ ಸಮಾವೇಶಕ್ಕೆ ಪ್ರಚಾರ ಹಾಗೂ ಸಮನ್ವಯತೆ ಕೊರತೆ ಕಂಡುಬಂದಿದೆ. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ ಕಟ್ಟಿಬೆಳೆಸಿದ ಮಹನೀಯರು ಮತ್ತು ಹಿರಿಯರ ಭಾವಚಿತ್ರ ಹಾಗೂ ವೇದಿಕೆಗೆ ಅವರ ಹೆಸರಿಡದಿರುವುದು ಖಂಡನೀಯ” ಎಂದು ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಮುಖಂಡರು ಬೇಸರ ವ್ಯಕ್ತಪಡಿಸಿದರು.
“ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಮಹಾ ಅಧಿವೇಶನದಲ್ಲಿ ವೀರಶೈವ ಲಿಂಗಾಯತ ಸಮಾಜದ ಎಲ್ಲ ಉಪಪಂಗಡಗಳನ್ನು ಒಳಗೊಳ್ಳಬೇಕಿತ್ತು. ಆದರೆ ಕೆಲ ಉಪಪಂಗಡಗಳ ಸ್ವಾಮೀಜಿಗಳನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ” ಎಂಬ ಕೂಗು, ಆಕ್ಷೇಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವರು ಆರೋಪಿಸಿದರು.
“ಪಕ್ಷಾತೀತವಾಗಿ ನಡೆಯಬೇಕಿದ್ದ ಅಧಿವೇಶನದಲ್ಲಿ ಒಂದೇ ಪಕ್ಷದ ನಾಯಕರು ಮುಂದಾಳತ್ವ ವಹಿಸಿರುವುದು ಖಂಡನೀಯ. ಇದು ಸಮುದಾಯದ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ? ತಿಳಿಯದಾಗಿದೆ” ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದು, ಸಮಾಜದ ಹಲವರು ಮಹಾಧಿವೇಶನ ಬಹಿಷ್ಕರಿಸುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಹಾಸಭಾದ 24ನೇ ಮಹಾಧಿವೇಶನ ಆಯೋಜಿಸಿದ್ದು, ತಿಂಗಳು ಮೊದಲೇ ಪೆಂಡಾಲ್ ನಿರ್ಮಾಣಕ್ಕೆ ಹಂದರಗಂಬ ಪೂಜೆ ನೆರವೇರಿಸಲಾಗಿತ್ತು. ಕಾರ್ಯಕ್ರಮ ಆರಂಭಕ್ಕೆ ಮುನ್ನಾದಿನವೂ ಕೂಡ ಸಿದ್ಧತೆಗಳು ಪೂರ್ಣಗೊಂಡಿರಲಿಲ್ಲ. ಆಯೋಜಕರು ಹೇಳಿದ್ದಂತೆ ಕಾರ್ಯಕ್ರಮಕ್ಕೆ 1 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹಲವು ಭಾಗಗಳಿಂದ 2ರಿಂದ 3 ಲಕ್ಷ ಮಂದಿ ಆಗಮಿಸಿದ್ದಾರೆ. ಆದರೆ ಕೇವಲ 50 ಸಾವಿರ ಕುರ್ಚಿಗಳನ್ನು ಮಾತ್ರ ಹಾಕಲಾಗಿದೆ.
ದಾವಣಗೆರೆಯಲ್ಲಿ ಇಂತಹದೊಂದು ಐತಿಹಾಸಿಕ ಅಧಿವೇಶನ ನಡೆಯುತ್ತಿದ್ದರೂ ಸದ್ದು-ಗದ್ದಲ ಕಾಣುತ್ತಿಲ್ಲ. ಸ್ವತಃ ದಾವಣಗೆರೆ ಜಿಲ್ಲೆಯಲ್ಲಿಯೇ ಬಹುಸಂಖ್ಯಾತ ವೀರಶೈವ ಸಮಾಜದವರು ಇದ್ದರೂ ಸಮಾವೇಶಕ್ಕೆ ಬರಲು ನಿರಾಸಕ್ತಿ ಮೊದಲ ದಿನ ಕಂಡುಬಂದಿದೆ. ಸಮಾವೇಶ ಸ್ಥಳವಾದ ಎಂಬಿಎ ಕಾಲೇಜು ಮೈದಾನ ಹಾಗೂ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ಗಳಿಂದ ಮಾತ್ರ ಜನರಿಗೆ ಅಧಿವೇಶನದ ಬಗ್ಗೆ ತಿಳಿಯುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ನಿಲುಗಡೆಗೆ ದಸಂಸ ಆಗ್ರಹ
ಒಟ್ಟಾರೆ ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದ್ದರೂ, ಸಮುದಾಯದ ಹಿತಕ್ಕಾಗಿ ಏನು ನಿರ್ಣಯ ಕೈಗೊಳ್ಳಲಾಗುತ್ತದೆ, ಈ ಮೂಲಕ ಒಗ್ಗೂಡಬೇಕಿರುವ ಸಮಾಜಕ್ಕೆ ಏನು ಸಂದೇಶ ತಲುಪಿಸಲಾಗುತ್ತದೆ ಮತ್ತು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.