ವಿಚಿತ್ರ ಎನ್ನಬಹುದಾದ ಪ್ರಕರಣವೊಂದರಲ್ಲಿ ಸಂಬಂಧಿಯೊಂದಿಗೆ ಸೇರಿ, ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಬಳಿಕ ತಾನೇ ನೀಡಿದ್ದ ದೂರಿನಿಂದ ಯುವತಿಯೊಬ್ಬರು ಪೊಲೀಸರ ಅತಿಥಿಯಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದೂರು ನೀಡಿದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ತನಿಖೆ ನಡೆಸಿ ಮತ್ತು ಪ್ರಕರಣ ಭೇದಿಸಿ ಬಂಧಿಸುವಲ್ಲಿ ಚನ್ನಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಮಾರಿ ತಸ್ಮೀಯ ಖಾನಂ ಮತ್ತು ಮುಜೀಬುಲ್ಲಾ ಶೇಖ್ ಬಂಧಿತ ಆರೋಪಿಗಳು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಅಮಾನುಲ್ಲಾ ಎಂಬುವರ ಮಗಳು ತಸ್ಮೀಯ ಖಾನಂ ಎಂಬುವರು ಸೆಪ್ಟೆಂಬರ್ 30ರಂದು ಮದ್ಯಾಹ್ನ ಸುಮಾರು 1.30 ಗಂಟೆ ವೇಳೆಯಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಬಂದು ಮುಖಕ್ಕೆ ಬಾಯಿಂದ ಊದಿ, ನಂತರ ನೀರಿನಂತ ದ್ರವದಿಂದ ಸಿಂಪಡಿಸಿದ್ದು, ಇದರಿಂದ ಅವಳಿಗೆ ಪ್ರಜ್ಞೆ ತಪ್ಪಿದ್ದು, ಈ ವೇಳೆ ಬೀರಿನ ಬೀಗ ಹೊಡೆದು ಅದರಲ್ಲಿದ್ದ ಸುಮಾರು 170 ಗ್ರಾಂ ಬಂಗಾರದ ಒಡವೆ ಮತ್ತು ರೂ.1.70 ಲಕ್ಷ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ್ ಹಾಗೂ ಚನ್ನಗಿರಿ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಸುರೇಶ್, ಜಗದೀಶ್, ಸಿಬ್ಬಂದಿಗಳಾದ ಎ.ಎಸ್.ಐ ಶಶಿಧರ್, ವೀರಭದ್ರಪ್ಪ, ರುದ್ರೇಶ್, ಶ್ರೀನಿವಾಸ್, ರಮೇಶ್, ಗೀತಾಬಾಯಿ, ಹಾಲಮ್ಮ ಒಳಗೊಂಡ ತಂಡವನ್ನು ತಂಡವನ್ನು ರಚಿಸಿದ್ದರು.

ಈ ತಂಡವು ತನಿಖಾ ಕಾರ್ಯಾಚರಣೆ ನಡೆಸಿದಾಗ ಪ್ರಕರಣದ ದೂರುದಾರಳಾಗಿರುವ ಕುಮಾರಿ ತಸ್ಮೀಯಖಾನಂ (26) ಇವರೇ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ತಾನು ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಶಿವಮೊಗ್ಗದ ಮುಜೀಬುಲ್ಲಾ ಶೇಖ್ ಈತನೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿರುವುದು ಹಾಗೂ ಇದು ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಆರೋಪಿತರಾದ ಕುಮಾರಿ ತಸ್ಮೀಯಖಾನಂ ಮತ್ತು ಮುಜೀಬುಲ್ಲಾ ಶೇಖ್ ಇವರಿಬ್ಬರು ಸೇರಿ ಈ ರೀತಿಯಲ್ಲಿ ಸುಳ್ಳು ಸೃಷ್ಟಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.
ಆರೋಪಿತರು ಬಂಗಾರ ಮತ್ತು ನಗದು ಹಣವನ್ನು ಆರೋಪಿತ ಮುಜೀಬುಲ್ಲಾ ಶೇಖ್ ಅವರ ಶಿವಮೊಗ್ಗ ಮನೆಯಲ್ಲಿಟ್ಟಿರುವುದರ ಬಗ್ಗೆ ಒಪ್ಪಿಕೊಂಡಿದ್ದರಿಂದ 9.5 ಲಕ್ಷ ಬೆಲೆ ಬಾಳುವ 155 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಟ್ಟು 1,27,000 ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತರನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಉದ್ಯಮಿ ಮುಮ್ತಾಝ್ ಅಲಿ ಬ್ಲ್ಯಾಕ್ಮೇಲ್ ಪ್ರಕರಣ: ಸತ್ತಾರ್ ಸೇರಿ ಮತ್ತೆ ಮೂವರ ಬಂಧನ
ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿ ಕಳುವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ನಡೆಸಿದ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
