ವಿಜಯಪುರ ನಗರದಲ್ಲಿ ಸೆ.5ರಂದು ʼವಚನ ದರ್ಶನʼ ಪುಸ್ತಕ ಬಿಡುಗಡೆ ಸಮಾರಂಭವನ್ನು ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ವಿರೋಧಿಸಿ ಖಂಡಿಸಿದೆ.
ಶರಣ ಸಂಸ್ಕೃತಿಯನ್ನು ಮತ್ತು ಲಿಂಗಾಯತ ಧರ್ಮತತ್ವಗಳನ್ನು ನಾಶಪಡಿಸುವ ಉದ್ದೇಶದಿಂದ ವಚನ ದರ್ಶನ ಪುಸ್ತಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಬಸವ ಭಕ್ತರು ಹಾಗು ಲಿಂಗಾಯತರಿಗೆ ನೋವು ತಂದಿದೆʼ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಚನ ದರ್ಶನ ಪುಸ್ತಕವನ್ನು ಪ್ರತಿ ಜಿಲ್ಲೆಗಳಲ್ಲಿ 3 ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡಿ ಬಿಡುಗಡೆ ಮಾಡುತ್ತಿರುವುದರ ಹಿಂದಿನ ಹುನ್ನಾರ ಬಯಲಾಗಬೇಕಿದೆ. ಈ ಪುಸ್ತಕ ಬಿಡುಗಡೆ ನಾಡಿನಾದ್ಯಂತ ಸಾಮಾಜಿಕ ಸ್ವಾಸ್ಥ್ಯ ಕದಡಲಿದೆ. ಹೀಗಾಗಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ನಾವು ಸಾತ್ವಿಕವಾಗಿ ವಿರೋಧಿಸುತ್ತೇವೆʼ ಎಂದು ತಿಳಿಸಿದರು.
ವಚನ ಚಳುವಳಿಯ ಆಶಯ, ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಎಂ.ಆರ್. ಶ್ರೀನಿವಾಸಮೂರ್ತಿ, ಆರ್.ಆರ್.ದಿವಾಕರ, ಡಂಕಿನ್ ಝಳಕಿ, ರಾಜಾರಾಮ್ ಹೆಗಡೆ ಮುಂತಾದವರಿಂದ ಲಿಂಗಾಯತ ಧರ್ಮ ಹತ್ತಿಕ್ಕುವ ಪ್ರಯತ್ನ ನಡೆದಿದೆʼ ಎಂದರು.
ಶರಣರ ಕ್ರಾಂತಿಯ ಹಿನ್ನೆಲೆಯನ್ನು ನೋಡದೆ ಸನಾತನ ವೈದಿಕ ದರ್ಶನದ ಚೌಕಟ್ಟಿನಲ್ಲಿ ಸೇರಿಸಿ ಅದೊಂದು ಶುಷ್ಕ ಭಕ್ತಿ ಚಳುವಳಿ ಎಂಬಂತೆ ಬಿಂಬಿಸುವ ಪ್ರಯತ್ನದ ವಿರುದ್ದ ಬಸವಾನುಯಾಯಿಗಳು ಸಾತ್ವಿಕ ಹಾಗು ತಾತ್ವಿಕ ಆಕ್ರೋಶ ಹೊಂದಿದ್ದಾರೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಹತ್ಯೆ; ವಿವಿಧ ಸಂಘಟನೆಗಳ ಪ್ರತಿಭಟನೆ
ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಹಾಗೂ ಲಿಂಗಾಯತ ಧರ್ಮ ರಕ್ಷಣಾ ವೇದಿಕೆ ಸಂಚಾಲಕ ಡಾ.ಜೆ.ಎಸ್.ಪಾಟೀಲ, ಸೇರಿದಂತೆ ಪ್ರಮುಖರಾದ ಜಿ.ಬಿ.ಸಾಲಕ್ಕಿ, ಮನಗೂಳಿ ವಿರಕ್ತಮಠದ ವಿರತೀಶಾನಂದಸ್ವಾಮೀಜಿ, ಕಲಕೇರಿ ಶಿವಾಚಾರ್ಯಸ್ವಾಮೀಜಿ, ಜಂಬುನಾಥ ಕಂಚಾಣಿ, ಬಸವರಾಜ ಕೊಂಡಗುಳಿ, ಕಲ್ಲಪ್ಪ ಕಡೆಚೂರ, ಹನುಮಂತ ಚಿಂಚಲಿ, ಮಹಾದೇವಿ ಗೋಕಾಕ, ರಾಜೇಶ್ವರಿ ಅರನಾಳ ಇತರರಿದ್ದರು.