2023ನೇ ವಿಧಾನಸಭಾ ಚುನಾವಣೆ ವೇಳೆ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಬಿಸಿಯೂಟ ನೌಲಕರರಿಗೆ ನೀಡಿದ್ದ ಆರನೇ ಗ್ಯಾರಂಟಿ ಭರವಸೆಯನ್ನು ನೆರವೇರಿಸುವಂತೆ ಆಗ್ರಹಿಸಿ ಬಿಸಿಯೂಟ ತಯಾರಕರು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ತೆರಳಿದ ಬಿಸಿಯೂಟ ತಯಾರಕರ ನಿಯೋಗ ಮನವಿ ಸಲ್ಲಿಸಿ, ಬಳಿಕ ಕಾರ್ಯಕರ್ತರು ಮಾತನಾಡಿದರು.
“ಬಿಸಿಯೂಟ ನೌಕರರಿಗಾಗಿ 6ನೇ ಗ್ಯಾರಂಟಿ ಜಾರಿ ತರುವುದು ಸೇರಿದಂತೆ ಬಿಸಿಯೂಟ ತಯಾರಕರು ನಿವೃತ್ತಿಯಾದಾಗ ₹2 ಲಕ್ಷ ಇಡುಗಂಟು ಹಣ ಮತ್ತು ಮರಣ ಪರಿಹಾರ ₹10 ಲಕ್ಷ, ಕೆಲಸದ ಭದ್ರತೆ, ಈಗ ಇರುವ ವೇತನ ₹3,600ಕ್ಕೆ ಬದಲಾಗಿ ₹6,000ಕ್ಕೆ ಹೆಚ್ಚಳ ಮಾಡುವುದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುವಂತೆ ಶಾಸಕರಿಗೆ ಮನವಿ ಮಾಡಿದರು.
“ಬರುವ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ತಾವುಗಳು ಸರ್ಕಾರಕ್ಕೆ ಒತ್ತಾಯಿಸಿ ಬಿಸಿಯೂಟ ತಯಾರಕರ ಪರವಾಗಿ ಧ್ವನಿ ಎತ್ತುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕೃತಿ ಲೋಕಾರ್ಪಣೆ
ಮನವಿ ಸ್ವೀಕರಿಸಿದ ಶಾಸಕ ಶಾಮನೂರು ಶಿವಶಂಕರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶಾಸಕರ ನಿವಾಸಕ್ಕೆ ತೆರಳಿದ ನಿಯೋಗದಲ್ಲಿ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮತ್ತು ಜಿಲ್ಲಾ ಮುಖಂಡರುಗಳಾದ ಸಿ ರಮೇಶ್, ಜ್ಯೋತಿ ಲಕ್ಷ್ಮಿ, ಸರೋಜಾ, ಮಳಲ್ಕೆರೆ ಜಯಮ್ಮ, ಪದ್ಮ, ವನಜಾಕ್ಷಮ್ಮ ರುದ್ರಮ್ಮ ಮೀನಾಕ್ಷಮ್ಮ, ಅನುಸೂಯಮ್ಮ, ಮಾಧವಿ, ಸುವರ್ಣಮ್ಮ, ನೀಲಮ್ಮ, ಮಾಣಿಕ್ಯಮ್ಮ ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಬಿಸಿಯೂಟ ತಯಾರಕ ಮಹಿಳೆಯರು ಇದ್ದರು.