ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆ, ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತವಾಗಿ, ನಿರಂತರವಾಗಿ ಗುಣಮಟ್ಟದ ಔಷಧ ದೊರೆಯುವಂತೆ ಖಾತ್ರಿಪಡಿಸುವ ಜೊತೆಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನು ಸ್ವಾಯತ್ತತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸುಧಾರಣೆ ಮಾಡಲು ಕ್ರಮಕೈಗೊಳ್ಳಲು ಡ್ರಗ್ ಆಕ್ಷನ್ ಫೋರಮ್ – ಕರ್ನಾಟಕ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ದಾವಣಗೆರೆ ಜಂಟಿಯಾಗಿ ಆಗ್ರಹಿಸಿವೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡ್ರಗ್ ಆಕ್ಷನ್ ಫೋರಮ್ – ಕರ್ನಾಟಕ ಸಂಘಟನೆಯ ಅಧ್ಯಕ್ಷ ಡಾ.ಗೋಪಾಲ ದಾಬಡೆ, “ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವನ್ನು ಬಲ ಪಡಿಸಲು, ರಾಜ್ಯದ ಎಲ್ಲಾ ಸರ್ಕಾರಿ ಸೌಲಭ್ಯಗಳಲ್ಲಿ ಗುಣಮಟ್ಟದ ಔಷಧಿಗಳ ನಿರಂತರ ಪೂರೈಕೆಯನ್ನು ಖಾತರಿಪಡಿಸುವತ್ತ ಗಮನ ಹರಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬಂದ ಯಾವುದೇ ರೋಗಿಯು ಖಾಸಗಿ ಫಾರ್ಮಸಿಗಳಿಂದ ಅಥವಾ ಜನ ಔಷಧಿ ಕೇಂದ್ರಗಳ ಅಂಗಡಿಯಿಂದ ಔಷಧಿಗಳನ್ನು ಖರೀದಿಸುವಂತಾಗಬಾರದು” ಎಂದು ಒತ್ತಾಯಿಸಿದರು.
“ಕರ್ನಾಟಕದಲ್ಲಿ ಸರಕಾರಿ ಆಸ್ಪತ್ರೆಗಳ ಹೊರಗಡೆ 1400 ಜನೌಷಧಿ ಕೇಂದ್ರಗಳು ಕೆಲಸ ಮಾಡುತ್ತಿದ್ದು ಅವಶ್ಯಕತೆ ಇರುವವರಿಗೆ ಅಗ್ಗದ ಜನರಿಕ್ ಔಷಧಗಳು ಜನರ ಕೈಗೆಟಕುವ ದರದಲ್ಲಿ ಲಭ್ಯವಿದ್ದೇ ಇದೆ. ಇದಲ್ಲದೇ ರೋಗಿಗಳಿಗೆ ನೀಡುವ ಎಲ್ಲಾ ಔಷಧಿಗಳ ಗುಣ ಪರೀಕ್ಷೆಗಳಾಗುವಂತೆ ಮಾಡಿ. ಇಲ್ಲವಾದರೆ ಕಳಪೆ ಗುಣಮಟ್ಟದ ಔಷದಿಗಳಿಂದ ಅಕ್ಟೋಬರ್ 2024 ರಲ್ಲಿ ಬಳ್ಳಾರಿಯಲ್ಲಿ ಮತ್ತು ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿದ ತಾಯಂದಿರ ಸಾವುಗಳನ್ನು ಇನ್ನಾದರೂ ತಡೆಯಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
“ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜನ ಔಷಧಿ ಕೇಂದ್ರಗಳನ್ನು ತೆಗೆದು ಹಾಕುವುದು ಸರಕಾರದ ಒಂದು ದ್ವಂದ್ವ ನೀತಿಯನ್ನು ಸರಿಪಡಿಸುತ್ತದೆ.ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ಔಷಧಿಗಳು ಉಚಿತವಾಗಿರಬೇಕು. ಅದೇ ಅವರಣದಲ್ಲಿ ಸರಕಾರದಿಂದಲೇ ಅವುಗಳ ಮಾರಾಟ ಒಂದು ದ್ವಂದ್ವ ನೀತಿಯಾಗುತ್ತದೆ. ಸರಕಾರದ ಈಗಿನ ಆದೇಶವು ಈ ದ್ವಂದ್ವ ನೀತಿಗೆ ತೆರೆ ಎಳೆಯುತ್ತದೆ. ಈಗ ಸರ್ಕಾರವು ತಾನೇ ಸ್ಥಾಪಿಸಿರುವ ಕೆಎಸ್ಎಂಎಸ್ಸಿಎಲ್ ಉಚಿತ ಔಷಧಗಳನ್ನು ಅಲ್ಲಿ ಬರುವ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಮಾಡಬೇಕು” ಎಂದು ಆಗ್ರಹಿಸಿದರು.
“2023 ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಆರೋಗ್ಯ ಸಚಿವರೊಂದಿಗೆ ಡಿಎಎಫ್-ಕೆ, ಎಸ್ಎಸ್ಕೆ-ಕೆ ಸದಸ್ಯರ ಜೊತೆ ಆದ ಸಭೆಯ ಪ್ರಮುಖ ಚರ್ಚೆ ವಿಷಯ ಇದೇ ಆಗಿತ್ತು. ಆ ನಂತರ 2025ರ ಫೆಬ್ರುವರಿಯಲ್ಲಿ ಡಿಎಎಫ್-ಕೆ, ಎಸ್ಎಸ್ಕೆ-ಕೆ ಸದಸ್ಯರುಗಳ ಸಮೇತ ಹಲವಾರು ಸಂಘಟನೆಗಳು ಉಚಿತ ಮತ್ತು ಗುಣಮಟ್ಟದ ಔಷಧಿಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗೆ ಒದಗಿಸಬೇಕು ಎಂದು ಒತ್ತಾಯಿಸಿ ಆರೋಗ್ಯ ಹಕ್ಕು ಜಾಥಾ’ವನ್ನು 15 ಜಿಲ್ಲೆಗಳಲ್ಲಿ ನಡೆಸಿದ್ದವು” ಎಂದು ಮಾಹಿತಿ ನೀಡಿದರು.
“ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಗುಣಮಟ್ಟವು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮದಂತೆ ಆಗಬೇಕು. ಉತ್ತಮ ವ್ಯವಸ್ಥೆಗಳೊಂದಿಗೆ, ಕೆಎಸ್ಎಂಎಸ್ಸಿಎಲ್ ಏಕಕಾಲದಲ್ಲಿ ಹೆಚ್ಚು ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ವಿತರಿಸಬೇಕು. ಆಗ ಜನೌಷಧಿ ಕೇಂದ್ರಗಳ ಮೇಲೆ ಅವಲಂಬನೆಯನ್ನು ಕಡಿಮೆಯಾಗುತ್ತದೆ. ಜೊತೆಗೆ ಇದು ಔಟ್ ಆಫ್ ಪಾಕೇಟ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಯತ್ನ ಮದುವೆ ಬೇಡವೆಂದು ಅಂಗಲಾಚಿದ ಬಾಲಕಿಯ ರಕ್ಷಣೆ; ಐವರ ಮೇಲೆ ದೂರು ದಾಖಲು
ಸುದ್ದಿಗೋಷ್ಟಿಯಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಶೀರಿನ್ ಬಾನು, ನೂರ್ ಫಾತೀಮಾ, ಹಸೀನಾ, ಶಾಹಿನಾ, ನಾಯಿರಾ, ಫಜ್ಲುನ್ ಬೀ, ರೇಷ್ಮಾಬಾನು ಇತರರು ಹಾಜರಿದ್ದರು.