“ಮಹಿಳೆಯರು ಪುರೋಹಿತಶಾಹಿ ವ್ಯವಸ್ಥೆ ನಿರ್ಮಿಸಿರುವ ಮೌಢ್ಯದ ಆಚರಣೆಗಳನ್ನು ಬಿಟ್ಟು ಹೊರಗೆ ಬರಬೇಕು” ಎಂದು ದಾವಣಗೆರೆ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ಅಭಿಪ್ರಾಯಪಟ್ಟರು.
ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳದಲ್ಲಿ ನಡೆದ ಹಡಪದ ಅಪ್ಪಣ್ಣನವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಬಸವಣ್ಣನವರು ದೇವರು, ಧರ್ಮದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ, ಹಾಗಾಗಿ ವಚನ ಸಾಹಿತ್ಯ ಓದಿದರೆ ಪುರೋಹಿತರ ಕಪಿಮುಷ್ಠಿಯಿಂದ ಹೊರಗೆ ಬರಲು ಸಹಾಯವಾಗುತ್ತದೆ. ಹಾಗೂ ನಾಳೆಯಿಂದ ನಿಮ್ಮ ನಿಮ್ಮ ಊರುಗಳಲ್ಲಿ ನಡೆಯುವ ನಾಗರ ಪಂಚಮಿ ಹಬ್ಬದ ದಿನ ಹಾವಿಗೆ ಹಾಲು ಹಾಕುವ ಸಂಪ್ರದಾಯ ಅತ್ಯಂತ ಅವೈಜ್ಞಾನಿಕವಾದ ಆಚರಣೆ.
ಇಂಥಹ ಮೌಢ್ಯದ ವಿರುದ್ಧ ಹೋರಾಟ ಮಾಡಿದವರು ಬಸವಣ್ಣನವರು. ಅವರ ನೆರಳಿನಂತೆ ಬಸವಣ್ಣನವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತವರು ಹಡಪದ ಅಪ್ಪಣ್ಣನವರು ಮತ್ತು ಲಿಂಗಮ್ಮ ತಾಯಿಯವರು” ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಗ್ರಾಮದ ಹಿರಿಯರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶರಣ ಕೆ. ಜಿ. ಬಸವನಗೌಡರ್ ಮಾತನಾಡಿ “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಹಾಗಾಗಿ ಎಲ್ಲರನ್ನೂ ನಾವು ಗೌರವದಿಂದ ಮಾತನಾಡಿಸಿದರೆ ಈ ಜಗತ್ತಿನಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ” ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮಪಂಚಾಯತ್ ಅಧ್ಯಕ್ಷೆ ಶರಣೆ ಆಶಾ ಸಿದ್ದೇಶ್ ಅವರು ಮಾತನಾಡಿ, “ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶ” ಎಂದರು. ಶರಣ ಕಲಿವೀರ ಕಳ್ಳಿಮನಿ ಅವರು ಮಾತನಾಡಿ “ವಿಜ್ಞಾನ ಸತ್ಯ ಅಂತಹ ಸತ್ಯವನ್ನು ಅರಿತು ಮೂಢನಂಬಿಕೆಯನ್ನು ಬಿಡಬೇಕು” ಎಂದು ತಿಳಿಸಿದರು. ಕೆ. ಜಿ. ಮಹಾಂತೇಶ ಅವರು ಮಕ್ಕಳಿಗೆ ಸಚ್ಚಾರಿತ್ರ್ಯ ಮುಖ್ಯ ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತುಂಗಾಭದ್ರಾ ನದಿ ಅಪಾಯದ ಮಟ್ಟ; ಜನ, ಜಾನುವಾರು ನದಿಗೆ ಇಳಿಸದಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೂಚನೆ.
ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಷಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಸಮಾರಂಭದಲ್ಲಿ ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟು, ಮಕ್ಕಳು ವಚನ ಪ್ರಾರ್ಥನೆ ಮಾಡಿದರು.
ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪನಾಳ್ ರುದ್ರೇಗೌಡ, ಪದಾಧಿಕಾರಿಗಳಾದ ಟಿ.ಎಂ. ಶಿವಮೂರ್ತಯ್ಯ, ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಹನುಮಂತಪ್ಪ, ವಸತಿ ನಿಲಯದ ಮೇಲ್ವಿಚಾರಕರಾದ ಕವಿತಾ ಪೋರಮ್ಮನವರ್, ಪ್ರಕಾಶ, ನಾಗರಾಜ ಕಕ್ಕರಗೊಳ್ಳ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.