ಚಾಮರಾಜನಗರದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೊಜಿಸಲಾಗಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ, ದೀನದಲಿತರ ಧೀಮಂತ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ‘ಹಿಂದುಳಿದ ವರ್ಗಗಳ ನೇತಾರರಾಗಿದ್ದ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ, ಆಡಳಿತ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
“ಈ ನಾಡು ಕಂಡ ಪ್ರಬುದ್ಧ ರಾಜಕಾರಣಿ ಡಿ. ದೇವರಾಜ ಅರಸು ಎಂದರೇ ತಪ್ಪಾಗಲಾರದು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 1915ರಲ್ಲಿ ಜನಿಸಿದ ಅರಸು ಅವರು ರೈತಾಪಿ ವರ್ಗದವರು, ಗ್ರಾಮೀಣ ಜನ-ಜೀವನವನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಹಳ್ಳಿಗಳಲ್ಲಿ ಯಾವುದೇ ವಿವಾದಗಳು, ನ್ಯಾಯಪಂಚಾಯ್ತಿಗಳನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಮೂಲಕ ಉತ್ತಮ ನಾಯಕತ್ವ ಗುಣ ಹೊಂದಿದ್ದರು. ಪಶುಸಂಗೋಪನೆ, ಕಾರ್ಮಿಕ, ವಾರ್ತಾ ಖಾತೆ ಸಚಿವರಾಗಿ ಪರಿಣಾಮಕಾರಿಯಾಗಿ ನಿಭಾಯಿಸಿದ್ದ ಅರಸು ಅವರು ಸಮಾಜದಲ್ಲಿ ಹಿಂದುಳಿದವರು, ಶೋಷಿತರ ಏಳಿಗೆಗೆ ಹತ್ತು-ಹಲವು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು” ಎಂದರು.
ಸಾಮಾಜಿಕ ಕಾಳಜಿಯ ದೂರದೃಷ್ಠಿ ಹೊಂದಿದ್ದ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿ ಇಡೀ ದೇಶದ ಗಮನ ಸೆಳೆದರು. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ, ಶೋಷಿತರನ್ನು ಮುಖ್ಯವಾಹಿನಿಗೆ ತರಲು ಜೀತಪದ್ದತಿ ನಿಷೇಧ, ಭೂಸುಧಾರಣೆಗಾಗಿ ಉಳುವವನೇ ಭೂಮಿ ಓಡೆಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಎಲ್.ಜಿ. ಹಾವನೂರ ಅಧ್ಯಕ್ಷತೆಯಲ್ಲಿ ಹಿಂದುಳಿತ ವರ್ಗಗಳ ಆಯೋಗ ರಚಿಸಿದ ಅರಸು ಅವರು ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಲ್ಪಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದರು ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಮಾತನಾಡಿ “ತಮ್ಮ ಆಧಿಕಾರ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಉತ್ತಮ ಆಡಳಿತ ನೀಡಿದ ರಾಜಕಾರಣಿಗಳಲ್ಲಿ ದೇವರಾಜ ಅರಸು ಪ್ರಮುಖರಾಗಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಅರಸು ಅವರ ಸಮುದಾಯ ಭವನಗಳು, ಪ್ರತಿಮೆಗಳು ನಿರ್ಮಿಸಬೇಕು. ಸರ್ಕಾರದ ವತಿಯಿಂದ ಅರಸು ಅವರ ಜಯಂತಿ ಕಾರ್ಯಕ್ರಮದ ಮೊದಲು ಅವರ ಜೀವನ ಸಾಧನೆ ಕುರಿತು ವಿಚಾರಸಂಕಿರಣ ಏರ್ಪಡಿಸಿ ಅವರ ಆಡಳಿತ ಸುಧಾರಣೆ, ವಿಚಾರಧಾರೆಗಳ ಬಗ್ಗೆ ಜನರಿಗೆ ಬೆಳಕು ಚೆಲ್ಲುವ ಕೆಲಸವಾಗಬೇಕು. ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಬೇಕು” ಎಂದರು.
ಮುಖ್ಯಭಾಷಣ ಮಾಡಿದ ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಕಾಳೇಗೌಡ ನಾಗವಾರ ” ಕರ್ನಾಟಕದಲ್ಲಿ ಅದರ್ಶ ಸಮಾಜ ಕಟ್ಟಿ ಸರ್ವ ಜನಾಂಗವನ್ನು ಶಾಂತಿಯ ತೋಟ ಮಾಡಲು ದೇವರಾಜ ಅರಸು ಅವರ ಶ್ರಮ ಶ್ಲಾಘನೀಯವಾದದ್ದು. ಗ್ರಾಮೀಣ ಜನರ ಬದುಕಿನ ಸುಖ ದುಖಗಳನ್ನು ಅರಿತಿದ್ದ ಅರಸು ಅವರು ಅವರ ಅಭ್ಯುದಯಕ್ಕೆ ಟೊಂಕ ಕಟ್ಟಿದ್ದರು. ಅರಸು ಅವರ ಸಂಪರ್ಕಕ್ಕೆ ಬಂದ ರಾಜಕಾರಣಿಗಳು ಮಾನವೀಯ ಕಾಳಜಿಯನ್ನು ಮೈಗೂಡಿಸಿಕೊಂಡಿದ್ದಾರೆ ” ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಇಡೀ ದೇಶದಲ್ಲಿಯೇ ಮಾದರಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಿದ ರಾಜಕಾರಣಿ ಎಂದರೇ ಅದು ದೇವರಾಜ ಅರಸು ಮಾತ್ರ. ಹಿಂದುಳಿದವರ, ದಮನಿತರ ಆಶಾಕಿರಣವಾಗಿದ್ದ ಅರಸು ಅವರು ರೈತಾಪಿ ಜನರ ಅನುಕೂಲಕ್ಕಾಗಿ ಪ್ರಮುಖ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರು. ಶಿಕ್ಷಣ, ಆರೋಗ್ಯ, ಉದ್ಯೋಗವಕಾಶಗಳಿಗೆ ಒತ್ತು ನೀಡಿದ ಅರಸು ಅವರು ಜನಮಾನಸದಲ್ಲಿ ಇಂದಿಗೂ ಚಿರಸ್ಮರಣೀಯರಾಗಿದ್ದಾರೆ’ ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ರಾಜೀವ್ ಗಾಂಧಿ ಆಧುನಿಕ ಭಾರತದ ಶಿಲ್ಪಿ : ತೆನ್ವಿರಾ ಮೈನಾ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸದ್ಭಾವನಾ ದಿನದ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ಶಶಿಧರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಸ್. ವಿಶ್ವನಾಥ್ ಸೇರಿದಂತೆ ಇನ್ನಿತರರು ಇದ್ದರು.
https://shorturl.fm/Y2udg