ಧರ್ಮಸ್ಥಳ ಆಸುಪಾಸಿನಲ್ಲಿ ಹಲವಾರು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡದಿಂದ 8ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಈ ನಡುವೆ ಹೇಳಿಕೆ ನೀಡಿರುವ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್, “ಸೋಮವಾರ ಮೂರು ಕಳೇಬರ ಸಿಕ್ಕಿದೆ” ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿನ್ನೆ(ಸೋಮವಾರ) ದಿನ, ಸಂಖ್ಯೆ 11ರ ಪ್ರದೇಶದಿಂದ ಸುಮಾರು 100 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ, ಸುಮಾರು 100 ಅಡಿ ಎತ್ತರದ ಗುಡ್ಡದ ಮೇಲೆ, ಕನಿಷ್ಠ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದೆ. ಅದರಲ್ಲಿನ ಒಂದು ಕಳೇಬರವು ಮಹಿಳೆಯದಾಗಿದೆಯೆಂದು ತಿಳಿದುಬಂದಿದೆ. ಅಲ್ಲೇ, ಹೆಂಗಸಿನ ಸೀರೆಯೂ ಪತ್ತೆಯಾಗಿದೆ ಎಂದು ತಿಳಿದುಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಗುಡ್ಡದ ಮೇಲೆ ಉತ್ಖನನ ಕಾರ್ಯಕ್ಕೆ ತೆರಳಿದ್ದ ತಂಡದ ಕೆಲವರು ಗುಡ್ಡವನ್ನು ಏರುವಾಗ ಜಾರಿಬಿದ್ದು ಗಾಯಗೊಂಡಿರುವುದಾಗಿಯೂ ವಕೀಲ ಮಂಜುನಾಥ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಕ್ಷಿ ದೂರುದಾರನಾದ ಭೀಮ ಮೊದಲು ಮಾಪನ ಮಾಡಿದ್ದ ಸಂಖ್ಯೆ 11ರ ಬದಲು. ಅದರ ಪಕ್ಕಕ್ಕೆ ಕೊಂಡೊಯ್ಯಲು ಆತನಿಗೆ ಎಸ್ಐಟಿಯವರು ಅವಕಾಶ ನೀಡಿದ್ದರಿಂದಲೇ, ನಿನ್ನೆಯ ಹೊರತೆಗೆಯುವಿಕೆಯು ಯಶಸ್ವಿಯಾಗಿದೆ. ಮೊದಲ ದಿನದ ದೂರುದಾರನ ಮಾಪಕಕ್ಕೇ ಆತ ಕಟ್ಟುಬಿದ್ದು ಅಲ್ಲೇ ಕಳೇಬರಗಳನ್ನು ಹೊರತೆಗೆಯಬೇಕೆನ್ನುವುದು ಅವೈಜ್ಞಾನಿಕ ಮಾತ್ರವಲ್ಲ. ನಿರರ್ಥಕ. ಮೊದಲ ದಿನ ತೋರಿದ್ದ ಜಾಗಗಳನ್ನು ಗುರುತಿಸಲು ಸ್ವಾತಂತ್ರ್ಯವಿರುವ ವ್ಯಕ್ತಿಗೆ ತಾನು ಮೊದಲು ಗುರುತಿಸಿದ್ದು ತಪ್ಪಾಗಿರಬಹುದೆಂದು ತಿದ್ದಿಕೊಳ್ಳಲು ಸಹಜ ಸ್ವಾತಂತ್ರ್ಯವೂ ಇದೆ ಎಂದು ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗಿನ ಎಸ್ಐಟಿ ಮತ್ತು ಶೋಧಕಾರ್ಯವನ್ನು ಮುನ್ನಡೆಸುತ್ತಿರುವ ತಂಡದ ಕಾರ್ಯಕ್ಷಮತೆಯು ಶ್ಲಾಘನೀಯ ಎಂದು ಇದೇ ವೇಳೆ ವಕೀಲ ಮಂಜುನಾಥ್ ತಿಳಿಸಿದ್ದಾರೆ.
