ಬಿಜೆಪಿಯವರು ಮತಯಾಚನೆಗೆ ಮನೆ ಹತ್ತಿರ ಬಂದಾಗ ₹15 ಲಕ್ಷ ಕೇಳಿ, ಬಳಿಕ ಮತ ಕೇಳುವಂತೆ ಹೇಳಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾರರಿಗೆ ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು.
“ಕಳೆದ ಹತ್ತು ವರ್ಷದಿಂದ ಮೋದಿಯವರು ಅಧಿಕಾರದಲ್ಲಿದ್ದಾರೆ. ಅವರನ್ನು ಈ ಬಾರಿ ಮತದಾರರು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಕಾರಣ, ಮೋದಿಯವರ ಆಶ್ವಾಸನೆಗಳು ಸುಳ್ಳಾಗಿವೆ. ಬಿಜೆಪಿಯವರು ಮತ ಕೇಳಲು ಮನೆಗೆ ಬಂದಾಗ ನಿಮ್ಮ ಪಾಸ್ ಬುಕ್ ತೋರಿಸಿ ದಯಮಾಡಿ ಹದಿನೈದು ಲಕ್ಷ ಕೊಟ್ಟು ಅನಂತರ ಮತಕೇಳಿ ಎಂದು ಪ್ರಶ್ನಿಸಿರಿ” ಎಂದರು.
“14.50 ಲಕ್ಷ ಕೋಟಿ ರೂಪಾಯಿ ಉದ್ಯಮಿಗಳ ಸಾಲಮನ್ನಾ ಆಗಿದೆಯೇ ಹೊರತು, ರೈತರ ಸಾಲದ ಕುರಿತು ಮೋದಿಯವರಿಗೆ ಖಾಳಜಿ ಇಲ್ಲವಾಗಿದೆ. 2014ರಲ್ಲಿ ಒಂದು ತೊಲ ಬಂಗಾರ ₹27,000 ಇತ್ತು. ಪ್ರಸ್ತುತದಲ್ಲಿ ₹67,000 ಆಗಿದೆ. ಜೋಶಿ ಸಾಹೇಬರು ಕೇವಲ ಹಿಂದೂ-ಮುಸ್ಲಿಂ ಎಂದು ಮತ ಕೇಳುವ ಕೆಲಸ ಬಿಡಬೇಕಿದೆ” ಎಂದು ಗುಡುಗಿದರು.

“ಮೋದಿಯವರ ಆಡಳಿತದಲ್ಲಿ ದೇಶದ ಸಾಲ ದುಪ್ಪಟ್ಟಾಗಿದೆ. ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದ ಪರಿಣಾಮ ಬಡವರು ಒಂದು ನೋಟ್ಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳಿವೆ. ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಳಸಾ ಬಂಡೂರಿ ಮಹದಾಯಿ ಯೋಜನೆಯನ್ನು ಜಾರಿಗೆ ತರುವ ಕೆಲಸವಾಗುತ್ತದೆ” ಎಂದು ಭರವಸೆ ನೀಡಿದರು.
“ಕಾಂಗ್ರೆಸ್ ಬಡವರ ಮನೆಗೆ ದುಡ್ಡು ಮುಟ್ಟಿಸುತ್ತಿದೆ. ಮೇ 7ರ ನಂತರ ಟಗರು ಗುದ್ದುವ ಹೊಡೆತಕ್ಕೆ ಜೋಶಿ ಡಬ್ಬಿ ಎಣಿಸುವ ಕೆಲಸಕ್ಕೆ ಅಣಿಯಾಗಬೇಕಿದೆ. ಬಿಜೆಪಿಯನ್ನು ಬೇರು ಸಹಿತ ಕಿತ್ತು ಬಿಸಾಕುವ ಕೆಲಸವಾಗಬೇಕು. ಬಿಜೆಪಿಯ ಕುತಂತ್ರ, ಹಗರಣವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ಈ ಸಲ ಎಲ್ಲ ಮಹಿಳೆಯರು ಸೇರಿ ಜೋಶಿಯವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಬೇಕಿದೆ. ಬಿಜೆಪಿಯನ್ನು ಸೋಲಿಸುವ ಮೂಲಕ ಹಿಂದೂ-ಮುಸ್ಲಿಂ ಎಲ್ಲರೂ ಒಂದಾಗಿ ತಕ್ಕಪಾಠ ಕಲಿಸಬೇಕಿದೆ” ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮಾತನಾಡಿ, “ಕೇಂದ್ರ ಸಚಿವರು ಒಂದು ಸಲವೂ ರೈತರ ಪರವಾಗಿ ಸಂಸತ್ತಿನಲ್ಲಿ ಧ್ವನಿಯೆತ್ತಲಿಲ್ಲ. ರೈತರಿಗೆ ಕಷ್ಟದ ಸಮಯದಲ್ಲಿ ಅವರ ಖಾತೆಗೆ ಜಮಾ ಮಾಡುವ ಕೆಲಸವನ್ನೂ ಬಿಜಪಿಯಿಂದ ಮಾಡಲಿಲ್ಲ. ಆದರೆ ನಾನು ಕೆಲಸಗಾರನೇ ಹೊರತು, ಮಾತುಗಾರನಲ್ಲ. ಹೀಗಾಗಿ ದಯಮಾಡಿ ನನಗೆ ಆಶೀರ್ವಾದ ಮಾಡಿ” ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಗದೀಶ್ ಉಪ್ಪಿನ ಮಾತನಾಡಿ, “ಈ ಸಲದ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುತ್ತಿದೆ. ಹಿಟ್ಲರ್ನ ಆಡಳಿತದಂತೆ ಪೊಳ್ಳು ಭರವಸೆಗಳ ಮೂಲಕ ನಮ್ಮನ್ನೆಲ್ಲ ಮೂರ್ಖರನ್ನಾಗಿಸಿದ್ದಾರೆ. ಮೋದಿ ಸುಳ್ಳಿನಿಂದ ನಾವೆಲ್ಲ ಸುಳ್ಳಿನ ಬಲೆಗೆ ಸಿಲುಕಿದ್ದೇವೆ. ಆದ್ದರಿಂದ ಅದನ್ನು ತಪ್ಪಿಸಿ ಮೋದಿಯನ್ನು ಸೋಲಿಸಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾಂಗ್ರೆಸ್ ಅಭ್ಯರ್ಥಿಗೆ ವಿಶ್ವಕರ್ಮ ಸಮಾಜದ ಬೆಂಬಲ
“ಬಡವರು, ಹಸಿವಿನಿಂದ ಬಳಲುತ್ತಿದ್ದವರನ್ನು ಕಾಂಗ್ರೆಸ್ ಕಾಪಾಡಿದೆ. ಉದಾಹರಣೆಗೆ ನನ್ನ ಮನೆಯ ವಿದ್ಯುತ್ ಬಿಲ್ ₹2,000 ಬರುತ್ತಿತ್ತು. ಈಗ ಸೊನ್ನೆ ಬರುತ್ತಿದೆ. ಎಲ್ಲ ಪಕ್ಷದವರೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ತ್ಯಾಗಮಯಿ ವಿನೋದ್ ಅಸೂಟಿಯನ್ನು ಗೆಲ್ಲಿಸಲು ನಾವೆಲ್ಲ ಒಂದಾಗಬೇಕು” ಎಂದರು.
ಅಜ್ಜಂಪೀರ ಖಾದರಿ, ಎನ್ ಎಚ್ ಕೋನರಡ್ಡಿ, ಜಕ್ಕಪ್ಪನವರ, ತಾಲೂಕು ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಸರ್ವ ಸದಸ್ಯರು, ಗುಡಗೇರಿ ಮತ್ತು ಸಂಶಿ ಗ್ರಾಮ ಪಂಚಾಯಿತಿಯ ಎಲ್ಲ ಪದಾಧಿಕಾರಿಗಳು ಇದ್ದರು.
