ಇಂದಿನ ಆಧುನಿಕ ಸಮಾಜದಲ್ಲಿ ಮಕ್ಕಳು ಕೇವಲ ಕಲಿಕೆಗೆ ಸೀಮಿತವಾಗಿ, ಸ್ವತಂತ್ರವಾಗಿ ಆಲೋಚನೆ ಮಾಡುವುದನ್ನೆ ಮರೆತಿದ್ದಾರೆ. ಅಂತಹ ಮಕ್ಕಳಿಗೆ ಸ್ವತಂತ್ರ ಮನೋಭಾವನೆ ಬೆಳೆಸಿಕೊಳ್ಳಲು ಮಕ್ಕಳಲ್ಲಿರು ಕಲೆಯನ್ನು ಗುರುತಿಸಿದ ರಂಗಾಯಣವು ಉತ್ತಮ ವೇದಿಕೆಯನ್ನು ರೂಪಿಸಿಕೊಟ್ಟಿದೆ ಎಂದು ಸಿಸ್ಲೇಪ್ ನಿರ್ದೇಶಕ ಡಾ.ಬಿ.ಕೆ.ಎಸ್ ವರ್ಧನ ಹೇಳಿದರು.
ಧಾರವಾಡ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್ಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿಣ್ಣರಮೇಳ-2025ರ “ಚಿಣ್ಣರ ನಾಟಕೋತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ವಿಷಯದ ಕುರಿತು ಯಾರೂ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದಿಲ್ಲ. ಇಂತಹ ಒಂದು ವಿನೂತನ ಪ್ರಯೋಗವನ್ನು ಮಕ್ಕಳಿಗಾಗಿ ರಂಗಾಯಣ ಮಾಡಿರುವುದು ಶ್ಲಾಘನೀಯ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ 12% ಜನರಿಗೆ ಮಾತ್ರ ಅರಿವಿದೆ. ಆದ್ದರಿಂದ ಸಂವಿಧಾನದಲ್ಲಿರುವ ಸಮಾನತೆ, ಸಮಾನ ಸ್ಥಾನ, ಸಹೋದರತ್ವ, ಭ್ರಾತೃತ್ವ ಭಾವನೆ, ಸ್ವಾತಂತ್ರ್ಯ ಸೇರಿದಂತೆ ಇತರೆ ಅಂಶಗಳ ಜಾಗೃತಿ ಮಕ್ಕಳಿಗೆ ಇರಬೇಕು. ಕರ್ನಾಟಕದಲ್ಲಿ ಬಸವಣ್ಣನವರು ತಮ್ಮ ತತ್ವಾದರ್ಶಗಳಿಂದ 12ನೇ ಶತಮಾನದಲ್ಲಿಯೇ ಸಂವಿಧಾನಕ್ಕೆ ಬುನಾದಿಯನ್ನು ಹಾಕಿದ್ದರು. ಮೂರು ತಿಂಗಳಲ್ಲಿ ತಯಾರಿಸುವ ನಾಟಕವನ್ನು ಕೇವಲ 25 ದಿನಗಳಲ್ಲಿ ಈ ಶಿಬಿರದಲ್ಲಿ ಸಿದ್ಧಪಡಿಸಿರುವುದು ಹೆಮ್ಮಯ ಸಂಗತಿ ಎಂದು ಶ್ಲಾಘಿಸಿದರು.
ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂವಿಧಾನ-ನಮ್ಮ ಕಲರವ ಧ್ಯೇಯವಾಕ್ಯದಡಿ ಈ ಬಾರಿಯ ಚಿಣ್ಣರಮೇಳವನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸಂವಿಧಾನದ ಕುರಿತು ಅರಿವನ್ನು ಮೂಡಲು ಸಹಕಾರಿಯಾಗಿದೆ. ಕೇವಲ ಕಲಿಕೆಗೆ ಸೀಮಿತವಾಗಿದ್ದ ಮಕ್ಕಳಿಗೆ ಅವರಲ್ಲಿರುವ ಸಂಗೀತ, ಚಿತ್ರಕಲೆ, ನೃತ್ಯ, ನಟನಾ ಕೌಶಲ್ಯ ಸೇರಿದಂತೆ ಹಲವಾರು ಕಲೆಗಳನ್ನು ಪ್ರದರ್ಶಿಸಲು ರಂಗಾಯಣವು ವೇದಿಕೆಯನ್ನು ರೂಪಿಸಿಕೊಟ್ಟಿತು. ಅದರಂತೆ ಶಿಬಿರದ ಎಲ್ಲ ಮಕ್ಕಳು ತಮ್ಮ ಕಲೆಗಳೆಗಳನ್ನು ಪ್ರದರ್ಶಿಸುವುದರೊಂದಿಗೆ ಮನರಂಜನೆಯನ್ನು ಪಡೆಯುವ ಮೂಲಕ ಚಿಣ್ಣರಮೇಳವನ್ನು ಯಶಸ್ವಿಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸುತ್ತಾರೆ: ರೆಹಮತ್ ತರೀಕೆರೆ
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿಬಿರ ನಿರ್ದೇಶಕ ಲಕ್ಷ್ಮಣ ಪಿರಗಾರ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿದರು. ಸಹೋದರತ್ವ ತಂಡ “ವೀರಗಾಸೆ” ಹಾಗೂ ಪ್ರಜಾಪ್ರಭುತ್ವ ತಂಡದವರು “ಹುಲಿ ಕುಣಿತ”ವನ್ನು ಪ್ರಸ್ತುತಪಡಿದರು. ನಂತರ ಸಮಾನತೆ ತಂಡ “ರಿಯಾಲಿಟಿ..” ನಾಟಕ ಹಾಗೂ ಸ್ವಾತಂತ್ರ್ಯ ತಂಡದವರು “ಸಂವಿಧಾನ ಶರಣಂ ಗಚ್ಚಾಮಿ” ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಜರುಗಿದವು.