ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕೀಳು ಮಟ್ಟದ ಪದ ಬಳಸಿ ಸಚಿವ ಸಂತೋಷ ಲಾಡ್ ಅವರಿಗೆ ಅವಮಾನ ಮಾಡಿದ್ದಾರೆ. ವಿಜಯೇಂದ್ರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ತಂದೆಯ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವ ವಿಜಯೇಂದ್ರ ಅವರು ತಮ್ಮ ಹೆಸರಿನ ಮುಂದಿರುವ ಯಡಿಯೂರಪ್ಪ ಎಂಬ ಪದ ತೆಗೆದುಬಿಟ್ಟರೇ ಈ ರಾಜಕಾರಣದಲ್ಲಿ ನಯಾಪೈಸೆ ಕಿಮ್ಮತ್ತಿರುವುದಿಲ್ಲ. ಯಾವುದೇ ಗಾಡ್ ಫಾದರ್ ಗಳಿಲ್ಲದೇ ತಳಮಟ್ಟದಿಂದ ಹಂತಹಂತವಾಗಿ ಬೆಳೆದ ಸಂತೋಷ್ ಲಾಡ್ ಅವರ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಮತ್ತು ನೈತಿಕತೆ ಇಲ್ಲ” ಎಂದಿದ್ದಾರೆ.
“ತನ್ನ ಸ್ವಂತ ಹಣದಲ್ಲಿ ಸಾವಿರಾರು ಬಡಜನರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಸಂತೋಷ್ ಲಾಡ್.
ಬಿಜೆಪಿಯಂತೆ ಹಾಗೆ ಸಂತೋಷ್ ಲಾಡ್ ಅವರು ಕೋವಿಡ್ ಸಮಯದಲ್ಲಿ ಮಾಸ್ಕ್-ಸ್ಯಾನಿಟೈಸರ್ ಹಗರಣ ಮಾಡಿ ಸಾವಿರಾರು ಕೋಟಿ ಲೂಟಿ ಹೊಡೆದು, ಜನರ ಹೆಣದ ಮೇಲೆ ರಾಜಕಾರಣ ಮಾಡಿಲ್ಲ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಬಿಜೆಪಿ ರಾಷ್ಟ್ರ ನಾಯಕರಿಗೆ ಆಗುತ್ತಿಲ್ಲ. ಇದರಿಂದ ಹತಾಶೆಗೊಂಡಿರುವ ವಿಜಯೇಂದ್ರ ಕ್ಷುಲ್ಲಕ ಮಾತುಗಳಾನ್ನಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.