ಕರ್ನಾಟಕದ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದ, ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸರ್ ಸಿದ್ಧಪ್ಪ ಕಂಬಳಿ ಅವರ 141ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11ರಂದು ಹುಬ್ಬಳ್ಳಿಯ ಅಳಗುಂಡಿಗೆ ಓಣಿಯಲ್ಲಿ ನಡೆಸಿದರು.
ಸರ್ ಸಿದ್ಧಪ್ಪ ಕಂಬಳಿಯವರ ವೆಬಸೈಟ್ ಅನಾವರಣಗೊಳಿಸಿದ್ದು, ಕಾರ್ಯಕ್ರಮಕ್ಕೆ ಅನುಪಸ್ಥಿತಿಯಲ್ಲಿ ಕಳುಹಿಸಿದ್ದ ವಿಡಿಯೋದಲ್ಲಿ ಬಸವರಾಜ ಹೊರಟ್ಟಿ ಮಾತನಾಡಿ, ಸರ್ ಸಿದ್ಧಪ್ಪ ಕಂಬಳಿಯವರು ಕರ್ನಾಟಕದ ಏಕೀಕರಣಕ್ಕಾಗಿ ಅವಿರತ ದುಡಿದ ಮಹಾನ್ ನಾಯಕ. ಅಂತಹ ಮಹಾನ್ ನಾಯಕರ ಕುರಿತು ಇಂದಿಗೂ ಬಹುತೇಕರಿಗೆ ಗೊತ್ತಿಲ್ಲದೇ ಇರುವುದು ದುರಂತ. ಹಾಗಾಗಿ ಈ ಮೆಮೊರಿಯಲ್ ಮ್ಯೂಸಿಯಂ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಕಂಬಳಿಯವರದ್ದು ಪ್ರಾಮಾಣಿಕತೆಯುಳ್ಳ ಮನಸ್ಸು. ನೇರನುಡಿಯ ಕಂಬಳಿಯವರು ರಾಜಕೀಯದ ಧರ್ಮರಾಯ ಇದ್ದಂತೆ. ಸರ್ ಸಿದ್ಧಪ್ಪ ಕಂಬಳಿಯವರ ಅಗಾಧವಾದ ಸಾಧನೆಯಿಂದ ಅವರು ಯಾವತ್ತಿಗೂ ಅಜರಾಮರವಾಗಿದ್ದಾರೆ. ಅವರಿಗೆ ಸಿದ್ಧಾರೂಢರ ಪ್ರೇರಣೆ ಮತ್ತು ಪ್ರಭಾವವಾಗಿದ್ದು ಒಂದು ವಿಶೇಷತೆಯಾಗಿದೆ. ಸರ್ ಸಿದ್ದಪ್ಪ ಕಂಬಳಿಯವರ ಕುರಿತು ಹುಬ್ಬಳಿಯ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದು ಅವಶ್ಯಕವಿದೆ. ಸರ್ ಸಿದ್ಧಪ್ಪ ಕಂಬಳಿಯವರನ್ನು ಹೆಚ್ಚು ಜನಕ್ಕೆ ತಲುಪಿಸುವಲ್ಲಿ ನಾವು ವಿಫಲವಾಗಿದ್ದೇವೆ. ನಾವು ಚಂದ್ರಲೋಕಕ್ಕೆ ಹೋಗಿದ್ದನ್ನು ಹೆಚ್ಚೆಚ್ಚು ಮಾತನಾಡಿಕೊಳ್ಳುತ್ತೇವೆ. ಆದರೆ, ನಮ್ಮ ನಾಡು ಬೆಳಗಿದ ಮಹನೀಯರನ್ನು ಮರೆತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, “ಎಲ್ಲೋ ದೂರದಲ್ಲಿರುವವರನ್ನು ನಾವು ನೆನಪಿಸಿಕೊಳ್ಳುತ್ತ ಕೂರುತ್ತೇವೆ. ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮವರೆ, ನಮ್ಮ ನಾಡಿನಲ್ಲೇ ಬೆಳೆದು ನಮ್ಮ ನಾಡಿಗೆ ಅದ್ಭುತ ಕೊಡುಗೆ ನೀಡಿದ ಕಂಬಳಿ ಸಿದ್ಧಪ್ಪನವರ ಇತಿಹಾಸದ ಕುರಿತು ನಮಗೆ ಗೊತ್ತಿಲ್ಲದಿರುವುದು ದುರಂತದ ಸಂಗತಿ” ಎಂದರು.
ʼಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರುʼ ಎಂಬ ಅಂಬೇಡ್ಕರ್ ಅವರ ಮಾತನ್ನು ನೆನಪಿಸಿ, “ಅಂಬೇಡ್ಕರ್ ಅವರು ಸರ್ ಸಿದ್ದಪ್ಪ ಕಂಬಳಿಯವರ ಮೂಲಕ ಬಸವಣ್ಣನವರ ವಚನ ಸಾಹಿತ್ಯವನ್ನು ಓದುವಂತಾಯಿತು. ಅಂಬೇಡ್ಕರ್ ಮತ್ತು ಸರ್ ಸಿದ್ದಪ್ಪ ಕಂಬಳಿಯವರ ನಡುವೆ ಅವಿನಾಭಾವ ಸಂಬಂಧ ಒಡಮೂಡಿತ್ತು. ವಿಶೇಷವಾಗಿ ಹುಬ್ಬಳ್ಳಿಗೆ ಒಳ್ಳೆಯ ಹೆಸರು ಬರುವುದಕ್ಕೆ ಸರ್ ಸಿದ್ಧಪ್ಪ ಕಂಬಳಿಯವರು ಮೂಲಕಾರಣವೆಂದು ಹೇಳಿದರೂ ತಪ್ಪಾಗದು. ಧಾರವಾಡ ಭಾಗದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದ್ದರೆ ಅದರ ಶ್ರೇಯಸ್ಸು ಸರ್ ಸಿದ್ದಪ್ಪ ಕಂಬಳಿಯವರಿಗೆ ಸಲ್ಲಬೇಕು. ಧಾರವಾಡದಲ್ಲಿ ಕಂಬಳಿಯವರ ಕುರಿತಾಗಿ ದೊಡ್ಡ ಮಟ್ಟದ ಸಮಾವೇಶ ನಡೆಯುವಂತಾಗಲಿ. ನಾನು ಎಲ್ಲಿಗೆ ಕರೆದರೂ ಬರುತ್ತೇನೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳ್ಲಿ ಶಿಕ್ಷಕರು ವೈಚಾರಿಕತೆ ಪ್ರಜ್ಞೆ ಬೆಳೆಸಬೇಕು: ಸಾಹಿತಿ ಪುಣ್ಯವತಿ ವಿಸಾಜಿ
ಕೆಎಲ್ಇ ಸಂಸ್ಥೆಯ ಅಶೋಕ ಶೆಟ್ಟರ್ ಮಾತನಾಡಿ, “ಸರ್ ಸಿದ್ಧಪ್ಪ ಕಂಬಳಿಯವರ ಸಹಾಯ ಮತ್ತು ಸಹಕಾರದಿಂದ ಕೆಎಲ್ಇ ಸಂಸ್ಥೆ ಇವತ್ತು ಬೃಹತಾಗಿ ಬೆಳೆಯುವುದಕ್ಕೆ ಕಾರಣವಾಗಿದೆ. ಅವರನ್ನು ಮುಂದಿನ ಪೀಳಿಗೆ ಸದಾ ನೆನಪಿಡುವ ಅವಶ್ಯವಿದೆ. ಕಂಬಳಿಯವರ ಹೆಸರು ಅಜರಾಮರವಾಗಿ ಉಳಿಯಬೇಕಾದರೆ ಹುಬ್ಬಳ್ಳಿಯ ಕಾನೂನು ಮಹಾವಿಶ್ವವಿದ್ಯಾಲಯಕ್ಕೆ ಸರ್ ಸಿದ್ಧಪ್ಪ ಕಂಬಳಿಯವರ ಹೆಸರಿಡಬೇಕು” ಎಂದು ಎಲ್ಲರ ಪರವಾಗಿ ಬೇಡಿಕೆಯನ್ನಿತ್ತರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, “ಸರ್ ಸಿದ್ದಪ್ಪ ಕಂಬಳಿಯವರಿಗೆ ಬಸವಣ್ಣನವರ ವಿಚಾರಗಳು ಬಹಳಷ್ಟು ಹತ್ತಿರವಾಗಿದ್ದವು. ಕಂಬಳಿ ಸಿದ್ದಪ್ಪನವರು ಜಾತ್ಯಾತೀತರಾಗಿ ಬದುಕಿದವರು. ಅವರೊಬ್ಬ ಅದ್ಭುತ ವೈಚಾರಿಕ ಚಿಂತಕರೂ ಅಗಿದ್ದರು. ಅಂತಹ ಮಹಾನ್ ಚೇತನವನ್ನು ಗುರುತಿಸದೆ ಮತ್ತೊಬ್ಬರ ಸಾಧನೆಯ ಬಗ್ಗೆ ಮಾತ್ರ ಹೇಳುತ್ತ ಕುಳಿತಿರುವುದು ವಿಷಾಧನೀಯ. ಸರ್ ಸಿದ್ದಪ್ಪ ಕಂಬಳಿಯವರು, ಸಿದ್ಧಾರೂಢರು, ಛತ್ರಪತಿ ಶಾಹೂ ಮಹಾರಾಜರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆಲ್ಲ ಆದರ್ಶವಾಗಬೇಕು. ಗತಕಾಲದ ಆ ಇತಿಹಾಸವನ್ನು ತಿಳಿಯುವಲ್ಲಿ ನಾವೆಲ್ಲ ಮುಂದೆ ಹೆಜ್ಜೆ ಹಾಕಬೇಕಿದೆ. ಹುಬ್ಬಳ್ಳಿಯ ಕಾನೂನು ಯೂನಿವರ್ಸಿಟಿಗೆ ಸರ್ ಸಿದ್ದಪ್ಪ ಕಂಬಳಿಯವರ ಹೆಸರಿಡಲು ಪ್ರಾಮಾಣಿಕವಾಗಿ ಕಾರ್ಯೋನ್ಮುಖನಾಗುತ್ತೇನೆ” ಎಂದು ಆಶ್ವಾಸನೆ ನೀಡಿದರು.