ಬಿಜೆಪಿ ಶಾಸಕ ವಿರುದ್ದ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯರನ್ನು ರಸ್ತೆ ಮೇಲೆ ಓಡಾಡಲು ಅವಕಾಶ ಕೊಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ಹೆಸರು ಪ್ರಸ್ತಾಪಿಸದೇ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಪರಿಶೀಲನಾ ಅಭಿಯಾನದಲ್ಲಿ ಮಾತನಾಡಿ, ʼಬಿಜೆಪಿ ಕಾರ್ಯಕರ್ತರು ಅಧಿಕಾರ ಇಲ್ಲದಿರುವಾಗಲೇ ಹೆದರಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬರುವ ಈ ಹೊತ್ತಿನಲ್ಲಿ ಇಂತಹ ಪುಡಾರಿಗಳಿಗೆಲ್ಲ ನಾವು ಹೆದರಲ್ಲ. ನಿಮ್ಮ ಜೊತೆ ನಾನು ಹಾಗೂ ಪಕ್ಷ ಇದೆ, ನೀವು ಧೈರ್ಯದಿಂದ ಇರಬೇಕುʼ ಎಂದು ಕಿಡಿಕಾರಿದರು.
ʼಅಧಿಕಾರ ಶಾಶ್ವತ ಎನ್ನುವ ದುರಹಂಕಾರದಲ್ಲಿ ಮಾತನಾಡಿದ್ದಾರೆ. ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ. ನಮ್ಮ ಕಾರ್ಯಕರ್ತರೇನು ಬಳೆ ತೊಟ್ಟುಕೊಂಡು ನಿಂತಿಲ್ಲ. ಅಧಿಕಾರ ಶಾಶ್ವತ ಅಲ್ಲ ಎನ್ನುವುದನ್ನು ನೆನಪು ಮಾಡಿಕೊಡಬೇಕು. ದುರಹಂಕಾರದಲ್ಲಿ ಮಾತನಾಡಿದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡೋಣʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೃದಯಘಾತದಿಂದ ಕರ್ತವ್ಯ ನಿರತ ಎಸ್ಡಿಎ ಸಾವು
ಸೆ.7ರಂದು ನೂತನ ಬೀದರ್ ಸಂಸದರ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಹುಮನಾಬಾದ್ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ವಿರುದ್ಧ ಸಹೋದರ ಸಂಬಂಧಿ ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ಅವರು ‘ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿಸುತ್ತೇನೆ, ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬೀಸಾಕುತ್ತೇನೆʼ ಎಂದು ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಕಾಂಗ್ರೆಸ್ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.