ಭಾಲ್ಕಿ ಚನ್ನಬಸವಾಶ್ರಮದಲ್ಲಿ ಡಿ.22 ರಂದು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 134ನೇ ಜಯಂತೋತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಡಾ.ಬಸವಲಿಂಗಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಉಭಯ ಶ್ರೀಗಳು ಮಾತನಾಡಿದರು.
ಡಾ. ಚನ್ನಬಸವ ಪಟ್ಟದ್ದೇವರ ಜಯಂತೋತ್ಸವ ಅಂಗವಾಗಿ ಈಗಾಗಲೇ ಅವರ ಜನ್ಮಸ್ಥಳ ಕಮಲನಗರದಿಂದ ಭಾಲ್ಕಿಗೆ ಪಾದಯಾತ್ರೆ ಮೂಲಕ ಬಸವ ಜ್ಯೋತಿ ತರಲಾಗಿದೆ. ಶರಣತತ್ವ ದರ್ಶನ ಪ್ರವಚನ ಆರಂಭಗೊಂಡಿದೆ. ವಿವಿಧ ಸ್ಪರ್ಧೆಗಳು ಏರ್ಪಡಿಸುವ ಮೂಲಕ ಪಟ್ಟದ್ದೇವರ ಜಯಂತಿ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದಾರೆ. ನಿಡಸೋಸಿ ಜಗದ್ಗುರು ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವಿ.ಸಿದ್ಧರಾಮಣ್ಣ ಶರಣರು ಸಮ್ಮುಖ ವಹಿಸುವರು.
ಅಂದು ಬೆಳಿಗ್ಗೆ 6ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದ ವರೆಗೆ ಬಸವಪ್ರಭಾತ ಫೇರಿ ನಡೆಯಲಿದೆ. 7ಕ್ಕೆ ಷಟ್ಸ್ಥಲ ಧ್ವಜಾರೋಹಣ ನೆರವೇರುವುದು. 7.30ಕ್ಕೆ ವಚನಾಭಿಷೇಕ ಜರುಗಲಿದೆ. 10ಕ್ಕೆ ಪಟ್ಟದ್ದೇವರ ಮೂರ್ತಿ ಅನಾವರಣ, 10.30 ಗಂಟೆಗೆ ತೊಟ್ಟಿಲು ಕಾರ್ಯಕ್ರಮ, 11ಕ್ಕೆ ವೇದಿಕೆ ಕಾರ್ಯಕ್ರಮ, ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಸಾಧಕರಿಗೆ ಸನ್ಮಾನ, ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ಡಾ.ಚನ್ನಬಸವ ಪಟ್ಟದ್ದೇವರು 109 ವರ್ಷಗಳ ಕಾಲ ಗಂಧದಂತೆ ಬದುಕು ಸವೆದು ಈ ಭಾಗದ ಬೆಳವಣಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಪೂಜ್ಯರ ಜಯಂತೋತ್ಸವ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಧ್ಯದಲ್ಲಿ ವೈಭವದಿಂದ ನೆರವೇರಿಸಲು ಸಿದ್ಧತೆ ಪೂರ್ಣಗೊಂಡಿವೆ” ಎಂದರು.
ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿ ಪ್ರದಾನ :
ಪಟ್ಟದ್ದೇವರ ಧ್ಯಾನ ಮಂದಿರದಲ್ಲಿ ಸ್ಥಾಪನೆ ಮಾಡಿರುವ ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ನಿಡಸೋಸಿ ಪೂಜ್ಯರು ಅನಾವರಣಗೊಳಿಸಲಿದ್ದಾರೆ. 2023ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಕಾಯಕ ಪ್ರಶಸ್ತಿಯನ್ನು ಬೀದರ್ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಉಪನ್ಯಾಸಕ ಶಿವಶರಣಪ್ಪ ಹುಗ್ಗೆ ಪಾಟೀಲ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಂಎಲ್ಸಿ ರಘುನಾಥ ಮಲ್ಕಾಪೂರೆ ಬಸವ ಗುರುವಿನ ಪೂಜೆ ನೆರವೇರಿಸುವರು. ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ ಅನುಭಾವ ನೀಡಲಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸುವರು.ನಾರಂಜಾ ಸಹಕಾರ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಪ್ರಸನ್ನಕುಮಾರ ಚೌಕಿಮಠ, ರಾಜೇಂದ್ರಕುಮಾರ ಗಂದಗೆ, ಬಾಬು ವಾಲಿ, ಶಕುಂತಲಾ ಬೆಲ್ದಾಳೆ, ನೀಲಮ್ಮ ವಿಕೆ ಪಾಟೀಲ್, ಚನ್ನಬಸವಣ್ಣ ಬಳತೆ ಸೇರಿದಂತೆ ಪೂಜ್ಯರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಹಲ್ಲೆ; ಶಿಕ್ಷಕನ ಬಂಧನ
ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪದ ನಂತರ ಮಹಾಕ್ರಾಂತಿ ನಾಟಕ ಪ್ರದರ್ಶನಗೊಳ್ಳಲಿದೆಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.