ಅಫಜಲಪುರದ ರಂಗ ಸಂಗ ಬಳಗ ಸಹಯೋಗದಲ್ಲಿ ಮೈಸೂರಿನ ನಿರ್ದಿಗಂತ ತಂಡ ಪ್ರಸ್ತುತ ಪಡಿಸಿರುವ ʼತಿಂಡಿಗೆ ಬಂದ ತುಂಡೇರಾಯʼ ನಾಟಕವು ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡಿತು.
ಪೌರಕಾರ್ಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಚಲವಾದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼರಂಗಭೂಮಿಯ ವಿಭಿನ್ನ ಆಯಾಮಗಳನ್ನು ತಾಲೂಕಿಗೆ ಪರಿಚಯಿಸುವ ಉದ್ದೇಶವಿರುವ ರಂಗ ಸಂಗ ಬಳಗದ ಈ ವಿಭಿನ್ನ ಪ್ರಯತ್ನ ಶ್ಲಾಘನೀಯ. ನಾಡಿನ ಇತಿಹಾಸ, ಕಲೆ, ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುವ ಹಾಗೂ ಸೌಹಾರ್ದ ಸಮಾಜ ನಿರ್ಮಾಣ ಮಾಡುವ ಕಥೆಗಳಿರುವ ನಾಟಕಗಳು ಇನ್ನೂ ಹೆಚ್ಚು ಪ್ರದರ್ಶನವಾಗಲಿʼ ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಕ ಡಿ.ಎಂ.ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ, ʼಅಫಜಲಪುರ ತಾಲೂಕಿನ ಹವ್ಯಾಸಿ ಹೊಸ ಅಲೆಯ ನಾಟಕ ಪ್ರದರ್ಶನದ ಇತಿಹಾಸವನ್ನು ಹೇಳಿದರು. 1992ರಲ್ಲಿ ನೀನಾಸಂ ತಂಡದ ‘ಹೂ ಹುಡುಗಿ’ ‘ದ್ಯಾವನೂರು’ ನಾಟಕವನ್ನು ಪ್ರದರ್ಶಿಸಲಾಗಿತ್ತು. ಇದರೊಂದಿಗೆ ಆಟ – ಮಾಟ ತಂಡದ ಮತ್ತು ಶಿವಸಂಚಾರ ತಂಡದ ಹಲವಾರು ನಾಟಕಗಳನ್ನು ನಮ್ಮಲ್ಲಿ ಪ್ರದರ್ಶನ ಏರ್ಪಡಿಸಿತ್ತು. ಈ ರೀತಿಯ ಪ್ರಯತ್ನಗಳಿಂದಾಗಿ ಅಫಜಲಪುರದ ಅನಿಲ ರೇವೂರ್, ಚಿಂಚೋಳಿ ಗ್ರಾಮದ ಗಂಗೂಬಾಯಿ ಇಂತಹ ಹಲವಾರು ಕಲಾವಿದರು ಇಂದು ರಂಗ ಭೂಮಿ ಮತ್ತು ಚಿತ್ರರಂಗಗಳಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆʼ ಎಂದು ತಿಳಿಸಿದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ಬಗಲಿ ಮಾತನಾಡಿ, ʼನಮ್ಮ ತಾಲೂಕಿನಲ್ಲಿ ಇಂತಹ ವಿಭಿನ್ನ ಪ್ರಯತ್ನಗಳು ಅಪರೂಪವಾಗಿ ನಡೆಯುತ್ತವೆ. ಕಲ್ಯಾಣ ಕರ್ನಾಟಕದಲ್ಲಿ ಇಂತಹ ಹೊಸ ಅಲೆಯ ನಾಟಕಗಳು ಮತ್ತು ಕಲಾವಿದರನ್ನು ಬೆಳೆಸುವ ಅವಶ್ಯಕತೆ ಇದೆ. ಆ ಪ್ರಯತ್ನ ರಂಗ ಸಂಗ ಬಳಗ ಮಾಡುತ್ತಿರುವುದು ಸಂತೋಷದಾಯಕʼ ಎಂದರು.
ಈ ಸುದ್ದಿ ಓದಿದ್ದೀರಾ? ಅಕ್ರಮ ಪಡಿತರ ವಿರುದ್ಧ ಕಾರ್ಯಾಚರಣೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ : ಸಚಿವ ಕೆ ಎಚ್ ಮುನಿಯಪ್ಪ
ಕಾರ್ಯಕ್ರಮದಲ್ಲಿ ಪ್ರಮುಖರಾದ ಬೀರಣ್ಣ ಪೂಜಾರಿ ಕನಕ, ಶ್ರೀಮಂತ ಬಿರಾದಾರ್, ರವಿ ಗೌರ್, ರಾಜು ಆರೇಕರ್, ಗೌತಮ ಸಕ್ಕರಗಿ, ಶರಣ ಬಸು ಹೊಸಮನಿ ಸದಾಶಿವ ಮೇತ್ರಿ, ಸಾದಿಕ್ ನಾಗೂರ್, ಬಸವರಾಜ್ ಕೆಂಗನಾಳ್, ಶ್ರೀಕಾಂತ್ ಕಾಚಾಪೂರ್, ಬಿ.ಎಂ.ರಾವ್, ಶಾಂತರಸ ಹೊಸ್ಮನಿ, ಅಬ್ಬಾಸಲಿ ಸದಾಫ್, ರವಿಚಂದ್ರ ಅತನೂರ, ಪ್ರಭಾವತಿ ಮೇತ್ರಿ, ರಾಹುಲ್ ಸಿಂಗೆ, ಹಿರಗಪ್ಪ ಜಿಡ್ಡಿಮನಿ ಬಾಬು ನಡುವಿನಕೇರಿ ಸೇರಿದಂತೆ ಇತರರಿದ್ದರು.