ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ರಾಯಪ್ಪನಪಾಳ್ಯ ರಸ್ತೆಯಲ್ಲಿರುವ ದಕ್ಕಲಿಗ ಅಲೆಮಾರಿ ಜನಾಂಗದ ಗಾಂಧಿನಗರಕ್ಕೆ ಮಂಗಳವಾರ ಭೇಟಿಕೊಟ್ಟ ತಹಶೀಲ್ದಾರ್ ಮತ್ತು ತಾಲೂಕು ಆಡಳಿತಾಧಿಕಾರಿಗಳ ತಂಡ, ಅಲ್ಲಿನ ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಶೌಚಾಲಯ, ಆಧಾರ್ ಕಾರ್ಡ್, ಪಡಿತರ ಚೀಟಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವ ಸಲುವಾಗಿ ತಹಶೀಲ್ದಾರ್ ಕೆ ಪುರಂದರ ಅವರು, ಪುರಸಭೆ ಮುಖ್ಯಾಧಿಕಾರಿ ಪಿ ಮಂಜಮ್ಮನವರಿಗೆ ಹಲವು ಸೂಚನೆಗಳನ್ನು ನೀಡಿದರು.
ಅಲೆಮಾರಿ ಜನಾಂಗದ ಸಮಸ್ಯೆಗಳ ಬಗ್ಗೆ ಈ ದಿನ.ಕಾಮ್ ಇತ್ತೀಚೆಗೆ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಶೌಚಾಲಯವಿಲ್ಲದೆ ಬಯಲ ಶೌಚಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆಯಿಂದ ನಿತ್ಯ ಹಿಂಸೆಪಡುತ್ತಿರುವ ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಮುಖ್ಯವಾಗಿ ಚರ್ಚಿಸಿ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಹಶೀಲ್ದಾರ್ ಮುಖ್ಯಾಧಿಕಾರಿಗೆ ಸೂಚಿಸಿದರು.
ಆಧಾರ್ ಕಾರ್ಡ್ ಹೊಂದಿಲ್ಲದವರು ಅಥವಾ ಕಳೆದುಕೊಂಡಿರುವವರ ಪಟ್ಟಿ ಮಾಡಿ ಅವರಿಗೆ ಶೀಘ್ರವೇ ಆಧಾರ್ ಕಾರ್ಡ್ ಒದಗಿಸಿಕೊಡುವಂತೆ ಸೂಚಿಸಲಾಯಿತು. ಮಕ್ಕಳು ಮತ್ತು ಮಹಿಳೆಯರ ಸುರಕ್ಷೆ ಹಾಗೂ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಯಿತು. ಪಡಿತರ ಮತ್ತು ಹಸಿವುಮುಕ್ತ ಅಲೆಮಾರಿ ಕಾಲೊನಿಗಾಗಿ ಕ್ರಮಗಳನ್ನು ವಹಿಸಲು ನಿರ್ದೇಶನಗಳನ್ನು ನೀಡಲಾಯಿತು.

ಈ ದಿನ.ಕಾಮ್ಗೆ ವರದಿ ಬರೆಯುವ ಸ್ಥಳೀಯ ಪತ್ರಕರ್ತರ ಒತ್ತಾಸೆಗೆ ಮಣಿದು ಕಳೆದ ನವೆಂಬರ್ 30ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿಯವರು, ಅಲೆಮಾರಿಗಳ ಗಾಂಧಿನಗರ ಕಾಲೊನಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ತಾಲೂಕು ಆಡಳಿತಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಹೋಗಿದ್ದರು.
ಅಲ್ಲಿನ ನಿವಾಸಿಗಳ ಕುಂದು-ಕೊರತೆ ಪರಿಹರಿಸಲು ಶೀಘ್ರವೇ ಜನಸಂಪರ್ಕ ಸಭೆ ನಡೆಸಿ ವರದಿ ಕಳಿಸಿಕೊಡಿ ಎಂದು ತಾಲೂಕು ಆಡಳಿತಕ್ಕೆ ತಾಕೀತು ಮಾಡಿ ಹೋಗಿದ್ದರು. ಅದರ ಪರಿಣಾಮವಾಗಿ, ಅಲೆಮಾರಿ ಜನಾಂಗದವರ ಕುಂದು-ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಅಲೆಮಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬದುಕುವ ಹಕ್ಕು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಕಾರ್ಯಗಳನ್ನು ಜಾರಿ ಮಾಡುವತ್ತ ತಾಲೂಕು ಆಡಳಿತ ಮುನ್ನಡೆಯುತ್ತಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹುಳಿಯಾರು ಕೆರೆ-ದಂಡೆ ನಿವಾಸಿಗಳು ಮತ್ತು ಗಾಂಧಿನಗರ ಕಾಲೊನಿಯ ಅಲೆಮಾರಿಗಳ ಕುಂದುಕೊರತೆ ಬಗ್ಗೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಬೇಗನೇ ಇಲ್ಲಿನ ಅಲೆಮಾರಿಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಶೀಲ್ದಾರ್ ಕೆ ಪುರಂದರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗಾಂಧಿನಗರ ಅಲೆಮಾರಿ ಜನಾಂಗದ ಕುಂದುಕೊರತೆ ನಿವಾರಣೆಯ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ಗಾಂಧಿನಗರ ಕಾಲೊನಿಯ ಅಲೆಮಾರಿಗಳು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲೂಕು ಅಧ್ಯಕ್ಷ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸಂಚಲನ, ಚಿಕ್ಕನಾಯಕನ ಸೀಮೆಯಿಂದ

