ಸಂವಿಧಾನವನ್ನು ಜನಪದರ ಬಾಯಲ್ಲಿ ಹೇಳುವಂತೆ ಆಗಬೇಕು. ಆಗ ಇಡೀ ಜನರೇ ಸಂವಿಧಾನವನ್ನು ರಕ್ಷಿಸುತ್ತಾರೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸಂವಿಧಾನಕ್ಕಾಗಿ ನಾವು ಹಾಗೂ ಓ ಕೀರ್ತಿ ಪ್ರತಿಷ್ಠಾನ ಗೊಜನೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಅರಿವಿನ ಯಾನ, ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಮುದಾಯದತ್ತ ಸಂವಿಧಾನ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಡ ಕುಟುಂಬದ ಹೆಣ್ಣು ಮಗಳೊಬ್ಬಳು ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದಾಳೆಂದರೆ, ಅದು ಸಂವಿಧಾನ. ಇದರಲ್ಲಿ ಗಂಡಸರಿಗೆ ಹೆಂಗಸರಿಗೆ ಅಷ್ಟೇ ನ್ಯಾಯ ಒದಗಿಸುತ್ತಿಲ್ಲ. ಸಕಲ ಜೀವ ರಾಶಿಗಳಿಗೂ ಕೂಡ ನ್ಯಾಯ ಒದಗಿಸುವಂತಹದ್ದು ಎಂದು ಹೇಳಿದರು.
“ಈ ದೇಶದಲ್ಲಿ ಹಿಂದೆ ಭೂಮಿ ಇರಬೇಕಿತ್ತು. ಭೂಮಿ ಭೂ ಮಾಲೀಕರ ಒಡೆತನದಲ್ಲಿತ್ತು. ಪಾಳೆಗಾರರು, ಇನಾಮದಾರರು ಇದ್ದರು. ಸಂವಿಧಾನ ಬಂದ ಮೇಲೆ ಇವೆಲ್ಲವುಗಳು ರದ್ದಾಗಿ ಭೂಮಿಯನ್ನು ಎಲ್ಲ ಜನರಿಗೂ ಹಂಚಿದರು. ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆ ಆಯಿತೆಂದರೆ ಅದು ಸಂವಿಧಾನದನ ಮೂಲಕ” ಎಂದು ಹೇಳಿದರು.
“ಈ ದೇಶದ ಅನಕ್ಷರಸ್ಥ ಜನರನ್ನು ಕೇಳಿ ರಾಮಾಯಣ ಮಹಾಭಾರತ ಕಥೆ ಹೇಳುತ್ತಾರೆ. ಆದರೆ ಸಂವಿಧಾನವನ್ನ ಯಾಕೆ ಹೇಳುತ್ತಿಲ್ಲ. ಅದನ್ನು ನೀವು ಸರಿಯಾಗಿ ಅರಿತುಕೊಂಡಾಗ ಮಾತ್ರ ಸಾಧವಾಗುತ್ತದೆ. ಭಾರತದ ಜಾತಿ ವ್ಯವಸ್ಥೆಯಲ್ಲಿ ಎಲ್ಲ ಮಹಿಳೆಯರಿಗೆ ಅವಕಾಶ ಮಾಡಿ ಕೊಟ್ಟಿರಲಿಲ್ಲ. ಕಟ್ಟ ಕಡೆಯ ಸಮುದಾಯದ ಮಹಿಳೆ ಅಧಿಕಾರ ಪಡೆಯುವಂತಿರಲಿಲ್ಲ. ದೂರ ಇರಬೇಕಿತ್ತು. ಆದರೆ ಸಂವಿಧಾನದಿಂದ ಇಂದು ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿ ಆಗಿದ್ದಾರೆಂದರೆ ಅದು ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ” ಎಂದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಅವರು, “ಪ್ರಧಾನಮಂತ್ರಿ, ಮುಖ್ಯಮಂತ್ರಿ, ಅಧ್ಯಕ್ಷರು ದೊಡ್ಡವರು ಎಂದು ತಿಳಿದಿದ್ದಿರಿ, ಅವರು ದೊಡ್ಡವರಲ್ಲ, ಪ್ರಜೆಗಳು ದೊಡ್ಡವರು, ಅಂದ್ರ ನೀವು ದೊಡ್ಡವರು. ಪ್ರಧಾನಮಂತ್ರಿ ಮುಖ್ಯಮಂತ್ರಿ ಜನ ಪ್ರತಿನಿಧಿಗಳ ಕೊರಳ ಪಟ್ಟಿ ಹಿಡಿದು ಪ್ರಶ್ನಸುವ ಅಧಿಕಾರ ಕೊಟ್ಟಿದೆ ಎಂದರೆ ಅದು ಸಂವಿಧಾನ. ಆದರೆ ನೀವು ಪ್ರಶ್ನೆ ಮಾಡುತ್ತಿಲ್ಲ ಅವರ ಹಿಂದೆ ಹೋಗುತ್ತಿದ್ದೀರಿ ಎಂದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನ ದಿನಾಚರಣೆ | ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಈ ಸಂವಾದ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ತಹಶೀಲ್ದಾರ್ ವಸುದೇವ ಸ್ವಾಮಿ, ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ, ಶಿವಾನಂದ ಮಾಳವಾಡ, ಮಂಜನಾಥ ಘಂಟಿ, ವಿಠಲ್ ನಾಯಕ, ಅಶೋಕ ಕಟ್ಟಿಮನಿ, ರವಿ ಪೂಜಾರ, ಮಹಾಂತೇಶ ಪಾಟೀಲ, ಕೆ.ಎಚ್.ಪಾಟೀಲ್, ದಲಿತ ಕಲಾ ಮಂಡಳಿ ಗೆಳೆಯರು, ಸಂವಿಧಾನ ನಾವು ಬಳಗ ಹಾಗೂ ರೈತರು ಇದ್ದರು.