ಕುವೆಂಪು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿ ರಚಿಸಿ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ ಎಂದು ಉದ್ಯಮಿ, ಹಾಸ್ಯ ಕಲಾವಿದ ಪ್ರಕಾಶ ದೇವಗಿರಿಕರ್ ಇಳಕಲ್ ಹೇಳಿದರು.
ಔರಾದ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಬೀದರ್ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಮಾನವ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕುವೆಂಪು ಅವರು ರಾಮಾಯಣ ದರ್ಶನಂ ಸೇರಿದಂತೆ ಮೇರು ಸದೃಶವಾದ ಮಹಾನ್ ಕೃತಿ ರಚನೆ ಜೊತೆಗೆ ಮೌಲ್ಯಯುತವಾದ ವಿಶ್ವ ಮಾನವ ತತ್ವ, ಸಂದೇಶ ನೀಡುವ ಮೂಲಕ ಜನ ಮಾನಸದಲ್ಲಿ ಇಂದಿಗೂ ಜೀವಂತವಾಗಿದ್ದಾರೆ” ಎಂದರು.
ಸಾಹಿತ್ಯ ಚಿಂತಕ, ಶಿಕ್ಷಕ ಜಗನ್ನಾಥ ಮೂಲಗೆ ಮಾತನಾಡಿ, “ಮನುಜಮತ – ವಿಶ್ವಪಥ ಕುವೆಂಪು ಅವರ ವಿಶ್ವಮಾನವ ಸಂದೇಶ, ಸಪ್ತ ಸೂತ್ರಗಳು, ಸರ್ವೋದಯ ಸಮನ್ವಯತೆ, ಪೂರ್ಣದೃಷ್ಠಿ, ಮನುಜಮತ, ವಿಶ್ವಪಥದ ಪಂಚಮಂತ್ರಗಳು ವಿಶ್ವ ಸಾಹಿತ್ಯಕ್ಕೆ ಕುವೆಂಪು ಅವರು ನೀಡಿದ ಅನರ್ಘ್ಯ ಕಾಣಿಕೆಯಾಗಿದೆ” ಎಂದರು.
ಕನ್ನಡಪರ ಹೋರಾಟಗಾರ ಬಸವರಾಜ ಶಟಕಾರ ಮಾತನಾಡಿ, “ವಿಶ್ವ ಮಾನವ ಸಂಕಲ್ಪ ಅಭಿಯಾನದ ಪರಿಕಲ್ಪನೆ ಅದ್ಭುತವಾಗಿದ್ದು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಜತೆಗೆ ಕುವೆಂಪು ಅವರ ಸಾಹಿತ್ಯದ ಕುರಿತು ಪರಿಚಯಿಸುವ ಪ್ರಯತ್ನ ಇದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣದಂತೆ ದೆಹಲಿಯಲ್ಲೂ ಕಾಂಗ್ರೆಸ್ ಬಿಜೆಪಿಯ ಟೈರ್ ಪಂಕ್ಚರ್ ಮಾಡಲಿದೆ: ರಾಹುಲ್ ಗಾಂಧಿ
ಸಮಾರಂಭದಲ್ಲಿ ಶಾಲೆಯ ಪ್ರಾಚಾರ್ಯ ಪ್ರಕಾಶ ಧೂಳಮಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಕ್ಷ್ಮೀ ಪ್ರಕಾಶ ದೇವಗಿರಿಕರ್, ಬಾಲಾಜಿ ಅಮರವಾಡಿ, ಗುರುನಾಥ ಕೋಟೆ, ಲಲಿತಾ ಮೂಲಗೆ, ಶಿಲ್ಪಾ ಶಟಕಾರ್, ಸಪನಾ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತರಿದ್ದರು.