ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನೀಡುವ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿ ಆಯ್ಕೆಯಾಗಿದೆ. ಕೊತಬಾಳ ಗ್ರಾಮ ಪಂಚಾಯತಿಯು 2014-15ರಲ್ಲಿಯೂ ಕೂಡ ಗಾಂಧಿ ಗ್ರಾಮ ಪುರಸ್ಕಾರ ಪಡೆದಿತ್ತು. ಇದೀಗ ಎರಡನೇ ಬಾರಿ ಗ್ರಾಮ ಪುರಸ್ಕಾರ ಕೊತಬಾಳ ಗ್ರಾಮ ಪಂಚಾಯತಿಗೆ ಲಭಿಸಿದೆ.
ಕೊತಬಾಳ ಗ್ರಾಮ ಪಂಚಾಯತಿಯು ಕೊತಬಾಳ ತಳ್ಳಿಹಾಳ ಮುಗಳಿ ಮೂರು ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯಿತಿ ಆಗಿರುತ್ತದೆ. ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ಹದಿನಾರು ಸದಸ್ಯರುಗಳಿಂದು ಕೊತಬಾಳ ಗ್ರಾಮದಲ್ಲಿ ಹತ್ತು ಸದಸ್ಯರು, ತಳ್ಳಿಹಾಳ ಗ್ರಾಮದಲ್ಲಿ ಎರಡು ಸದಸ್ಯರು ಹಾಗೂ ಮುಗಳಿ ಗ್ರಾಮದಲ್ಲಿ ನಾಲ್ಕು ಸದಸ್ಯರ ಬಲವಿದೆ.
ಒಟ್ಟು ಕೊತಬಾಳ ಗ್ರಾಮ ಪಂಚಾಯಿತಿ ಒಳಪಟ್ಟ ಗ್ರಾಮಗಳನ್ನು ಹಿಡಿದು 2485 ಕುಟುಂಬಗಳಿವೆ. ಕೊತಬಾಳ ಗ್ರಾಮದಲ್ಲಿ 1 ಪ್ರೌಢಶಾಲೆ, 2 ಪ್ರಾಥಮಿಕ ಶಾಲೆಗಳಿವೆ. ತಳ್ಳಹಾಳ ಗ್ರಾಮದಲ್ಲಿ ಒಂದು ಪ್ರಾಥಮಿಕ ಶಾಲೆ ಇದೆ. ಮುಗಳಿ ಗ್ರಾಮದಲ್ಲಿ 1 ಪ್ರೌಢಶಾಲೆ ಹಾಗೂ 1 ಪ್ರಾಥಮಿಕ ಶಾಲೆ ಇದ್ದು, ಪ್ರತಿ ಗ್ರಾಮದಲ್ಲಿಯೂ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ರೂಪರೇಷೆಗಳನ್ನು ನಿರ್ಮಿಸಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ನೂರರಷ್ಟು ಸಮರ್ಪಕವಾಗಿ ಜಾರಿಯಾಗಿದೆ. ಇದರಿಂದ ನಿರುದ್ಯೋಗ ವಲಸೆ ತಡೆಗಟ್ಟಿ ಜನರಿಗೆ ಉದ್ಯೋಗ ಕೊಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಕಸದ ಗಾಡಿ ಇದ್ದು, ಪ್ರತಿ ನಿತ್ಯ ಗ್ರಾಮದ ಕಸ ವಿಲೇವಾರಿ ಮಾಡಲಾಗುತ್ತದೆ. ಕೊತಬಾಳ ಗ್ರಾಮದಲ್ಲಿ ಶೇ.100ರಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದು, ಬಯಲು ಶೌಚ ಮುಕ್ತ ಗ್ರಾಮವೆಂಬ ಹೆಸರು ಪಡೆದಿದೆ. ನೀರಿನ ಕಂದಾಯ, ಮನೆಗಂದಾಯ ಶೇ.100ರಷ್ಟು ವಸೂಲಿಯಾಗಿದ್ದು ಸಾಧನೆಯಾಗಿದೆ.
ಗ್ರಾಮಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಗಳ ಆಯೋಜನೆ
ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮೂರು ಗ್ರಾಮಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಜನರಲ್ಲಿ ಜಾಗೃತಿ ಮೂಡಿಸಿದೆ. ಮಕ್ಕಳ ಸಭೆ, ತಾಯಂದಿರ ಸಭೆ, ಶುಶ್ರೂಶಕಿಯರ ಸಭೆ, ಮಹಿಳೆಯರ ಜಾಗೃತಿ ಸಭೆ, ವಿದ್ಯಾರ್ಥಿಗಳಿಗೆ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮ, ಗ್ರಾಂಥಾಲಯದಲ್ಲಿ ಜನರಿಗೆ ಓದುವ ಹವ್ಯಾಸ ಬೆಳಸಲು ಓದು ಬೆಳಕು ಕಾರ್ಯಕ್ರಮಗಳಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸಂಬಂಧಿಸಿದ ತಜ್ಞರು, ಸಂಪನ್ಮೂಲ ವ್ಯಕ್ತಿಗಳನ್ನು ಗ್ರಾಮಗಳಿಗೆ ಕರೆಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ.
ಮೂರು ಗ್ರಾಮಗಳಲ್ಲಿ ಕೆರೆಯ ಸಂರಕ್ಷಣೆ ಮಾಡಬೇಕೆಂದು ಕೆರೆ ಸುತ್ತ ಬೇಲಿ, ರಸ್ತೆಯುದ್ದಕ್ಕೂ ಗಿಡಗಳನ್ನು ನಟ್ಟಿದ್ದಾರೆ.
ಕೊತಬಾಳ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಭಾಜನ ಆಗಿದ್ದಕ್ಕೆ ಪಿಡಿಒ ಕಲ್ಪನಾ ಕಡಗದ ಈ ದಿನ.ಕಾಮ್ನೊಂದಿಗಿನ ಮಾತನಾಡಿ, “ಗ್ರಾಮದ ಜನರು, ಸದಸ್ಯರು, ಅಧ್ಯಕ್ಷರು ಸಹಕಾರ, ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಇದರಿಂದ ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಸಂತಸವಾಗಿದೆ. ಜೊತೆಗೆ ಇನ್ನಷ್ಟು ಜವಾಬ್ದಾರಿಯು ಹೆಚ್ಚಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಗ್ರಾ. ಪಂಚಾಯಿತಿ ಸದಸ್ಯನಿಂದ ವ್ಯಕ್ತಿಗೆ ಅವಮಾನ
ಗ್ರಾಮ ಪಂಚಾಯತಿ ಅಧ್ಯಕ್ಷೆ ಭೀಮವ್ವ ಪಕೀರಪ್ಪ ಗುಳಗುಳಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ತಿಳಿಸಲಾಗುತ್ತದೆ. ಗ್ರಾಮದಲ್ಲಿ ಶುದ್ಧ ನೀರು, ಬೀದಿದೀಪಗಳ ಅಳವಡಿಕೆ, ಗ್ರಾಮ ಸ್ವಚ್ಛತೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಾಗಿದೆ. ನಮ್ಮ ಕೆಲಸ ಅಭಿವೃದ್ಧಿಗಳಿಂದ ಗಾಂಧಿ ಗ್ರಾಮ ಪುರಸ್ಕಾರ ದೊರತಿರುವುದು ಖುಷಿಯಾಗಿದೆ” ಎಂದರು.