ಸರ್ಕಾರ ಜಾತಿಗೊಂದು ನಿಗಮ ಮಾಡಿದ್ದು, ದಲಿತರ ಅಭಿವೃದ್ಧಿ ಕುಂಠಿತವಾಗತೊಡಗಿದೆ. ಹಾಗಾಗಿ ಸರ್ಕಾರ ಜಾತಿಗೊಂದು ನಿಗಮ ಮಾಡದೆ, ಈಗ ಇರುವ ನಿಗಮಗಳಿಗೆ ಸರಿಯಾದ ಅನುದಾನ ಬಿಡುಗಡೆ ಮಾಡಿ ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಹೋರಾಟಗಾರ ಮುತ್ತು ಬಿಳಿಯಲಿ ಆಗ್ರಹಿಸಿದರು.
ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಮುಖಾಂತರ ಮಾತನಾಡಿದ ಇವರು, “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಇದರಿಂದ ದಲಿತರು ಭೂಒಡೆಯರಾದರು ಮತ್ತು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲಾಗಿದ್ದಾರೆ. ನಂತರ ಸರ್ಕಾರ ಜಾತಿಗೊಂದು ಅಭಿವೃದ್ಧಿ ನಿಗಮವನ್ನು ಪ್ರಾರಂಭ ಮಾಡುತ್ತ ಬಂದಿದ್ದು, ಆದಿ ಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಅಲೆಮಾರಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹೀಗೆ ಜಾತಿಗೊಂದು ನಿಗಮ ಮಾಡಿ ಪ್ರತಿಯೊಂದು ನಿಗಮಗಳಿಗೆ ಅಧ್ಯಕ್ಷರು, ಅವರಿಗೆ ಕೆಂಪು ಗೂಟದ ಕಾರು, ಅದಕ್ಕೊಬ್ಬರಂತೆ ಐಎಎಸ್ ಅಧಿಕಾರಿಗಳನ್ನು ನೇಮಿಸಿ ದಲಿತರನ್ನು ಮತ್ತಷ್ಟು ಆರ್ಥಿಕವಾಗಿ ಹಿಂದೆ ಉಳಿಯುವಂತೆ ಮಾಡಿದೆ” ಎಂದು ಹೇಳಿದರು.
ಗದಗ ಪಟ್ಟಣದಲ್ಲಿ ಹೋರಾಟಗಾರ ಮುತ್ತು ಬಿಳಿಯಲಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಡಾ. ಬಿ ಆರ್ ಅಂಬೇಡ್ಕರ್ ನಿಗಮವಿದ್ದಾಗ ಸುಮಾರು ಹನ್ನೊಂದು ಯೋಜನೆಗಳನ್ನು ಕೊಡುವುದರ ಮೂಲಕ ದಲಿತರನ್ನ ಸಬಲರನ್ನಾಗಿಸಲು ಸಾಧ್ಯವಿತ್ತು. ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಿವಿಧ ಯೋಜನೆಗಳ ಮೂವತ್ತು ಅರ್ಜಿಗಳಲ್ಲಿ ಕನಿಷ್ಠ ಇಪ್ಪತ್ತು ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿತ್ತು. ಆದರೆ ಈಗ ಜಾತಿಗೊಂದು ನಿಗಮಗಳಲ್ಲಿ ಕೇವಲ ನಾಲ್ಕು ಯೋಜನೆಗಳಿವೆ. ಆ ನಾಲ್ಕು ಯೋಜನೆಗಳನ್ನೇ ಸಮರ್ಪಕವಾಗಿ ಒದಗಿಸಲು ಅನುದಾನವಿಲ್ಲ. ಈಗ ಬಂದ ಮೂವತ್ತು ಅರ್ಜಿಗಳಲ್ಲಿ ಟಾರ್ಗೆಟ್ ನಿಗದಿ ಮಾಡಿ ಒಬ್ಬಿಬ್ಬರನ್ನು ಮಾತ್ರ ಆಯ್ಕೆ ಮಾಡಿ ದಲಿತರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ” ಎಂದರು.
“ಸುಮಾರು ಎರಡು ವರ್ಷಗಳಿಂದ ನಿಗಮಗಳಲ್ಲಿ ಯಾವುದೇ ಯೋಜನೆಗಳಿಲ್ಲ. ದಲಿತರು ಭೂಒಡೆತನ ಯೋಜನೆ ಅಡಿಯಲ್ಲಿ ಸುಮಾರು ಒಂದು ವರ್ಷಗಳಿಂದ ಅರ್ಜಿ ಸಲ್ಲಿಸಲು ಹೋದರೆ ಹೊಸ ಪ್ರಸ್ತಾವನೆಗೆ ಅವಕಾಶವಿಲ್ಲ. ಬೆಂಗಳೂರಿನ ಕೇಂದ್ರ ಕಚೇರಿಯವರು ನಮಗೆ ಮೌಖಿಕವಾಗಿ ತಿಳಿಸಿ ಯಾವುದೇ ಅರ್ಜಿಗಳನ್ನು ತೆಗೆದುಕೊಳ್ಳದಂತೆ ತಿಳಿಸಿದ್ದಾರೆಂದು ಉತ್ತರ ನೀಡುತ್ತಾರೆ. ಈಗಾಗಲೇ ಐದು ವರ್ಷದ ಅವಧಿಯ ಭೂಒಡೆತನ ಯೋಜನೆಯ ಗದಗ ಜಿಲ್ಲೆಯ ಸುಮಾರು 30 ಅರ್ಜಿಗಳ ಹಣ ಬಿಡುಗಡೆ ಆಗದೆ. ಹೊಲದ ಮಾಲೀಕರು ಭೂಮಿಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಾಜ್ಯಪಾಲರ ನಡೆ ಖಂಡಿಸಿ ಬೆಂಗಳೂರಲ್ಲಿ ಸೆ. 3ರಂದು ಪ್ರತಿಭಟನೆ: ದಸಂಸ ಮುಖಂಡ ಮರೆಪ್ಪ ಹಳ್ಳಿ
“ಜಿಲ್ಲಾ ಕೇಂದ್ರದ ಎಲ್ಲ ನಿಗಮಗಳಲ್ಲಿ ಕೆಲವರು ಸರ್ಕಾರಿ ನೌಕರರು, ಇನ್ನುಳಿದವರು ಗುತ್ತಿಗೆ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸುಮಾರು ಐದು ತಿಂಗಳಿನಿಂದ ವೇತನವಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೆಲವರು ಸರ್ಕಾರಿ ನೌಕರರು ಸರಿಯಾಗಿ ವೇತನ ಆಗದಿದ್ದಕ್ಕೆ ಕೆಲಸವನ್ನೇ ಬಿಟ್ಟೋಗಿದ್ದಾರೆಂದು ಜಿಲ್ಲಾ ವ್ಯವಸ್ಥಾಪಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲಿನ ಸರ್ಕಾರಿ ನೌಕರರ ಸ್ಥಿತಿಯೇ ಹೀಗಾದರೆ ಅಲ್ಲಿನ ದಿನಗೂಲಿ ನೌಕರರ ಸ್ಥಿತಿ ಹೇಗಿರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಸರ್ಕಾರ ದಲಿತರಿಗೆ ಮೀಸಲಾಗಿಟ್ಟ ಹಣವನ್ನು ದೋಚಿ ವಿವಿಧ ಕಾಮಗಾರಿಗಳಿಗೆ ತಮ್ಮ ಸರ್ಕಾರದ ಯೋಜನೆಗಳಿಗೆ ಬಳಸಿ ನಿಗಮಗಳಿಗೆ ಸರಿಯಾದ ಅನುದಾನ ಕೊಡದೆ ನಿಗಮಗಳೇ ಇನ್ನಷ್ಟು ಬಡವಾಗಿವೆ” ಎಂದು ಮುತ್ತು ಬಿಳಿಯಲಿ ಹೇಳಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ ಒಂದೇ ಇದ್ದಾಗ ಕೇಲವೇ ಕೆಲವು ಜಾತಿಗಳ ಮಾತ್ರ ಸೌಲಭ್ಯಗಳನ್ನು ಪಡೆಯುತ್ತಿದ್ದರು ಇವಾಗ ಜಾತಿ ಒಂದು ನಿಗಮ ಆದರಿಂದ ಆ ಜಾತಿಯವರಿಗೆ ಒಬ್ಬರಿಗೆ ಆದರೂ ಸರಕಾರಿ ಸೌಲಭ್ಯ ಸಿಗುತ್ತದೆ ಇಲ್ಲಾಂದರೆ ಕೆಲವು ಕೆವು ಜಾತಿಗಳು ಮುಂದುವರಿದ ಸೌಲಭ್ಯಗಳನ್ನು ಪಡೆದು 101ಜಾತಿಗಳಲ್ಲಿ ಉಳಿದರು ಅಲ್ಲಿ ಉಳಿಯಿತ್ತಿದ್ದರು ಕೇಲವೊಂದು ಸ್ಪರ್ಶ ಜಾತಿಗಳ ಮೊದಲೇ ಹಣವಂತರು ಹಣಕೊಟ್ಟು ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ ಉಳಿದ ಸಣ್ಣ ಪುಟ್ಟ ಜಾತಿಗಳು ಮುಂದು ಬರಬೇಕಾದರೆ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಾಗಲೇ ತಾನೇ ಮುಂದು ಬರಲು ಸಾಧ್ಯ ಸಮಾನ ಅವಕಾಶ ನೀಡಿ ಬೇಕು ಒಳಮೀಸಲಾತಿ ಬೇಕು ಅಂತಾ ಮೂವತ್ತು ವರ್ಷಗಳ ಕಾಲ ಹೋರಾಟ ಮಾಡಿದರು ಸುಪ್ರೀಂ ಕೋರ್ಟ್ ಆದೇಶ ಮಾಡದರು ಕ್ಯಾರ ಎನ್ನುದೆ ಭಂಡ ಸರಕಾರ ಗ್ಯಾರಂಟಿ ಯೋಜನೆಯಿಂದಾಗಿ ಹಣ ಸಮಸ್ಯೆ ಆಗಿದೆ ಸರಕಾರದ ತಪ್ಪು ಯೋಜನೆಯ ಬಗ್ಗೆ ದ್ವನಿ ಎತ್ತಬೇಕು ಅದು ಬಿಟ್ಟು ಜಾತಿಗೊಂದು ನಿಗಮದ ಬಗ್ಗೆ ಅಲ್ಲ ?